ಕರ್ನಾಟಕ

karnataka

By ETV Bharat Karnataka Team

Published : Dec 6, 2023, 9:43 PM IST

ETV Bharat / state

ಪಶು ಆಹಾರ ಮಾರಾಟ ದರ ಕಡಿಮೆ ಮಾಡುವ ಕುರಿತು ಪರಿಶೀಲನೆ: ಸಚಿವ ಕೆ.ವೆಂಕಟೇಶ್

ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್​ ಅವರು ಪಶು ಆಹಾರ ಮಾರಾಟ ದರ ಕಡಿಮೆ ಮಾಡುವುದರ ಬಗ್ಗೆ ಪ್ರಶ್ನೆ ಕೇಳಿದರು.

ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು: ಪಶು ಆಹಾರಕ್ಕೆ ಬಳಸುವ ಕಚ್ಚಾ ಪದಾರ್ಥಗಳ ದರ, ಲಭ್ಯತೆ ಹಾಗೂ ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಪಶು ಆಹಾರ ಮಾರಾಟ ದರವನ್ನು ಕಡಿಮೆ ಮಾಡುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.

ವಿಧಾನ ಪರಿಷತ್​ನಲ್ಲಿ ಇಂದು ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಹರೀಶ್ ಕುಮಾರ್​ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶು ಆಹಾರ ಮಾರಾಟ ದರವನ್ನು ಉದ್ದೇಶಪೂರ್ವಕವಾಗಿ ಹೆಚ್ಚಳ ಮಾಡಿಲ್ಲ. ಆಹಾರ ಬೆಲೆ ಏರಿಕೆಯಾದ ಕಾರಣ ಹೆಚ್ಚಳ ಮಾಡಲಾಗಿದೆ. ಸಾಮಾನ್ಯವಾಗಿ ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಸರಾಸರಿ 250 ಗ್ರಾಂ ಪಶು ಆಹಾರವನ್ನು ಬಳಸಬೇಕಾಗುತ್ತದೆ. ರಾಜ್ಯ ಸರ್ಕಾರವು ಹಾಲು ಉತ್ಪಾದಕರನ್ನು ಉತ್ತೇಜಿಸಲು 2023ರ ಅಕ್ಟೋಬರ್‌ನಿಂದ ಪ್ರತಿ ಲೀಟರ್ ಹಾಲು ಮಾರಾಟ ದರವನ್ನು ರೂ.3ಗಳಿಗೆ ಹೆಚ್ಚಿಸಿದ್ದು ಈ ಮೊತ್ತವನ್ನು ಉತ್ಪಾದಕರಿಗೆ ನೇರವಾಗಿ ಪಾವತಿಸಲು ಕ್ರಮವಹಿಸಲಾಗಿದೆ. ರೈತರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲು ಉತ್ಪಾದನೆಗೆ ನೀಡುವ ಪ್ರೋತ್ಸಾಹ ಧನವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ವಹಿಸುವುದಾಗಿ ಅವರು ಹೇಳಿದರು.

ಒಂದೂವರೆ ವರ್ಷದಲ್ಲಿ ಎರಡು ಬಾರಿಗೆ ಪಶು ಆಹಾರ ಮಾರಾಟ ದರ ಹೆಚ್ಚಿಗೆ ಮಾಡಿದ್ದರಿಂದ ಇದು ರೈತರಿಗೆ ಹೊರೆಯಾಗಿ ಪರಿಣಮಿಸುತ್ತಿದೆ ಎಂದು ಸದಸ್ಯರು ಪ್ರಶ್ನಿಸಿದರು. ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಿದಲ್ಲಿ ರೈತರ ಹಿತದೃಷ್ಟಿಯಿಂದ ನಾವು ಬೆಂಬಲ ಕೊಡುವುದಾಗಿ ಸದಸ್ಯೆ ತೇಜಸ್ವಿನಿ ತಿಳಿಸಿದರು.

