ಕರ್ನಾಟಕ

karnataka

ಕುಡಚಿ ಸೇತುವೆ ಮುಳುಗಡೆ: ಕರ್ನಾಟಕ - ಮಹಾರಾಷ್ಟ್ರ ಸಂಪರ್ಕ ಕಡಿತ

By

Published : Aug 7, 2020, 11:31 AM IST

ಭಾರೀ ಮಳೆಗೆ ಕೃಷ್ಣಾ ನದಿಯ ಕುಡಚಿ ಸೇತುವೆ ಮುಳುಗಡೆಯಾಗಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಖಾನಾಪುರ ತಾಲೂಕಿನಲ್ಲೂ ದಾಖಲೆಯ ಮಳೆಯಾಗಿದೆ.

Heavy Rain in Belgavi
ಕುಡಚಿ ಸೇತುವೆ ಮುಳುಗಡೆ

ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕುಡಚಿ ಸೇತುವೆ ಮುಳುಗಡೆಯಾಗಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಕಾಗವಾಡ ತಾಲೂಕಿನಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕುಡಚಿ ಸೇತುವೆ ಮೇಲೆ ಎರಡು ಅಡಿ ನೀರು ಬಂದಿದೆ.

ಬಾಗಲಕೋಟೆ, ಜಮಖಂಡಿ, ಮುಧೋಳ, ಮಹಾಲಿಂಗಪುರ, ಹಾರೋಗೇರಿ ಸೇರಿದಂತೆ ಹಲವು ಪಟ್ಟಣಗಳಿಗೆ ವ್ಯಾಪಾರ ವಹಿವಾಟುಗಳಿಗೆ ತೆರಳಲು ಮುಖ್ಯ ರಸ್ತೆ ಇದೇ ಆಗಿದೆ. ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿರುವುದರಿಂದ ಹಾರೋಗೇರಿ ಕ್ರಾಸ್ ಮೂಲಕ ಅಥಣಿ-ಕಾಗವಾಡ ಮಾರ್ಗವಾಗಿ 50 ಕಿ.ಮೀ. ಹೆಚ್ಚಿಗೆ ಕ್ರಮಿಸಿ ತೆರಳುವ ಅನಿವಾರ್ಯತೆ ಉಂಟಾಗಿದೆ. ಕುಡಚಿ ಸೇತುವೆ ಮಹಾರಾಷ್ಟ್ರ-ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಈ ಸೇತುವೆ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸದ್ಯ ಜನ ಪರದಾಡುತ್ತಿದ್ದಾರೆ.

ಕುಡಚಿ ಸೇತುವೆ ಮುಳುಗಡೆ

ಖಾನಾಪುರ ‌ತಾಲೂಕಿನಲ್ಲಿ 172.6 ಮಿ.ಮೀ. ಮಳೆ:

ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಗುರುವಾರ ಒಂದೇ ದಿನ 172.6 ಮಿ.ಮೀ ಮಳೆಯಾಗಿದೆ. ಮಲಪ್ರಭಾ ಉಗಮಸ್ಥಾನ ಕಣಕುಂಬಿಯಲ್ಲಿ 22 ಸೆಂ.ಮೀ ಮಳೆಯಾಗಿದೆ. ಪರಿಣಾಮ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಾರೀ ಮಳೆಯಿಂದ ಖಾನಾಪುರ ತಾಲೂಕಿನ ಬಹುತೇಕ ಸೇತುವೆಗಳು ಜಲಾವೃತಗೊಂಡಿದ್ದು, 20ಕ್ಕೂ‌ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲುತೀರ್ಥ ಜಲಾಶಯಕ್ಕೆ 48,821 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ನವಿಲುತೀರ್ಥ ಜಲಾಶಯ ಭರ್ತಿಯಾಗಲು ಇನ್ನು 13 ಅಡಿ ಮಾತ್ರ ಬಾಕಿಯಿದೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನೀರು ಬಿಡುಗಡೆ ಸಾಧ್ಯತೆ ಇದ್ದು, ಮಲಪ್ರಭಾ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ.

ABOUT THE AUTHOR

...view details