ಕರ್ನಾಟಕ

karnataka

ಪತ್ನಿ ಜೊತೆಗಿನ ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್: ಬೆಳಗಾವಿಯಲ್ಲಿ ಪತಿ ಬಂಧನ

ಪತ್ನಿಯ ಜೊತೆಗಿನ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿ ಗಂಡನೇ ಬ್ಲ್ಯಾಕ್​ಮೇಲ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

By ETV Bharat Karnataka Team

Published : Jan 4, 2024, 1:19 PM IST

Published : Jan 4, 2024, 1:19 PM IST

Updated : Jan 4, 2024, 4:47 PM IST

Husband arrested for blackmailing wife making video of private moments in Belagavi
ಪತ್ನಿ ಜತೆಗಿನ ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್: ಪತಿ ಬಂಧನ

ಬೆಳಗಾವಿ: ಹೆಂಡತಿ ಜೊತೆಗಿನ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ಆಕೆಗೆ ಗಂಡನೇ ಬ್ಲ್ಯಾಕ್​ಮೇಲ್ ಮಾಡಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪತ್ನಿಯೇ ತನ್ನ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದು ಮದುವೆ ಆಗಲು ಹೆಂಡತಿಯಿಂದ ವಿಚ್ಛೇದನ ಪಡೆಯಲು ಬೆಳಗಾವಿ ನಗರದ ನಿವಾಸಿಯಾದ ಆರೋಪಿ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ದೂರಲಾಗಿದೆ. ವಿಚ್ಛೇದನ ನೀಡು, ಇಲ್ಲವಾದರೆ ಖಾಸಗಿ ವಿಡಿಯೋ, ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿಗೊಂಡು, ಸಾಕಷ್ಟು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಪತ್ನಿಯಿಂದ ವಿಚ್ಛೇದನ ಕೋರಿ, ಪತಿ ಕೋರ್ಟ್​ ಮೆಟ್ಟಿಲೇರಿದ್ದಾನೆ. ಕೋರ್ಟ್​ಗೆ ಹೋದ ಬಳಿಕವೂ ಹೆಂಡತಿಗೆ ನಿರಂತರವಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ. ಇದರಿಂದ ದಿಕ್ಕುತೋಚದಾದ ಪತ್ನಿ, ಜಿಲ್ಲಾ ಸೈಬರ್​ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಮೊಬೈಲ್​ನಲ್ಲಿ ಹೆಂಡತಿಯ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಇರುವುದು ಬೆಳಕಿಗೆ ಬಂದಿದೆ. ಪೊಲೀಸರು ತಕ್ಷಣ ಆತನನ್ನು ಬಂಧಿಸಲು ಮುಂದಾಗಿದ್ದು, ಪತಿ ಆ ವೇಳೆ ತಪ್ಪಿಸಿಕೊಂಡು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ರಕ್ಷಣೆ ಮಾಡಿದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಗುಣಮುಖನಾಗಿರುವ ಆರೋಪಿಯನ್ನು ಬುಧವಾರ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪ್ರತಿಕ್ರಿಯೆ: ಪತಿಯು ಪತ್ನಿಗೆ ಬ್ಲ್ಯಾಕ್​ಮೇಲ್ ಮಾಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಸಹ ಹಾಕುತ್ತಿದ್ದನು. ಪತಿಯು ಇನ್ನೊಂದು ಮದುವೆ ಮಾಡಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದ. ಈ ಕಾರಣಕ್ಕೆ ಡಿವೋರ್ಸ್ ತೆಗೆದುಕೊಳ್ಳಲು ಮುಂದಾಗಿದ್ದ ಎಂದು ಆತನ ಪತ್ನಿ ಹೇಳುತ್ತಿದ್ದಾಳೆ. ಸದ್ಯ ಆತನ ಮೊಬೈಲ್ ಅನ್ನು ಜಪ್ತಿ ಮಾಡಿ ಎಫ್ಎಸ್ಎಲ್​ಗೆ ಕಳುಹಿಸಿದ್ದೇವೆ. ಪೊಲೀಸರ ತನಿಖೆ ಪ್ರಕಾರ ಆತ ಮಾಡಿದ ತಪ್ಪು ರುಜುವಾತು ಆಗಿದ್ದು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ

Last Updated : Jan 4, 2024, 4:47 PM IST

ABOUT THE AUTHOR

...view details