ಅನುದಾನ ಲಭ್ಯತೆ ಆಧರಿಸಿ ರಸ್ತೆ ಸುಧಾರಣೆಗೆ ಕ್ರಮ- ಸಚಿವ ಸತೀಶ್​ ಜಾರಕಿಹೊಳಿ:ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ರಸ್ತೆ ಸುಧಾರಣೆ ಕಾರ್ಯವನ್ನು ಅನುದಾನ ಲಭ್ಯತೆ ಆಧರಿಸಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ವಿಧಾನ ಪರಿಷತ್‌ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಸದಸ್ಯರಾದ ಎಸ್.ವಿ.ಸಂಕನೂರ ಮತ್ತು ಎನ್.ರವಿಕುಮಾರ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಆಯ್ದ ಭಾಗಗಳಲ್ಲಿ ಭಾಗಶಃ ಹಾನಿಯುಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಖಾನಾಪುರದಿಂದ ನಂದಗಡ ಮುಖಾಂತರ ಹೋಗುವ ಹಳಿಯಾಳ ರಸ್ತೆಯ ಆಯ್ದ ಭಾಗಗಳಲ್ಲಿ ಆಗಿರುವ ಹಾನಿಗೆ 2023-24ನೇ ಸಾಲಿನ ರಾಜ್ಯ ಹೆದ್ದಾರಿ ವಾರ್ಷಿಕ ನಿರ್ವಹಣೆ ಆಡಿ ಬಿಡುಗಡೆಯಾದ ಅನುದಾನದಲ್ಲಿ 22 ಕಿಮಿ ರಸ್ತೆಯನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಗದಗ- ಲಕ್ಷ್ಮೇಶ್ವರ ಸವಣೂರ ರಸ್ತೆ ಸರಿಪಡಿಸಲು ಜಂಟಿ ಪರಿಶೀಲನೆ ನಡೆಸಿ ಕ್ರಮವಹಿಸುವುದಾಗಿ ಲೋಕೋಪಯೋಗಿ ಸಚಿವ ಜಾರಕಿಹೊಳಿ ಹೇಳಿದರು. ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ 5ರ ಭಾಗವಾಗಿರುವ ಗದಗ-ಲಕ್ಷ್ಮೇಶ್ವರ ಸವಣೂರ ರಸ್ತೆಯನ್ನು ಸಂಪೂರ್ಣವಾಗಿ ಸರಿಪಡಿಸಬೇಕು ಎನ್ನುವ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗದಗ- ಲಕ್ಷ್ಮೇಶ್ವರ ಸವಣೂರ ರಸ್ತೆ ಸುಧಾರಣೆಯನ್ನು ಕೆಆರ್‌ಡಿಸಿಎಲ್, ಕೆಷಿಪ್ ಸೇರಿದಂತೆ ವಿವಿಧ ಲೆಕ್ಕಶೀರ್ಷಿಕೆಗಳಡಿಯಲ್ಲಿ ನಿರ್ವಹಣೆ ಮಾಡಲಾಗಿದೆ. ರಸ್ತೆ ಸುಧಾರಣೆ ಹಿನ್ನೆಲೆಯಲ್ಲಿ ಸದಸ್ಯರೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಕ್ರಮ ವಹಿಸಲಾಗುವುದು ಎಂದರು.

ವಕ್ಪ್ ಆಸ್ತಿ ಅನಧಿಕೃತ ತೆರವಿಗೆ ಪ್ರತ್ಯೇಕ ಕೋಶ ರಚನೆ-ಸಚಿವ ಕೃಷ್ಣ ಭೈರೇಗೌಡ:ರಾಜ್ಯದಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳ ಅನಧಿಕೃತ ತೆರವಿಗೆ ಪ್ರತ್ಯೇಕ ಕೋಶ ತೆರೆಯುವ ಚಿಂತನೆ ಇದ್ದು, ವಕ್ಫ್ ಆಸ್ತಿ ತೆರವು ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸದಸ್ಯ ಎಸ್.ಕೆ.ಅಬ್ದಲ್ ಜಬ್ಬಾರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವರ ಪರವಾಗಿ ಉತ್ತರಿಸಿದರು. ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಅನಧಿಕೃತವಾಗಿ 1,669 ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲು ವಕ್ಫ್ ಕಾಯ್ದೆಯ ಕಲಂ-54ರ ಪ್ರಕಾರ ಇಲ್ಲಿಯವರೆಗೆ 3,720 ಪ್ರಕರಣಗಳನ್ನು ದಾಖಲೆ ಮಾಡಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಕರ್ನಾಟಕ ವಕ್ಫ್ ನ್ಯಾಯಾಧೀಕರಣಕ್ಕೆ ಒತ್ತುವರಿ ತೆರವು ಆದೇಶಕ್ಕಾಗಿ 1,458 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದುವರೆಗೆ ಒಟ್ಟು 319 ಎಕರೆ 9.5 ಗುಂಟೆ ಹಾಗೂ 128453.9 ಚದುರ ಅಡಿ ವಕ್ಫ್ ಆಸ್ತಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸಂಬಂಧಪಟ್ಟ ವಕ್ಫ್ ಸಂಸ್ಥೆಯ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ನುಡಿದರು.

