ಕರ್ನಾಟಕ

karnataka

By ETV Bharat Karnataka Team

Published : Nov 20, 2023, 4:48 PM IST

Updated : Nov 20, 2023, 5:00 PM IST

ETV Bharat / state

ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆ ಉದ್ದೇಶಕ್ಕೆ ಆಗಬಾರದು: ಗೃಹ ಸಚಿವ ಪರಮೇಶ್ವರ್​

ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆ ಅಧಿವೇಶನ ಆಗಬಾರದು, ಅಧಿವೇಶನ ಆರಂಭಕ್ಕೂ ಮೊದಲೇ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಇಲಾಖೆಗಳಿಗೆ ತಿಳಿಸಿರುವುದಾಗಿ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆ ಉದ್ದೇಶಕ್ಕೆ ಆಗಬಾರದು
ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆ ಉದ್ದೇಶಕ್ಕೆ ಆಗಬಾರದು

ಗೃಹ ಸಚಿವ ಪರಮೇಶ್ವರ್​ ಹೇಳಿಕೆ

ಬೆಳಗಾವಿ: ಬೆಳಗಾವಿಯ ಚಳಿಗಾಲ ಅಧಿವೇಶನ ಕೇವಲ ಪ್ರತಿಭಟನೆಯ ಅಧಿವೇಶನ ಆಗಬಾರದು. ಈ ಭಾಗದ ನೈಜ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಗೃಹ ಸಚಿವ ಡಾ‌‌.ಜಿ.ಪರಮೇಶ್ವರ್​ ಹೇಳಿದ್ದಾರೆ. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪ್ರತಿಭಟನೆಗಳ ಉದ್ದೇಶ ಸರಿ ಇರಬಹುದು. ಆದರೆ, ಇಲ್ಲಿ ಅಧಿವೇಶನ ನಡೆಯೋದೇ ಪ್ರತಿಭಟನೆ ನಡೆಯಲು ಎಂಬ ಅಪಖ್ಯಾತಿಯಿದೆ. ಹಾಗಾಗಿ, ಪ್ರತಿಭಟನೆಗಳನ್ನು ಕಡಿಮೆಗೊಳಿಸಲು ಸಂಬಂಧಿಸಿದ ಇಲಾಖೆಗಳ ಜೊತೆಗೆ ಮಾತನಾಡಿ ಅಧಿವೇಶನದೊಳಗೆ ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಭಾಗದ ನೈಜ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಅವರು ಒತ್ತಿ ಹೇಳಿದರು.

ಡಿ.4 ರಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. 3500 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದ್ದು, ಬೇರೆ ಬೇರೆ ಜಿಲ್ಲೆಯಿಂದಲೂ ಸಿಬ್ಬಂದಿ ಬರುತ್ತಾರೆ. ಊಟ, ವಸತಿ, ಕುಡಿಯುವ ನೀರಿನ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ಮಾಡುವಂತೆ ಸೂಚಿಸಿದ್ದೇನೆ. ಅದಕ್ಕೆ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೂಕ್ತ ಬಂದೋಬಸ್ತ್ ಮಾಡಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಧಿವೇಶನ ನಡೆಸುತ್ತೇವೆ ಎಂದು ತಿಳಿಸಿದರು.

