ಕರ್ನಾಟಕ

karnataka

By ETV Bharat Karnataka Team

Published : Dec 7, 2023, 5:44 PM IST

ETV Bharat / state

ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ವೈದ್ಯರ ನೇಮಕಾತಿ: ಸಚಿವ ದಿನೇಶ್ ಗುಂಡೂರಾವ್

Health Minister Dinesh Gundurao statement on Doctors recruitment: ಮುಂದಿನ ವರ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ವೈದ್ಯರ ನೇಮಕಾತಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ/ಬೆಂಗಳೂರು:ರಾಜ್ಯದಲ್ಲಿ 461 ಸರ್ಕಾರಿ ವೈದ್ಯರ ಹುದ್ದೆಗಳು ಖಾಲಿ ಇವೆ. ಸದ್ಯ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಿಸಿಕೊಂಡು ಸೇವೆ ನೀಡಲಾಗುತ್ತಿದೆ. ಆರ್ಥಿಕ ಇಲಾಖೆಯ ಅನುಮತಿ ಪಡೆದು ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ವೈದ್ಯರ ನೇಮಕಾತಿ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಗುರುವಾರ ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಸಚಿವರು, ವೈದ್ಯರ ಕೊರತೆ ನಿವಾರಿಸಲು ಎಂಬಿಬಿಎಸ್ ಪೂರ್ಣಗೊಳಿಸಿದವರಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ ನಿಯಮಾನುಸಾರ 102 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದು ಬಾಕಿಯಿದೆ. ಹಂತ ಹಂತವಾಗಿ ಈ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಲೆನಾಡಿನ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುಮರಿ, ಬ್ಯಾಕೋಡ್, ಕಾರ್ಗಲ್ ಆಸ್ಪತ್ರೆಗಳಲ್ಲಿ ತಾತ್ಕಾಲಿಕವಾಗಿ ಆರ್​ಬಿಎಸ್​ಕೆ ಹಾಗೂ ಎನ್​ಹೆಚ್​ಎಮ್ ಯೋಜನೆಯಡಿ ಗುತ್ತಿಗೆ ವೈದ್ಯರನ್ನು ನಿಯೋಜಿಸಲಾಗಿದೆ. ಆಯುಷ್ ವೈದ್ಯರು ಸಹ ಗ್ರಾಮೀಣ ಸೇವೆ ನೀಡುತ್ತಿದ್ದಾರೆ ಎಂದರು.

ಮಾರ್ಗಸೂಚಿಯಂತೆ 1.20 ಲಕ್ಷ ಜನರಿಗೆ ಒಂದು ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಮಂಡ್ಯ ತಾಲ್ಲೂಕಿನ ಜನಸಂಖ್ಯೆ 2.89 ಲಕ್ಷ ಇದ್ದು ನಿಯಮಾನುಸಾರ ಕೀಲಾರ ಮತ್ತು ಶಿವಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ತಗ್ಗಹಳ್ಳಿ ಗ್ರಾಮ ಜಿಲ್ಲಾ ಆಸ್ಪತ್ರೆ 8 ಕಿ.ಮೀ. ಅಂತರದಲ್ಲಿದೆ. ಈ ಕಾರಣದಿಂದ ತಗ್ಗಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ.ಎ.ಬಿ ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.

ಎಬಿಆರ್​ಕೆ ಅಡಿ ಡಯಾಲಿಸಿಸ್-ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ:ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ಒಳಪಡಲು ಅನುಕೂಲವಾಗುವಂತೆ ಎಬಿಆರ್​ಕೆ (ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ) ಯೋಜನೆಯಡಿ ಡಯಾಲಿಸಿಸ್ ಚಿಕಿತ್ಸೆಯನ್ನು ತರುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಗುಂಡೂರಾವ್ ಮಾಹಿತಿ ನೀಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಈ ಹಿಂದೆ ಡಯಾಲಿಸ್ ಘಟಕಗಳನ್ನು ನಿರ್ವಹಿಸುತ್ತಿದ್ದ ಏಜೆನ್ಸಿ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ತೊಂದರೆಯಾಗಿದೆ. ತಂತ್ರಜ್ಞರಿಗೆ ಸಂಬಳ, ಪಿಎಫ್ ಹಾಗೂ ಇಎಸ್​ಐಗಳನ್ನು ಏಜೆನ್ಸಿ ಭರಿಸಿಲ್ಲ. ಪದೇ ಪದೇ ತಂತ್ರಜ್ಞರು ಧರಣಿ ಮಾಡುತ್ತಿದ್ದರು. ಸರ್ಕಾರ ತಂತ್ರಜ್ಞರೊಂದಿಗೆ ಮಾತನಾಡಿ ಪಿಎಫ್ ಹಾಗೂ ಇಎಸ್​ಐ ಅನ್ನು ಸರ್ಕಾರದಿಂದ ಭರಿಸುವ ಆಶ್ವಾಸನೆ ನೀಡಿದೆ. ನಿರ್ಲಕ್ಷ್ಯ ತೋರಿದ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ದಂಡ ವಿಧಿಸಲಾಗಿದೆ. ಡಯಾಲಿಸಿಸ್ ಘಟಕಗಳ ನಿರ್ವಹಣೆಗೆ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ವಿಭಾಗಗಳ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೀಘ್ರವೇ ಕಲಬುರ್ಗಿ ವಿಭಾಗದ ಟೆಂಡರ್ ಕೂಡ ಕರೆಯಲಾಗುವುದು. ಹೊಸ ಸಂಸ್ಥೆಯು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.

