ಕರ್ನಾಟಕ

karnataka

By

Published : Jul 16, 2021, 3:50 PM IST

ETV Bharat / state

ಬಿಎಸ್‌ವೈ ಬೆಂಬಲಿತ ಬಿಜೆಪಿ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವುದು ನಿಶ್ಚಿತ: ಎಂ.ಬಿ ಪಾಟೀಲ್​​

ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ಸಿಗ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಎಂಬಿ, ಪಾಟೀಲ್‌, ಈ ಬಗ್ಗೆ ಈಗಾಗಲೇ ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದೇನೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್​ ಹೇಳಿಕೆ
ಬೆಳಗಾವಿಯಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್​ ಹೇಳಿಕೆ

ಬೆಳಗಾವಿ: ಬಿಎಸ್‌ವೈ ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್‌ಗೆ ಕರೆತರುವುದು ನಿಶ್ಚಿತ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್​ ಹೇಳಿದ್ದಾರೆ. ನಾಗನೂರು ಮಠದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂಬರುವ ದಿನಗಳಲ್ಲಿ ನಿಶ್ಚಿತವಾಗಿ ಬಿಎಸ್‌ವೈ ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್‌ಗೆ ಕರೆ ತರುತ್ತೇವೆ ಎಂದರು‌.

ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ಬಹಳ ಎತ್ತರದ ನಾಯಕ. ಅದಕ್ಕೆ ಅವರು ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಪ್ರಕಾಶ್ ಹುಕ್ಕೇರಿ, ಎಂ.ಬಿ ಪಾಟೀಲ್‌ನಂಥ ಹಿರಿಯ ಲಿಂಗಾಯತ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಸ್ಥಾನಮಾನ ನೀಡುವ‌ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದೇವೆ ಎಂದರು.

ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ‌ನಿರ್ಲಕ್ಷಿಸುವುದಿಲ್ಲ. ವೀರೇಂದ್ರ ಪಾಟೀಲ್‌ ಅವರಿದ್ದಾಗ ಕಾಂಗ್ರೆಸ್ 180 ಸೀಟು ಪಡೆದುಕೊಂಡಿತ್ತು. ವೀರೇಂದ್ರ ಪಾಟೀಲರ ಬಳಿಕ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಅದನ್ನು ಮರಳಿ ಪಡೆಯಲು ಎಲ್ಲ ನಾಯಕರು ಒಗ್ಗೂಡಿ ಸಾಮೂಹಿಕವಾಗಿ ಪ್ರಯತ್ನ ಮಾಡುತ್ತೇವೆ. ಹಿರಿಯರ ಮಾರ್ಗದರ್ಶನದಲ್ಲಿ ಬಿಟ್ಟು ಹೋದವರನ್ನು ಪಕ್ಷಕ್ಕೆ ವಾಪಸ್ ಕರೆತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪಕ್ಷದಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ಸಿಗ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಈಗಾಗಲೇ ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ, ವೇಣುಗೋಪಾಲ್ ಜೊತೆ ಮಾತನಾಡಿದ್ದೇನೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆಯೂ ಮಾತ‌ನಾಡುತ್ತೇನೆ. ಲಿಂಗಾಯತ ಸಮುದಾಯಕ್ಕೂ ಪ್ರಾತಿನಿಧ್ಯ ಸಿಗಬೇಕು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ.

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಫೈಟ್ ವಿಚಾರದ ಬಗ್ಗೆ ಮಾತನಾಡುತ್ತಾ, ನನಗೆ ನಾನೇ ಸರ್ಟಿಫಿಕೇಟ್ ತಗೋಬೇಕಾ? ಜನರೇ ಸರ್ಟಿಫಿಕೇಟ್ ಕೊಡಬೇಕು. ಸ್ವಯಂಘೋಷಿತ ನಾನೇ ನಾಯಕ, ನಾನೇ ಸಿಎಂ ಅಂತ ಅಂದ್ರೆ ಆಗಲ್ಲ. ಜನ ಏನು ಬಯಸುತ್ತಾರೋ ಅದೇ ಆಗುತ್ತೆ. ಅದನ್ನ ನಾನೇ ಹೇಳಿಕೊಳ್ಳಬಾರದು, ಜನ ಹೇಳಿದಾಗ ನಾನು ಧ್ವನಿಯಾಗ್ತೀನಿ. ಜನ ಹೇಳಿದಾಗ ನಾನು ನಾಯಕನಾಗುತ್ತೇನೆ ಎಂದರು.

ಇದನ್ನೂ ಓದಿ : ದರ್ಶನ್​ ಪ್ರಕರಣ: ಗಂಗಾಧರ್ ಹೇಳಿಕೆಯನ್ನ ಪಿನ್ ಟೂ ಪಿನ್ ದಾಖಲಿಸುತ್ತಿರುವ ಪೊಲೀಸರು!

ABOUT THE AUTHOR

...view details