ಬಿಎಂಟಿಸಿಗೆ ಮಾರ್ಚ್ ಅಂತ್ಯಕ್ಕೆ 921ಇವಿ ಬಸ್- ಸಚಿವ ರಾಮಲಿಂಗಾರೆಡ್ಡಿ:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2024ರ ಮಾರ್ಚ್ ಅಂತ್ಯಕ್ಕೆ 921 ಇವಿ ಬಸ್ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಚ್.ಎಸ್.ಗೋಪಿನಾಥ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇದುವರೆಗೆ ಸ್ಮಾರ್ಟ್ಸಿಟಿ ಯೋಜನೆಯಡಿ ಒಟ್ಟು 90 ವಿದ್ಯುತ್ ಚಾಲಿತ ಬಸ್‌ಗಳನ್ನು ಜಿಸಿಸಿ ಆಧಾರದ ಮೇಲೆ ಪಡೆದುಕೊಂಡಿದೆ. ಬಿಎಂಸಿಟಿಸಿಯಿಂದ ಪ್ರಸ್ತುತ ಈಗ ಒಟ್ಟು 15 ಬಸ್ ಘಟಕ/ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಸೌಲಭ್ಯಗಳನ್ನು ಸ್ಥಾಪಿಸಿ 390 ಇವಿ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಬಿಎಂಟಿಸಿಗೆ 150 ಕೋಟಿ ರೂ.ಗಳ ಅನುದಾನ ನೀಡಿದೆ ಎಂದು ವಿವರಿಸಿದರು.

ಸ್ತ್ರೀ ಶಕ್ತಿ ಯೋಜನೆ ಜಾರಿಯ ಬಗ್ಗೆ ಕೆ.ಎಸ್.ನವೀನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಶಕ್ತಿ ಯೋಜನೆಯು ಜಾರಿಯಾದ ನಂತರ ರಾಜ್ಯದ ರಸ್ತೆ ಸಾರಿಗೆ ನಿಗಮಗಳಲ್ಲಿ ಆದಾಯ ಹೆಚ್ಚಳವಾಗಿದೆ. ಶಕ್ತಿ ಯೋಜನೆ ಜಾರಿಯ ನಂತರ ಪ್ರತಿದಿನದ ಸರಾಸರಿಯ ಆದಾಯವು 2023-24ನೇ ಸಾಲಿನಲ್ಲಿ ಕರಾರಸಾರಿಗೆ ನಿಗಮದಲ್ಲಿ 12.57 ಕೋಟಿ ರೂ., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 5.39 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 6.60 ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 5.92 ಕೋಟಿ ರೂ.ನಷ್ಟು ಆಗಿರುತ್ತದೆ. ಶಕ್ತಿ ಯೋಜನೆ ಜಾರಿಯ ನಂತರ 108 ಕೋಟಿಗೂ ಆಧಿಕ ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದು, ಪ್ರತಿದಿನ 1.5 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಮತ್ತೀಗ ಹೊಸದಾಗಿ 5,500 ಹೊಸ ಬಸ್‌ಗಳ ಖರೀದಿಗೆ ಅನುಮತಿ ನೀಡಿದ್ದು, 9000 ಸಿಬ್ಬಂದಿಯ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅಧಿಕಾರಿಗಳು, ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ದ-ಎನ್.ಎಸ್.ಬೋಸರಾಜ:ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಕ್ಷಣೆ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರಾದ ಎನ್.ಎಸ್.ಬೋಸರಾಜು ಹೇಳಿದರು. ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 6ರಂದು ಶೂನ್ಯ ವೇಳೆಯಲ್ಲಿ ಮಾತನಾಡಿದ ಸದಸ್ಯರಾದ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಧಾರವಾಡ ಜಿಲ್ಲೆಯಲ್ಲಿ ಪಿಡಿಓ ಒಬ್ಬರು ಆರ್.ಟಿ.ಐ ಕಾರ್ಯಕರ್ತರೊಬ್ಬರಿಂದ ತೀವ್ರ ತೊಂದರೆ ಎದುರಿಸಿ ವಿಷ ಸೇವನೆ ಮಾಡಿ ಆಸ್ಪತ್ರೆ ಸೇರುವಂತಹ ಪರಿಸ್ಥಿತಿ ಬಂದೊದಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥ ಆರ್‌ಟಿಐ ಕಾರ್ಯಕರ್ತನ ಮೇಲೆ ಶಿಕ್ಷೆಯಾಗಿರುವುದಿಲ್ಲ. ಇಂತಹ ಕಿರುಕುಳ ಪ್ರಕರಣಗಳಿಂದ ಅಧಿಕಾರಿ ಸಿಬ್ಬಂದಿ ವರ್ಗದಲ್ಲಿ ದುಗುಡ ಮನೆ ಮಾಡಿದೆ ಎಂದು ಸಂಕನೂರ ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಪಿಡಿಓ ನಾಗರಾಜ ಗಿಣಿವಾಲ ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದ ಹಾಗೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಬಿಸಿಎಂ ವಸತಿ ನಿಲಯಗಳಲ್ಲಿ ಓದುವ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದುವರೆಗೆ ಸಂಭ್ರಮ ಕಿಟ್ ನೀಡಿರುವುದಿಲ್ಲ ಎಂದು ಕೇಶವ್ ಪ್ರಸಾದ್ ಅವರು, ವಿಕಲಚೇತನರ ಶಾಲೆಯ ಶಿಕ್ಷಕರಿಗೆ ಭದ್ರತೆ ಇಲ್ಲದಂತಾಗಿದೆ. ವಿಶೇಷಚೇತನರ ಶಾಲೆಗೆ ಮೂಲಭೂತ ಸೌಕರ್ಯದ ಕೊರತೆಯ ಕಾರಣ ಇಂತಹ ಶಾಲೆಗಳ ಶಿಕ್ಷಕರಾಗಲು ಹಿಂದೇಟು ಹಾಕುವಂತಹ ಸ್ಥಿತಿ ಎದುರಾಗಿದ್ದು, ವಿಶೇಷಚೇತನ ಶಿಕ್ಷಕರ ಬೇಡಿಕೆಗೆ ಸ್ಪಂದಿಸಬೇಕು ಎಂದು ಹೇಮಲತಾ ನಾಯಕ ಅವರು ಪ್ರಸ್ತಾಪಿಸಿದರು.

