ಕರ್ನಾಟಕ

karnataka

ETV Bharat / state

ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಾಜೀನಾಮೆ: ಬೆಳಗಾವಿ ಗ್ರಾಮ ಒನ್ ಕೇಂದ್ರ ಆಪರೇಟರ್​ಗಳ ಎಚ್ಚರಿಕೆ - ಗ್ರಾಮ ಒನ್ ಕೇಂದ್ರ ಮಾಲೀಕರ ಎಚ್ಚರಿಕೆ

protest in Belagavi: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಸಲ್ಲಿಕೆಯಲ್ಲಿ‌ ಹಣ ವಸೂಲಿ ಆರೋಪದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸೀಜ್ ಮಾಡಿ ಕೇಸ್ ದಾಖಲಿಸಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಗ್ರಾಮ ಒನ್ ಆಪರೇಟರ್​ಗಳು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.

Gram One Center Owners protest in Belagavi
ಗ್ರಾಮ ಒನ್ ಮಾಲೀಕರಿಂದ ಪ್ರತಿಭಟನೆ

By

Published : Jul 31, 2023, 7:31 PM IST

Updated : Jul 31, 2023, 8:08 PM IST

ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಮ ಒನ್ ಆಪರೇಟರ್​ಗಳ ಪ್ರತಿಭಟನೆ

ಬೆಳಗಾವಿ: ಗ್ರಾಮ ಒನ್ ಕೇಂದ್ರಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಗ್ರಾಮ ಒನ್ ಕೇಂದ್ರದ ಆಪರೇಟರ್​ಗಳು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರುವವರೆಗೆ ಕೇಂದ್ರ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಸಲ್ಲಿಕೆಯಲ್ಲಿ‌ ಹಣ ವಸೂಲಿ ಆರೋಪದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸೀಜ್ ಮಾಡಿ ಕೇಸ್ ದಾಖಲಿಸಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಗ್ರಾಮ ಒನ್ ಮಾಲೀಕರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಪ್ರಿಂಟ್, ಲ್ಯಾಮಿನೇಷನ್ ಅಂತಾ ಹಣ ಖರ್ಚಾಗುತ್ತದೆ. ಸರ್ಕಾರದ ಸೇವೆ ಮಾಡುತ್ತಿದ್ದರೂ ಸರ್ಕಾರವೇ ನಮ್ಮ ಮೇಲೆ ಕೇಸ್ ಹಾಕುತ್ತಿದೆ. ಲ್ಯಾಮಿನೇಷನ್, ಪ್ರಿಂಟ್​​ಗೆ ಅಂತ ಹಣ ಪಡೆದರೂ ಕೆಲವರು ನಮ್ಮ ಮೇಲೆ ದೂರು ನೀಡುತ್ತಿದ್ದಾರೆ. ಅದನ್ನ ಅರ್ಜಿಗೆ ಹಣ ಪಡೆಯುತ್ತಿದ್ದಾರೆ ಎಂದು ಬಿಂಬಿಸಿ ಕೇಸ್ ಹಾಕುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಮಾಡುತ್ತೇವೆ. ಕೆಲವರು ಗಲಾಟೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಸರ್ಕಾರ ನೀಡುವ ಸಹಾಯ ಧನ 20 ರೂ. ಅದರಲ್ಲಿ ಟ್ಯಾಕ್ಸ್ ತೆಗೆದು 12 ರೂ. ಬರುತ್ತದೆ. ಆ ಹಣ ಕೂಡ ಯಾವಾಗ ಬರುತ್ತೆ ಅಂತಾ ಗೊತ್ತಿಲ್ಲ. ಆದರೂ ಕೆಲಸ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಗೃಹಜ್ಯೋತಿ ನೋಂದಣಿ ಸಲ್ಲಿಕೆಗೂ ಹೀಗೆ ಹೇಳಿದ್ದರು. ಆದರೆ ಇನ್ನೂ ನಮಗೆ ಹಣ ಬಂದಿಲ್ಲ. ಹಾಗಾಗಿ ಗ್ರಾಮ್ ಒನ್ ಬಂದ್ ಮಾಡಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಕೆಲವು ಯೂಟ್ಯೂಬ್ ಚಾನಲ್​​ನವರು ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ. ಸರ್ಕಾರ ನಮಗೆ ನ್ಯಾಯ ಒದಗಿಸಿ 50 ರಿಂದ 100 ರೂಪಾಯಿ ಸಹಾಯ ಧನ ಕೊಡಬೇಕು. ಇಲ್ಲವೇ ಸರ್ಕಾರದಿಂದ ನಮಗೆ ಸಂಬಳ ನೀಡಲಿ ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು‌.

ಮಹಾಂತೇಶ ಬೆಣ್ಣಿ ಮಾತನಾಡಿ '2 ಲಕ್ಷ ರೂ. ಹೂಡಿಕೆ ಮಾಡಿ ಗ್ರಾಮ ಒನ್ ಕೇಂದ್ರ ತೆರೆದಿದ್ದೇವೆ. ಕನಿಷ್ಠ 15-18 ಸಾವಿರ ಗೌರವ ವೇತನ ನೀಡಬೇಕು. ಇವರು ಕೊಡುವ 12 ರೂಪಾಯಿಯಲ್ಲಿ ನಮ್ಮ ಜೀವನ ನಡೆಸಲು ಸಾಧ್ಯವಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಕೇಂದ್ರ ತೆರೆಯುವುದಿಲ್ಲ' ಎಂದು ಎಚ್ಚರಿಕೆ ರವಾನಿಸಿದರು.

ಅಭಿಲಾಷ ಮರಕಟ್ಟಿ ಮಾತನಾಡಿ 'ಒಂದು ಗ್ರಾಮ ಒನ್ ಕೇಂದ್ರ ನಡೆಸಲು ಪ್ರತಿನಿತ್ಯ 1700 ರೂ. ಖರ್ಚಾಗುತ್ತದೆ. ದಿನಕ್ಕೆ 50 ಅರ್ಜಿ ಹಾಕಿದರೂ ನಮಗೆ 500 ರೂ. ಸಿಗುತ್ತದೆ. ನಾವೇ 1200 ರೂ. ಸರ್ಕಾರಕ್ಕೆ ಕೊಡುತ್ತಿದ್ದೇವೆ. ಸರ್ಕಾರದ ಯೋಜನೆಗೆ ನಾವು ಹೆಗಲು ಕೊಟ್ಟಿದ್ದು, ನಮ್ಮ ಸಂಸಾರ ನಡೆಸಲು ಸರ್ಕಾರ ನಮಗೆ ಹೆಗಲು ಕೊಡಬೇಕು. ಏನೂ ದುಡಿಯದೇ ಇರುವವರಿಗೆ ಸರ್ಕಾರ 2 ಸಾವಿರ ರೂ. ಕೊಡುತ್ತಿದೆ. ಆದರೆ 24/7 ದುಡಿಯುವವರಿಗೆ 12 ರೂ. ಕೊಟ್ಟರೆ ಹೇಗೆ?' ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿಗೆ ಸಾರ್ವಜನಿಕರಿಂದ ಹಣ ವಸೂಲಿ... ವ್ಯಕ್ತಿಯ ವಿರುದ್ಧ ದೂರು

Last Updated : Jul 31, 2023, 8:08 PM IST

ABOUT THE AUTHOR

...view details