ಬೆಳಗಾವಿ:ರಾಜ್ಯ ಮಾಹಿತಿ ಹಕ್ಕು ಆಯೋಗದ ಬೆಳಗಾವಿ ಪೀಠದ ಕಲಾಪಗಳನ್ನು ಮಾರ್ಚ್ನಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಮಾಹಿತಿ ಆಯುಕ್ತೆ ಗೀತಾ ಬಿ.ವಿ.ತಿಳಿಸಿದರು.
ಮಾಹಿತಿ ಆಯೋಗದ ಪೀಠ ಸ್ಥಾಪನೆಗೆ ಗುರುತಿಸಲಾಗಿರುವ ಕಟ್ಟಡವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ ಬಿ.ವಿ., ಬೆಳಗಾವಿಯ ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ತಮನ್ನಾ ಆರ್ಕೇಡ್ನಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಪೀಠ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
ಶೀಘ್ರವೇ ಮಾಹಿತಿ ಆಯೋಗದ ಬೆಳಗಾವಿ ಪೀಠ ಆರಂಭ: ಗೀತಾ ಬಿ.ವಿ ಪೀಠ ಆರಂಭಕ್ಕೆ ಅಗತ್ಯವಿರುವ ಪೀಠೋಪಕರಣ, ಮತ್ತಿತರ ತುರ್ತು ಕಾಮಗಾರಿಗೆ 69.50 ಲಕ್ಷ ಅನುದಾನದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಪೀಠದ ಕಲಾಪಗಳನ್ನು ಆರಂಭಿಸಲಾಗುವುದು. ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ಇಲ್ಲೊಂದು ಪೀಠ ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಸುಮಾರು ಮೂರು ಸಾವಿರ ಪ್ರಕರಣಗಳು ನಡೆಯುತ್ತಿವೆ. ಬೆಳಗಾವಿ ಪೀಠದಲ್ಲಿ ವ್ಯಾಪ್ತಿಯ ಬಗ್ಗೆ ಚರ್ಚೆ ನಡೆದಿದ್ದು, ಆರರಿಂದ ಎಂಟು ಜಿಲ್ಲೆಗಳ ವ್ಯಾಪ್ತಿ ನಿಗದಿ ಸಾಧ್ಯತೆ ಇದೆ ಎಂದು ತಿಳಿಸಿದರು. ಕಟ್ಟಡದ ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಅಗತ್ಯ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ- ಸೂಕ್ತ ಕ್ರಮಕ್ಕೆ ಅವಕಾಶ: ಇನ್ನು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿ ಇಲ್ಲದೇ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸುವ ಹಾಗೂ ವಿನಾ ಕಾರಣ ಅರ್ಜಿ ಸಲ್ಲಿಸುವವರನ್ನು ಮತ್ತೆ ಅರ್ಜಿ ಸಲ್ಲಿಸದಂತೆ ನಿರ್ಬಂಧಿಸಲು ಅವಕಾಶವಿದೆ. ಕಾಯ್ದೆ ದುರ್ಬಳಕೆ ಮಾಡಿಕೊಳ್ಳುವರ ವಿರುದ್ಧ ಈ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.