ಚಿಕ್ಕೋಡಿ (ಬೆಳಗಾವಿ) : ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಆನಂದ ಕಿರಶ್ಯಾಳ ಅವರು ಅಥಣಿಯಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಟ್ಟಣದಲ್ಲಿ ಆಯುರ್ವೇದ ಕಾಲೇಜು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಹಲವು ಅಧಿಕಾರಿಗಳು ಶಾಮಿಲಾಗಿದ್ದಾರೆ. ಕೆಲವು ಹಿರಿಯ ಅಧಿಕಾರಿಗಳೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ತೇರದಾಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ನಂದೀಶ ತೇರದಾಳ, ನಕಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಅವರು ಭಾನುವಾರ ಅಥಣಿ ಪಟ್ಟಣ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಜೊತೆ ಮಾತನಾಡುತ್ತ, ಅಥಣಿ ಪಟ್ಟಣದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಆನಂದ ಕಿರಶ್ಯಾಳ ಅವರು ಗ್ರಾಮ ಪಂಚಾಯತ್ ಅಧಿಕಾರಿಯೊಬ್ಬರೊಂದಿಗೆ ಸೇರಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡದೆ, ಪಂಚಾಯತಿಯಲ್ಲಿ ದಾಖಲು ಮಾಡದೆ, ಕಟ್ಟಡ ಪರವಾನಿಗೆ ಪ್ರಮಾಣಪತ್ರ ಸೇರಿ ಇತರ ಪ್ರಮಾಣ ಪತ್ರಗಳನ್ನು ಸಕಲಿಯಾಗಿ ಸೃಷ್ಟಿಸಿ, ಸರ್ಕಾರಕ್ಕೆ ಮೋಸ ಮಾಡಿ, ತೆರಿಗೆ ವಂಚಿಸಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾಲೇಜು ನಿರ್ಮಾಣ ಮಾಡಿದ್ದಾರೆ.
ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ಆಯುರ್ವೇದ ಕಾಲೇಜನ್ನು ಪ್ರಾರಂಭಿಸಲು ಮುಂದಾಗಿದ್ದಾರೆ. ಕಾಲೇಜಿಗೆ ಬೇಕಾದ ಪರವಾನಿಗೆಯನ್ನು ಪಡೆಯಲು ಆನಂದ ಕಿರಶ್ಯಾಳ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ. ಸಂಸ್ಥೆಯ ಹೆಸರಿನಲ್ಲಿ ಆಸ್ತಿ ದಾಖಲಾತಿಯಿಲ್ಲ. ಪ್ಲ್ಯಾನಿಂಗ್, ನಮೂನೆ 09 ಕೂಡ ಪಡೆಯದೇ ಕಾಲೇಜು ಪ್ರಾರಂಭ ಮಾಡುತ್ತಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದರು.