ಕರ್ನಾಟಕ

karnataka

By

Published : Oct 21, 2019, 5:15 PM IST

ETV Bharat / state

ಗಾಯದ ಮೇಲೆ ಬರೆ ಎಳೆದ ವರುಣ... ಅಥಣಿ ಜನರು ತತ್ತರ

ಅಥಣಿ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ಇನ್ನು ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿಹೋಗಿವೆ. ಕೃಷ್ಣಾ ನದಿ ಪ್ರವಾಹದಿಂದಾಗಿ ಹಾಳಾಗಿದ್ದ ಪರಿಸ್ಥಿತಿ ಸುಧಾರಿಸುವ ಮುನ್ನವೇ ಮತ್ತೊಮ್ಮೆ ಮಳೆ ಅಬ್ಬರಿಸಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಥಣಿಯಲ್ಲಿ ಮತ್ತೆ ಜಲ ಕಂಟಕ

ಅಥಣಿ:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಗಿಡ, ನಾಟಿ ಮಾಡಿರುವ ಕಬ್ಬು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ.

ತಾಲೂಕಿನಲ್ಲಿ ನಿನ್ನೆ ರಾತ್ರಿ ಸುಮಾರು 10ಗಂಟೆಗೆ ಪ್ರಾರಂಭವಾಗಿದ್ದ ಮಳೆ ನಸುಕಿನ ಜಾವ 5ಗಂಟೆವರೆಗೆ ಅಬ್ಬರಿಸಿತು. ಪರಿಣಾಮವಾಗಿ ಅಥಣಿ ತಾಲೂಕಿನ ಹಳ್ಳಕೊಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಯಲ್ಲಮ್ಮವಾಡಿಯ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ.

ಅಥಣಿಯಲ್ಲಿ ಮತ್ತೆ ಜಲ ಕಂಟಕ

ಇನ್ನು, ಅಥಣಿ ಮತ್ತು ಜಮಖಂಡಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಝುಂಜರವಾಡ-ತುಬಚಿ ರಸ್ತೆ ಮಾರ್ಗ, ಮಳೆ ನೀರಿನಿಂದ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಪರದಾಡುವಂತಾಗಿತ್ತು.

ಕೆಲವು ಗ್ರಾಮಗಳಲ್ಲಿ ದನದ ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ ನೀರಿನಲ್ಲಿ ಮುಳುಗುತ್ತಿದ್ದ ದನ ಕರುಗಳನ್ನು ರಕ್ಷಿಸಲಾಗಿದೆ. ಮಳೆಯ ರಭಸಕ್ಕೆ ರೈತರ ಬೆಳೆಗಳು ಕೊಚ್ಚಿ ಹೋಗಿವೆ.

ABOUT THE AUTHOR

...view details