ಕರ್ನಾಟಕ

karnataka

ETV Bharat / state

ಮಚ್ಛೆ - ಹಲಗಾ ಬೈಪಾಸ್ ರಸ್ತೆಗೆ ವಿರೋಧ: ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ರೈತರು

ಮಚ್ಛೆ - ಹಲಗಾ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗಾಗಿ ರೈತರ ಮೇಲೆ‌ ದಬ್ಬಾಳಿಕೆ ಮಾಡುವ ಮೂಲಕ ಕೃಷಿ ಜಮೀನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿ ಮಚ್ಛೆ ಗ್ರಾಮದ ರೈತರು ಪ್ರತಿಭಟನೆ ನಡೆಸಿದ್ದಾರೆ.

By

Published : Feb 9, 2021, 3:51 PM IST

Updated : Feb 9, 2021, 4:23 PM IST

Belgavi
ಮಚ್ಛೆ-ಹಲಗಾ ಬೈಪಾಸ್ ರಸ್ತೆಗೆ ವಿರೋಧ

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ಭೂ ನಿಗಮವು ರಸ್ತೆ ನಿರ್ಮಾಣ ಕಾಮಗಾರಿಗಾಗಿ ರೈತರ ಮೇಲೆ‌ ದಬ್ಬಾಳಿಕೆ ಮಾಡುವ ಮೂಲಕ ಕೃಷಿ ಜಮೀನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿ ನಗರದ ಮಚ್ಛೆ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಮಚ್ಛೆ - ಹಲಗಾ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೃಷಿ ಜಮೀನು ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ರಾಷ್ಟ್ರೀಯ ಹೆದ್ದಾರಿ ಭೂ ನಿಗಮದಿಂದ ರೈತರ ಒಪ್ಪಿಗೆ ಪಡೆಯದೇ ಕಾಮಗಾರಿ ಕೆಲಸವನ್ನು ಆರಂಭಿಸುತ್ತಿದ್ದಾರೆ. ಈ ಭಾಗದಲ್ಲಿ 1,047 ರೈತರಿದ್ದು, ಎಲ್ಲರೂ ಅತಿಸಣ್ಣ ರೈತರು. ಕುಟುಂಬ ನಿರ್ವಹಣೆಗಾಗಿ ಇದೇ ಜಮೀನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಅಧಿಕಾರಿಗಳ ಕಿರಿಕಿರಿಯಿಂದ ಹಲವು ವರ್ಷಗಳಿಂದ ಹೋರಾಟ ಮಾಡಿ ರಸ್ತೆ ಕಾಮಗಾರಿಗೆ ಹೈಕೋರ್ಟ್‍ನಿಂದ ತಡೆಯಾಜ್ಞೆ ತರಲಾಗಿದೆ. ಆದರೂ ಇಂದು ನೂರಾರು ಪೊಲೀಸರೊಂದಿಗೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ, ಯಂತ್ರೋಪಕರಣಗಳ ಸಮೇತ ದಬ್ಬಾಳಿಕೆ ಮಾಡುವ ಮೂಲಕ ಕಾಮಗಾರಿಗೆ ಮುಂದಾಗಿದ್ದಾರೆ. ಇನ್ನು ಈ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಚ್ಛೆ-ಹಲಗಾ ಬೈಪಾಸ್ ರಸ್ತೆಗೆ ವಿರೋಧ

ಇನ್ನು ರಾಷ್ಟ್ರೀಯ ಹೆದ್ದಾರಿ ಭೂ ನಿಗಮದ ಅಧಿಕಾರಿಗಳನ್ನು ರೈತರು 'ಕೋರ್ಟ್ ತಡೆಯಾಜ್ಞೆ ಇರೋದು ನಿಮಗೆ ಗೊತ್ತಿಲ್ಲವೇ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ನಾವು ಕೋರ್ಟ್ ಆರ್ಡರ್ ತೆಗೆದುಕೊಂಡು ಬಂದಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದ್ಯಾವುದಕ್ಕೂ ಬಗ್ಗದ ರೈತರು ಪಟ್ಟು ಹಿಡಿಯುತ್ತಿದ್ದಂತೆ ತಬ್ಬಿಬ್ಬಾದ ಅಧಿಕಾರಿಗಳು ಎಸಿ ಅವರ ಸೂಚನೆಯಂತೆ ಕೆಲಸ ಆರಂಭಿಸಲು ಬಂದಿದ್ದೇವೆ ಎಂದಿದ್ದಾರೆ. ಈ ವೇಳೆ, ಅಜ್ಜಿಯೊಬ್ಬರು "ನೀವು ಕೆಲಸ ಆರಂಭಿಸುವುದಾದರೆ ನನ್ನ ಮಗ ಹಾಗೂ ನನ್ನನ್ನು ಜೆಸಿಬಿಯಿಂದ ನೆಲದೊಳಗೆ ಹಾಕಿ. ಎರಡು ವರ್ಷದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ" ಎಂದು ಕಣ್ಣೀರು ಹಾಕಿದರು‌.

ಸ್ಥಳದಲ್ಲೇ ಬಿಡುಬಿಟ್ಟಿರುವ ಪೊಲೀಸರು, ಕೋರ್ಟ್ ಆರ್ಡರ್ ಇದೇ ಎಂದು ಹೇಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆರ್ಡರ್ ಕಾಪಿ ಮಾತ್ರ ತೋರಿಸುತ್ತಿಲ್ಲ. ಇತ್ತ ರೈತರು ನಮ್ಮ ಜೀವ ಹೋದರೂ ಕೂಡ ಕೆಲಸ ಆರಂಭಿಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Last Updated : Feb 9, 2021, 4:23 PM IST

ABOUT THE AUTHOR

...view details