ಅಥಣಿಯಲ್ಲಿ ನಿರಂತರ ಮಳೆ.. ಸಂಪೂರ್ಣ ನಾಶವಾಯ್ತು ರೈತರ ಬೆಳೆ..
ಅಥಣಿಯಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ರೈತರ ಜಮೀನಿನ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
![ಅಥಣಿಯಲ್ಲಿ ನಿರಂತರ ಮಳೆ.. ಸಂಪೂರ್ಣ ನಾಶವಾಯ್ತು ರೈತರ ಬೆಳೆ..](https://etvbharatimages.akamaized.net/etvbharat/prod-images/768-512-4761301-thumbnail-3x2-sanju.jpg)
ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನಂದಗಾವ ಗ್ರಾಮದಲ್ಲಿ ಹಾಗೂ ತಾಲೂಕಿನ ಪೂರ್ವ ಭಾಗದಲ್ಲಿ ಬರುವ ಗ್ರಾಮದ ರೈತರ ಜಮೀನಿನ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಗಿಡ ಹಾಗೂ ಕಬ್ಬಿನ ಬೆಳೆಗಳಿಗೆ ಮಳೆ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಸರಿ ಸುಮಾರು ಎಕರೆ ಕಬ್ಬಿಗೆ 30 ಸಾವಿರ ರಿಂದ ₹ 40 ಸಾವಿರದವರೆಗೆ ಖರ್ಚು ಇದೆ. ಆದರೆ, ಮಳೆಯಿಂದಾಗಿ ಸಂಪೂರ್ಣ ನಷ್ಟವಾಗಿದೆ. ಅದಕ್ಕೆ ತಕ್ಕ ಪರಿಹಾರವನ್ನು ಸರ್ಕಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಒಂದು ಕಡೆ ನೆರೆ ಮತ್ತೊಂದೆಡೆ ರಭಸದ ಮಳೆ ಪರಿಣಾಮವಾಗಿ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ರೈತರು ತಮ್ಮ ಬೆಳೆಗಳು ಮಳೆಯಿಂದಾಗಿ ಹಾಳಾಗಿವೆ ಎಂದಿದ್ದು, ವೈಜ್ಞಾನಿಕ ಅಧ್ಯಯನ ಮಾಡಿ ಸರಿಯಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.