ರಾಜ್ಯಾದ್ಯಂತ ಇದ್ದ 168 ಡಯಾಲಿಸಿಸ್ ಘಟಕಗಳನ್ನು 219ಕ್ಕೇರಿಸಲಾಗಿದೆ. 649 ಇದ್ದ ಯಂತ್ರಗಳು 800ಕ್ಕೆ ಏರಿಕೆ ಆಗಿವೆ. 59 ತಾಲ್ಲೂಕುಗಳ ಪೈಕಿ 48 ತಾಲ್ಲೂಕುಗಳಲ್ಲಿ ತಾಲ್ಲೂಕು ಆರೋಗ್ಯ ಕೇಂದ್ರಗಳು ಇಲ್ಲ. ಹಾಗಾಗಿ 48 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೇ ಡಯಾಲಿಸಿಸ್ ಘಟಕಗಳನ್ನು ತರೆಯಲಾಗಿದೆ. ಹೊಸ ಸಂಸ್ಥೆ ನಿರ್ವಹಣೆಯ ಜವಬ್ದಾರಿ ಪಡೆಯುವವರೆಗೆ ಜಿಲ್ಲಾ ಆರೋಗ್ಯ ಕುಟುಂಬ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಡಯಾಲಿಸಿಸ್ ಘಟಕಗಳು ಕಾರ್ಯನಿರ್ವಹಿಸಲಿವೆ. ಹೊಸ ಟೆಂಡರ್‌ನಲ್ಲಿ ಏಕ ಬಳಕೆಯ ಡಯಾಲಿಸಿಸ್‌ಗೆ ಯಂತ್ರಗಳನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸ್ವಚ್ಚತೆ ಹಾಗೂ ನಿರ್ವಹಣೆ ಕಾರ್ಯಭಾರ ತಪ್ಪಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಡಯಾಲಿಸಿಸ್ ಘಟಕಗಳ ತಂತ್ರಜ್ಞರ ಧರಣಿಯಿಂದಾಗಿ ಚಿಕಿತ್ಸೆ ದೊರಕದೆ ರೋಗಿ ಮರಣ ಹೊಂದಿದ ಪ್ರಕರಣ ರಾಜ್ಯದಲ್ಲಿ ಕಂಡುಬಂದಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಶಾಸಕ ಸುನೀಲ್‌ ಕುಮಾರ್ ಮಾತನಾಡುತ್ತಾ, ಸ್ಥಳೀಯ ಸಿಎಸ್​ಆರ್, ಎನ್​ಜಿಒ ಹಾಗೂ ದಾನಿಗಳಿಂದ ಡಯಾಲಿಸಿಸ್ ಯಂತ್ರಗಳನ್ನು ಶಾಸಕರು ತರಿಸುತ್ತಾರೆ. ಸರ್ಕಾರ ಇವುಗಳ ನಿರ್ವಹಣೆಗೆ ತಂತ್ರಜ್ಞರನ್ನು ನೇಮಿಸಬೇಕು. ರಾಷ್ಟ್ರೀಯ ಬ್ಯಾಂಕುಗಳು ಸಹ ಪ್ರತಿ ಜಿಲ್ಲೆಗೂ 5 ಡಯಾಲಿಸಿಸ್ ಯಂತ್ರಗಳನ್ನು ನೀಡುವಂತೆ ಸರ್ಕಾರ ಕೋರಬೇಕು ಎಂದು ಸಲಹೆ ನೀಡಿದರು.

ಉಡುಪಿ ಜಿಲ್ಲೆಯಲ್ಲಿ 11 ಡಯಾಲಿಸಿಸ್ ಯಂತ್ರಗಳಲ್ಲಿ 5 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಗುತ್ತಿಗೆದಾರರ ಟೆಂಡರ್ ಪ್ರಕಿಯೆಯನ್ನು ರದ್ದುಗೊಳಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮುಖಾಂತರ ಡಯಾಲಿಸಿಸ್ ಸೇವೆಗಳನ್ನು ನೀಡಲಾಗುತ್ತಿದೆ. ಕೆಟ್ಟು ಹೋದ ಯಂತ್ರಗಳನ್ನು ಎಆರ್​ಎಸ್ ಹಾಗೂ ಎಬಿಅರ್​ಕೆ ಅನುದಾನದ ಅಡಿ ದುರಸ್ತಿಗೊಳಿಸಲಾಗುವುದು ಎಂದು ಸಚಿವರು, ಶಾಸಕ ಯಶ್‌ಪಾಲ್ ಎ.ಸುವರ್ಣ ಅವರ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ:ಕಾರವಾರದ ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೆ : ಸಚಿವ ಶರಣಪ್ರಕಾಶ ಪಾಟೀಲ್

ABOUT THE AUTHOR

...view details