ಬೆಳಗಾವಿ : ಲಿಂಗಾಯತ ಸಮುದಾಯದ ರಾಜಕೀಯ ಇತಿಹಾಸ ನೋಡಿದ್ರೆ ಸಮುದಾಯದ ಪರ ಧ್ವನಿ ಎತ್ತುವವರನ್ನು ಹತ್ತಿಕ್ಕುವ ಯತ್ನ ನಡೆದಿದೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಪರವಾಗಿ ಧ್ವನಿ ಎತ್ತುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಆದರೆ, ಹುಲಿ ಯಾವತ್ತಿದ್ದರೂ ಹುಲಿಯೇ, ಏನೇ ಮಾಡಿದರೂ ಮತ್ತೆ ಪುಟಿದೇಳುವ ಶಕ್ತಿ ಈ ಸಮಾಜದವರಿಗೆ ಇದೆ ಎಂದರು.
ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಲಿಂಗಾಯತ ಸಮುದಾಯದ ಪರ ಧ್ವನಿ ಎತ್ತಿದ ಮೇಲೆ ಫೈರ್ ಬ್ರ್ಯಾಂಡ್ ಆಗಿದ್ದಾರೆ. ಈ ಮೊದಲು ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿದ್ದ ಯತ್ನಾಳ್, ಇಂದು ಲಿಂಗಾಯತ ಫೈರ್ ಬ್ರ್ಯಾಂಡ್ ಆಗಿ ಜನಪ್ರಿಯ ಆಗಿದ್ದಾರೆ. ಯತ್ನಾಳ್ ಅವರನ್ನು ಬಹುತೇಕ ಬಿಜೆಪಿ ವರಿಷ್ಠರು ಕಡೆಗಣಿಸುವ ಪ್ರಯತ್ನ ಮಾಡಲ್ಲ. ಸ್ಥಳೀಯ ಸಣ್ಣಪುಟ್ಟ ಬಿಜೆಪಿ ನಾಯಕರು ಕಡೆಗಣಿಸುವ ಯತ್ನ ಮಾಡಬಹುದು. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಅಮಿತ್ ಶಾ ಕಡೆಗಣಿಸಲ್ಲ ಎಂದು ಹೇಳಿದರು.