ಅಲ್ಲದೆ, ಮೈಸೂರ ಜಿಲ್ಲೆಯಲ್ಲಿ ಮೈಸೂರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಹಣ ಕಟ್ಟಿದ್ದರೂ ಮಾಜಿ ಸೈನಿಕರು, ಸ್ವಾತಂತ್ರ‍್ಯ ಹೋರಾಟಗಾರರಿಗೆ ನಿವೇಶನಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಮಂಜೇಗೌಡ ಅವರು, ಸ್ತ್ರೀ ಶಕ್ತಿ ಯೋಜನೆ ಜಾರಿ ಬಳಿಕ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಶೈಕ್ಷಣಿಕ ಪ್ರವಾಸಕ್ಕೆ ತೆರಳಲು ಬಸ್‌ಗಳ ಕೊರತೆಯಾಗಿದೆ ಎಂದು ಹರೀಶ್​ ಕುಮಾರ ಅವರು, ಬೆಂಗಳೂರಿನ ಕಲಾಸಿಪಾಳ್ಯ ಮತ್ತು ಕೆ.ಆರ್.ಮಾರುಕಟ್ಟೆ ಬಳಿಯಲ್ಲಿ ಪುಟ್‌ಪಾತ್ ತೆರವುಗೊಳಿಸಿ ಬೆಂಗಳೂರಿನ ಘನತೆ ಉಳಿಸಬೇಕು ಎಂದು ಟಿ.ಎ.ಶರವಣ ಅವರು, ಬಳ್ಳಾರಿ ಜಿಲ್ಲೆಯ ಕುರಗೋಡ ವಸತಿ ಶಾಲೆಗೆ ಮೂಲಭೂತ ಸೌಕರ್ಯಗಳ ಕೊರತೆಯಾಗಿದೆ ಎಂದು ಸತೀಶ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಪರೀಕ್ಷೆ ಬರೆದರೂ ಲೋಕಸೇವಾ ಆಯೋಗವು ಆಯ್ಕೆಪಟ್ಟಿಯನ್ನು ಪ್ರಕಟಿಸಲು ವಿಳಂಬ ಮಾಡಿ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯರಾದ ಶಶಿಲ್ ಜಿ ನಮೋಶಿ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.

ಇದನ್ನೂ ಓದಿ:ನೆನೆಗುದಿಗೆ ಬಿದ್ದಿರುವ ಕ್ರೀಡಾಂಗಣಗಳ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪೂರ್ಣ: ಸಚಿವ ಬಿ.ನಾಗೇಂದ್ರ

ABOUT THE AUTHOR

...view details