ಬೆಳಗಾವಿ: ಪ್ರತಿಬಾರಿ ನಮ್ಮ ಸಮಾಜದವರ ರಾಜಕೀಯ ಸಹಕಾರ ಪಡೆದು ನಮಗೆ ಚಿಪ್ಪನ್ನು ಕೊಡುತ್ತಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಜೈ ಪಂಚಮಸಾಲಿ, ರಾಜ್ಯದಲ್ಲಿ ನಾವೇ ಶಕ್ತಿಶಾಲಿ ಎಂದು ಜನರಲ್ಲಿ ಘೋಷಣೆ ಕೂಗಿಸಿ ಭಾಷಣ ಆರಂಭಿಸಿದರು. ನನ್ನ ತಮ್ಮ ಪರಿಷತ್ ಚುನಾವಣೆಗೆ ನಿಂತಾಗ ಎರಡು ಕ್ಷೇತ್ರಕ್ಕೆ (ಗೋಕಾಕ್, ಅರಭಾವಿ) ನನಗೆ ಬರಲು ಆಗಲಿಲ್ಲ ಕ್ಷಮೆ ಇರಲಿ. ಇಡೀ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಮತ ಪಡೆದು ನಿಮ್ಮ ಸಮಾಜದ ಕಿರಿಯ ಪುತ್ರ ಗೆದ್ದಿದ್ದಾನೆ.ಇಲ್ಲಿಯ ಜನರನ್ನು ನೋಡಿದ್ರೆ 440 ವೋಲ್ಟೇಜ್ ವಾತಾವರಣ ಇದೆ. ಬೇರೆ ಸಮಾಜಕ್ಕೆ ಅನ್ಯಾಯ ಮಾಡದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುತ್ತೇವೆ. ನಮ್ಮ ಸಮಾಜ ಇಂದು ಬಹಳಷ್ಟು ಜಾಗೃತವಾಗಿದೆ. ನಮ್ಮ ಸಮಾಜ ನಿಸ್ವಾರ್ಥತೆಯಿಂದ ಶ್ರಮಿಸಿದೆ. ಪ್ರತಿ ಬಾರಿ ನಮ್ಮ ಸಮಾಜದವರ ರಾಜಕೀಯ ಸಹಕಾರ ಪಡೆದು ನಮ್ಮನ್ನು ಕಡೆಗಣಿಸುತ್ತಾರೆ ಎಂದರು.
ಮೊನ್ನೆ ಅಧಿವೇಶನದಲ್ಲಿ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿದ್ರು. ಬೊಮ್ಮಾಯಿ ಸಾಹೇಬ್ರು 2ಎ ಮೀಸಲಾತಿ ಕೊಡ್ತೀವಿ ಅಂತಾ ಮಾತನ್ನು ಕೊಟ್ಟಿದ್ದಾರೆ. ಅತಿ ಶೀಘ್ರದಲ್ಲಿ ಸರ್ವಪಕ್ಷ ನಿಯೋಗದ ಸಭೆ ಕರೆದು ನಿರ್ಣಯ ತಗೊಳ್ಳಿ ಅಂತ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡುತ್ತೇನೆ. ಪ್ರತಿ ಕ್ಷೇತ್ರದಲ್ಲಿ ನಾವು 40 ಸಾವಿರ, 50 ಸಾವಿರ ಮತದಾರರು ಇದ್ದೇವೆ. ನಾವು ಬೆಣ್ಣೆ ಮಾಡಿ ಅದನ್ನು ಮಾರಿ ಮಜ್ಜಿಗೆ ಕುಡೀತಿವಿ. ಅಂತಹ ಮುಗ್ಧರು ನಮ್ಮ ಸಮಾಜದವರು. ಕಿತ್ತೂರು ರಾಣಿ ಚೆನ್ನಮ್ಮ ಜೊತೆ ಸಂಗೊಳ್ಳಿ ರಾಯಣ್ಣ ಬೇಕೆ ಬೇಕು. ಅನ್ಯ ಸಮಾಜದ ಜೊತೆ ಪಂಚಮಸಾಲಿ ಸಮಾಜ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಉಪ್ಪಾರ, ವಾಲ್ಮೀಕಿ, ಮುಸ್ಲಿಂ, ಅಂಬೇಡ್ಕರ್ ಸಮಾಜದ ಜೊತೆ ಉತ್ತಮ ಸಂಬಂಧವಿದೆ. ನಾವು ಬಸವಣ್ಣನ ಕುಲದವರು ಎಂದು ಹೇಳಿದರು.