ಚಿಕ್ಕೋಡಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷದಲ್ಲಿ ಯಾರು ಸರ್ಕಾರ ರಚಿಸಿದರೂ ಹುಕ್ಕೇರಿ ತಾಲೂಕಿಗೆ ಒಂದು ಸಚಿವ ಸ್ಥಾನ ಪಿಕ್ಸ್ ಇರುತ್ತಿತ್ತು. ಆದರೆ, ಈ ಬಾರಿ ಯಡಿಯೂರಪ್ಪ ಸರ್ಕಾರದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿಗೆ ಸಚಿವ ಸ್ಥಾನ ಸಿಗದೆ ಇರುವುದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಉಮೇಶ ಕತ್ತಿ ಅಭಿಮಾನಿಗಳು ನಿರಾಶೆಯಾಗಿದ್ದಾರೆ.
ಉಪ ಚುನಾವಣೆಯಲ್ಲಿ ಗೆದ್ದ 10 ನೂತನ ಶಾಸಕರಿಗೆ ಮಂತ್ರಿ ಪಟ್ಟ ಕಟ್ಟಲಾಗಿದೆ. ಆದರೆ, ಇದರ ಜೊತೆಗೆ ಮೂಲ ಬಿಜೆಪಿಯ ಮೂವರು ಶಾಸಕರನ್ನು ಮಂತ್ರಿ ಮಾಡುವ ಲೆಕ್ಕಾಚಾರದಲ್ಲಿದ್ದ ಸಿಎಂ ಯಡಿಯೂರಪ್ಪ. ಆದರೆ, ಇವರಿಗೆ ಹೈ-ಕಮಾಂಡ್ ಶಾಕ್ ನೀಡಿದ್ದು, ಮಂತ್ರಿಯಾಗುವ ಆಸೆಯಲ್ಲಿದ್ದ ಹುಕ್ಕೇರಿ ಶಾಸಕ ಉಮೇಶ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಸಿ.ಪಿ ಯೋಗೇಶ್ವರ ಕನಸು ನನಸಾಗದೆ ಉಳಿದಿದೆ.
ಸಂಕೇಶ್ವರ ಮತಕ್ಷೇತ್ರದಿಂದ 1990 ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿದ್ದ ದಿ.ಮಲ್ಲಾರಿಗೌಡ ಪಾಟೀಲ ನೀರಾವರಿ ಸಚಿವರಾಗಿದ್ದರು, ನಂತರ ಆಯ್ಕೆಯಾದ ಮಾಜಿ ಸಚಿವ ಎ.ಬಿ. ಪಾಟೀಲ ವೈದ್ಯಕೀಯ ಹಾಗೂ ಗಣಿ ಭೂವಿಜ್ಞಾನ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ನಂತರ 2004-06 ರ ವರೆಗೆ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಸರಕಾರದಲ್ಲಿ ಹುಕ್ಕೇರಿಯಿಂದ ಆಯ್ಕೆಯಾಗಿದ್ದ ಶಶಿಕಾಂತ ನಾಯಕ ಸಚಿವರಾಗಿ ಮಿಂಚಿದ್ದರು.