ಕರ್ನಾಟಕ

karnataka

ಮತ್ತೆ ಪ್ರವಾಹದ ಭೀತಿ: ಮಲಪ್ರಭಾ ನದಿ ಪಾತ್ರದ ಜನರಲ್ಲಿ ಹೆಚ್ಚಾದ ಆತಂಕ

By

Published : Sep 9, 2020, 9:53 PM IST

ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿಯ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಎದುರಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಕಂಗಾಲಾಗಿದ್ದಾರೆ.

Heavy rain fall in belgavi
ಮಲಪ್ರಭಾ ನದಿಪಾತ್ರದ ಜನರಲ್ಲಿ ಆತಂಕ

ಬೆಳಗಾವಿ: ಈ ಭಾಗದ ಜನರಿಗೆ ಕಳೆದೆರಡು ವರ್ಷದಿಂದ ಜಲಗಂಡಾಂತರ ಎದುರಾದಂತೆ ಇದೆ. ಪ್ರಸಕ್ತ ಸಾಲಿನಲ್ಲೂ ಪ್ರವಾಹ ಎದುರಿಸಿ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಂತೆ, ಇದೀಗ ಪ್ರವಾಹದ ಭೀತಿ ಎದುರಾಗಿದೆ. ಕಳೆದ ನಾಲ್ಕು ದಿನಗಳಿಂದ ಮಳೆ ಅಬ್ಬರ ಜೋರಾಗಿದ್ದು , ನದಿ ಪಾತ್ರದ ಗ್ರಾಮಗಳಿಗೆ ಇದೀಗ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಮಲಪ್ರಭಾ ನದಿಪಾತ್ರದ ಜನರಲ್ಲಿ ಆತಂಕ

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ಮತ್ತೆ ಮುಳುಗುವ ಸ್ಥಿತಿಗೆ ಬಂದು ತಲುಪಿದ್ದು, ಶರಣೆ ಗಂಗಾಂಭಿಕಾ ಐಕ್ಯ ಮಂಟಪ, ಸಾವಿರಾರು ಹೆಕ್ಟೇರ್ ಪ್ರದೇಶ ಮತ್ತೆ ನೀರುಪಾಲಾಗುವ ಸಾಧ್ಯತೆ ಇದೆ. ಕೆಲವೊಂದು ಪ್ರದೇಶಗಳಲ್ಲಿ ಮನೆಯೊಳಗೆ ನೀರು ನುಗ್ಗುತ್ತಿರುವ ದೃಶ್ಯ ಸಹ ಕಂಡು ಬಂದಿದೆ.

ಈಗಾಗಲೇ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಹೊರ ವಲಯದಲ್ಲಿ ಹಾದು ಹೋಗುವ ಮಲಪ್ರಭಾ ನದಿ ದಂಡೆ ಮೇಲೆ ಶರಣೆ ಗಂಗಾಂಬಿಕಾ ಐಕ್ಯ ಮಂಟಪ ಇದ್ದು, ಇನ್ನಷ್ಟು ಮಳೆ ಮುಂದುವರೆದರೇ ಮಂಟಪ ಮುಳಗುವ ಸಾಧ್ಯತೆ ಇದೆ. ಇತ್ತ ನದಿ‌ ತೀರದ ಜಮೀನುಗಳು ಮತ್ತೆ‌ ಮುಳಗಡೆಯಾಗಿದ್ದು, ಅಲ್ಪಸ್ವಲ್ಪ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಕಬ್ಬಿನ ಹಾಗೂ ಭತ್ತದ ಗದ್ದೆಗಳು ನದಿಯಂತಾಗಿ ಮಾರ್ಪಟ್ಟಿದ್ದು, ಇತ್ತ ತರಕಾರಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಉದ್ದು, ಸೋಯಾ, ಬೆಳೆಗಳು ಈಗಾಗಲೇ ಹಾಳಾಗಿದ್ದು ಇಷ್ಟಾದರೂ ಅಧಿಕಾರಿಗಳು ಇನ್ನೂ ಸರ್ವೆ ಕಾರ್ಯ ಆರಂಭಿಸಿಲ್ಲ. ಕಳೆದ ವರ್ಷ ಕೂಡ ಇದೇ ರೀತಿ ಬೆಳೆ ಹಾನಿಯಾಗಿತ್ತು. ಅದಕ್ಕೂ ಪರಿಹಾರ ಕೊಟ್ಟಿಲ್ಲ ಈ ವರ್ಷ ಮತ್ತೆ ಎಲ್ಲಾ ಬೆಳೆ ಹಾಳಾಗಿದ್ದು, ಈ ವರ್ಷವಾದ್ರೂ ಸರ್ಕಾರ ಪರಿಹಾರ ಕೊಡಲಿ ಅಂತಾ ರೈತರು ಒತ್ತಾಯಿಸುತ್ತಿದ್ದಾರೆ.

ಜಿಲ್ಲೆಯ ಚಿಕ್ಕೋಡಿ ಪಟ್ಟಣದ ತಗ್ಗು ಪ್ರದೇಶದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದ ಹಿನ್ನೆಲೆ ನೀರು ನುಗ್ಗಿದೆ. ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ಮಲಪ್ರಭಾ ನದಿ ನೀರಿನ ಪ್ರಮಾಣದಲ್ಲಿ ಈಗಾಗಲೇ ಆರು ಅಡಿಯಷ್ಟು ನೀರು ಏರಿಕೆಯಾಗಿದ್ದು, ನವಿಲು ತೀರ್ಥ ಜಲಾಶಯದಿಂದ 13 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ‌. ಇದರಿಂದ ರಾಮದುರ್ಗ ತಾಲೂಕಿನ ಹತ್ತಕ್ಕೂ ಅಧಿಕ ಗ್ರಾಮಗಳಿಗೆ ಮತ್ತೆ ಮುಳಗಡೆ ಭೀತಿ ಆರಂಭವಾಗಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇನ್ನೂ ಮಳೆ ಅಬ್ಬರ ಮುಂದುವರೆದಿದ್ದು, ಹೀಗಾಗಿ ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಇನ್ನಷ್ಟು ನೀರು ಬಿಡುವ ಸಾಧ್ಯತೆ ಇದೆ. ನದಿಪಾತ್ರದ ಜನರಿಗೆ ಎಚ್ಚರಿಕೆ‌ಯಿಂದ ಇರುವಂತೆ ತಾಲೂಕಾಡಳಿತ ಸೂಚನೆ ನೀಡಲಾಗಿದೆ.

ಈಗಾಗಲೇ ಜಲಾವೃತ ಆಗಿದ್ದು, ಇನ್ನೂ ಸರ್ವೆ ಕಾರ್ಯ ಆರಂಭವಾಗಿಲ್ಲ. ಸರ್ಕಾರ ಇನ್ನಾದರೂ ಎಚ್ಚೇತ್ತುಕೊಂಡು ಕೂಡಲೇ ಸರ್ವೆ ಕಾರ್ಯ ಆರಂಭಿಸಬೇಕು. ಆದಷ್ಟು ಶೀಘ್ರವೇ ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ನದಿ ಪಾತ್ರದ ಗ್ರಾಮಗಳನ್ನ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ಶಾಶ್ವತ ಪರಿಹಾರವನ್ನು ಆ ಗ್ರಾಮಗಳಿಗೆ ಕಲ್ಪಿಸುವ ಕೆಲಸ ಮಾಡಲಿ ಎಂಬುದು ನಮ್ಮೆಲ್ಲರ ಆಶಯ.

ABOUT THE AUTHOR

...view details