ಕರ್ನಾಟಕ

karnataka

By

Published : Dec 26, 2022, 4:37 PM IST

ETV Bharat / state

ಮೈಸೂರು ವಿವಿ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳಕ್ಕೆ ನಕಾರ: ಸದನದಲ್ಲಿ ಧರಣಿ

ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆ ವಿಚಾರವಾಗಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿಕೆ ಖಂಡಿಸಿ ವಿಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು.

question-and-answer-
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ

ಬೆಳಗಾವಿ/ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಹಣಕಾಸು ಸಮಿತಿ ಅತಿಥಿ ಉಪನ್ಯಾಸಕರಿಗೆ ಗೌರವ ಧನವನ್ನು ಮತ್ತೆ ಪರಿಷ್ಕರಿಸಲು ಸದ್ಯದ ಹಣಕಾಸು ಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ತಿಳಿಸಿದ್ದು, ಅದಕ್ಕೆ ಸರ್ಕಾರವೂ ಬದ್ದವಾಗಿದೆ ಎಂಬ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರ ಹೇಳಿಕೆ ಖಂಡಿಸಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ, ಕಾಂಗ್ರೆಸ್ ಸದಸ್ಯರೂ ಕೂಡಾ ಧರಣಿಗೆ ಸಾಥ್‌ ನೀಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಸೌಲಭ್ಯ ಕಲ್ಪಿಸುವ ಕುರಿತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ, ಮೌಲ್ಯಮಾಪನದ ವೇಳೆ ಅತಿಥಿ ಉಪನ್ಯಾಸಕರ ಇನ್ಸೆಂಟಿವ್​ಗೆ ವ್ಯವಸ್ಥೆ ಮಾಡಿಕೊಡುವ ಕುರಿತು ಗಮನ ಹರಿಸಲಾಗುತ್ತದೆ. ಮೈಸೂರು ವಿವಿ ವಿಚಾರದಲ್ಲಿ ಯುಜಿಸಿ ಮಾರ್ಗಸೂಚಿಗಿಂತಲೂ ಹೆಚ್ಚಿನ ಹಣವನ್ನು ಪ್ರತಿ ಗಂಟೆಗೆ ಕೊಡಲಾಗುತ್ತಿದೆ. ಬೇರೆ ಬೇರೆ ವಿವಿಗೂ ಹೋಲಿಸಿಕೊಳ್ಳಲಾಗುತ್ತಿದೆ.

900 ಅತಿಥಿ ಉಪನ್ಯಾಸಕರನ್ನು ವಿವಿಯಲ್ಲಿ ನೇಮಿಸಿಕೊಳ್ಳಲಾಗಿದೆ. ವಿವಿ ಹಣಕಾಸು ಸಮಿತಿಯಲ್ಲಿ ಅತಿಥಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಿಸಲು ಸಹಮತ ಕೊಟ್ಟಿಲ್ಲ. ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಸಮಿತಿ ಹೇಳಿದೆ. ಅದಕ್ಕೆ ನಾವು ಬದ್ದರಿದ್ದೇವೆ ಎಂದರು.

ಸಚಿವರು ನೀಡಿದ ಉತ್ತರಕ್ಕೆ ಸದಸ್ಯ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಪರಿಷ್ಕರಣೆ ಪರಿಶೀಲಿಸುವ ಭರವಸೆ ಸಿಗದ ಹಿನ್ನೆಲೆಯಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಈ ರೀತಿ ಸದನದಲ್ಲಿ ದಬಾವಣೆ ಮಾಡುವುದು ಸರಿಯಲ್ಲ ಎಂದರೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸರ್ಕಾರದಿಂದ ಉತ್ತರ ಬಾರದಿದ್ದಲ್ಲಿ ಇನ್ನೇನು ಮಾಡಬೇಕು ಎಂದು ಮರಿತಿಬ್ಬೇಗೌಡರನ್ನು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇದೇ ರೀತಿ ಉತ್ತರ ಕೊಡಿ ಎಂದು ಹೇಳಲಾಗಲ್ಲ. ಉತ್ತರ ಸರಿ ಇಲ್ಲ ಎಂದರೆ ಮತ್ತೊಮ್ಮೆ ಕೇಳಲಿ, ತಪ್ಪಿದ್ದರೆ ಅವರೊಂದಿಗೆ ಕುಳಿತು ಚರ್ಚಿಸಿಕೊಳ್ಳಲಿ ಎಂದು ಸಲಹೆ ನೀಡಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು. ಗೌರವ ಧನ ಪರಿಷ್ಕರಣೆ ಮಾಡಲ್ಲ ಎನ್ನುವ ಪದ ಬಳಕೆಗೆ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರೂ ಕೂಡ ಮರಿತಿಬ್ಬೇಗೌಡರನ್ನು ಬೆಂಬಲಿಸಿ ಸದನದ ಬಾವಿಗಳಿದು ಧರಣಿ ಮಾಡಿದರು.

ಎಲ್ಲ ವಿವಿಗಳ ಬೋಧಕ ಹುದ್ದೆಗಳ ಭರ್ತಿಗೆ ಕ್ರಮ:ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ ಇದರಿಂದ ಪಿಎಚ್​ಡಿ ಗೈಡ್​ಗಳ ಕೊರತೆಯೂ ತಗ್ಗಲಿದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮೈಸೂರು ವಿವಿಯಲ್ಲಿ ಪಿಎಚ್​ಡಿ ಗೈಡ್​ಗಳ ಕೊರತೆ ಕುರಿತು ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲ ವಿವಿಗಳಲ್ಲಿ ಖಾಲಿ ಹುದ್ದೆ ಭರ್ತಿಗೆ ಮುಂದಾಗಿದ್ದೇವೆ. ಉಪನ್ಯಾಸಕರು, ಪ್ರಾಧ್ಯಾಪಕರ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. ತ್ವರಿತವಾಗಿ ಭರ್ತಿ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಸರ್ಕಾರದ ವಿರುದ್ಧ 40 ಶೇ ಕಮಿಷನ್ ಆರೋಪ: ನಿಲುವಳಿ ಸೂಚನೆಗೆ ಮುಂದಾದ ಕಾಂಗ್ರೆಸ್

ABOUT THE AUTHOR

...view details