ಇನ್ನು ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ಐದು ಕೋಟಿ ರೂ. ಅನುದಾನ ನೀಡಲಾಗಿದ್ದು, ಐನೂರು ಜನರಿಗೆ ಇರುವ ವಸತಿ ಗೃಹ ಮುಂದಿನ ವರ್ಷದೊಳಗೆ ಪೂರ್ಣವಾಗುತ್ತದೆ. ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಈ ಬಾರಿ ಶೆಡ್ ನಿರ್ಮಿಸುತ್ತೇವೆ ಎಂದರು. ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ಪರಿಶೀಲನೆ ಮಾಡಿದ್ದೇನೆ. ಅನೇಕ‌ ವಿಚಾರಗಳು ಗಮನಕ್ಕೆ ಬಂದಿವೆ. ಅಪರಾಧಗಳ ಸಂಖ್ಯೆ ಗಂಭೀರವಾಗಿ ಪರಿಗಣಿಸಿದ್ದೇನೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿವೆ. ಈ ವರ್ಷ 2500ಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, 550 ಜನ ಸಾವನ್ನಪ್ಪಿದ್ದಾರೆ. ಹಾಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಯಮಕನಮರಡಿ ಗೋಲ್ಡ್ ನಾಪತ್ತೆ ಪ್ರಕರಣವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ’’ಕಳೆದ ಆರು ತಿಂಗಳಲ್ಲಿ ಪೊಲೀಸರ ಮೇಲೆ ಆರೋಪ ಕೇಳಿ ಬಂದ ಐನೂರು ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಕೆಲವೊಮ್ಮೆ ಅಮಾಯಕ ಪೊಲೀಸ್ ಸಿಬ್ಬಂದಿ ಮೇಲೆ ಆರೋಪ‌ ಕೇಳಿ ಬಂದಿರುತ್ತದೆ. ಅಲ್ಲದೇ ಕೆಲವು ಕಡೆ ಪೊಲೀಸರೇ ತಪ್ಪು ಮಾಡಿರುತ್ತಾರೆ. ಹಾಗಾಗಿ, ಪ್ರತಿಯೊಂದು ಕೇಸ್​ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದು, ಆ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ‘‘ ಎಂದರು.

ಹಿಂಡಲಗಾ ಜೈಲಿನಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಹಿಂಡಲಗಾ ಜೈಲಿನಲ್ಲಿ ಅಗತ್ಯ ಸಿಸಿಟಿವಿ, ಜಾಮರ್ ಸೇರಿ ಮತ್ತಿತರ ಸಾಮಗ್ರಿಗಳ ಖರೀದಿಗೆ ಹಣ ಮಂಜೂರಾಗಿದೆ. ಜೈಲು ಅಧಿಕ್ಷಕರ ವರ್ಗಾವಣೆಗೆ ನಿರ್ಧರಿಸಿದ್ದೇವೆ. ಯಾವುದೇ ರೀತಿ ನಿರ್ಲಕ್ಷ್ಯ ವಹಿಸುವುದಿಲ್ಲ. ಜೈಲಿನ ಸುಧಾರಣೆಗೆ ಇನ್ನು ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಔರಾದಕರ್ ವರದಿ ಜಾರಿ‌ ವಿಚಾರವಾಗಿ ಮಾತನಾಡಿದ ಪರಮೇಶ್ವರ್​, ’’ಈಗಾಗಲೇ ಕೆಲವೊಂದು ಪ್ರಸ್ತಾವನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ.‌ ಆದರೆ ಪ್ರಮುಖವಾಗಿ ವೇತನ ಪರಿಷ್ಕರಣೆ ಮಾಡಿಲ್ಲ. ಇದಕ್ಕೆ ಹೆಚ್ಚುವರಿಯಾಗಿ 800-900 ಕೋಟಿ ರೂ. ಹಣ ಬೇಕಾಗುತ್ತದೆ ಎಂದು ಹಣಕಾಸು ಇಲಾಖೆ ಹಿಂದೆ ಹೇಳಿದ್ದು, ಹಿಂದಿನ ಸರ್ಕಾರ ಇದನ್ನು ಜಾರಿ ತರಲಿಲ್ಲ‌. ನಾವು ಪರಿಶೀಲಿಸುತ್ತೇವೆ ಎಂದು ಹೇಳಿದರು.

ಇದನ್ನು ಓದಿ:ಪೋಕ್ಸೊ ಪ್ರಕರಣ: ಮತ್ತೆ ಮುರುಘಾ ಶರಣರನ್ನು ಬಂಧಿಸಿದ ಪೊಲೀಸರು

Last Updated : Nov 20, 2023, 5:00 PM IST

ABOUT THE AUTHOR

...view details