ಚಿಕ್ಕೋಡಿ: ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿ ಹಬ್ಬ ಕೂಡಾ ಒಂದು. ಇದೊಂದು ಹೆಣ್ಣು ಮಕ್ಕಳ ಹಬ್ಬ ಎಂದರೆ ತಪ್ಪಾಗದು. ಮದುವೆಯಾದ ಬಳಿಕ ಮೊದಲ ಪಂಚಮಿ ಹಬ್ಬವನ್ನು ತವರು ಮನೆಯಲ್ಲಿ ಮಾಡಬೇಕು ಎನ್ನುವುದು ವಾಡಿಕೆ. ಆದರೆ ಈ ಕೊರೊನಾದಿಂದ ಈ ಬಾರಿ ತವರು ಮನೆಯಲ್ಲಿ ಪಂಚಮಿ ಹಬ್ಬ ಆಚರಿಸಿಕೊಳ್ಳುವವರಿಗೆ ನಿರಾಸೆಯಾಗಿದೆ.
ಪಂಚಮಿ ಹಬ್ಬಕ್ಕೆ ತವರು ಮನೆಗೆ ಹೆಣ್ಣು ಮಕ್ಕಳನ್ನು ಕರೆಸಬೇಡಿ: ಡಂಗೂರದ ಮೂಲಕ ಸೂಚನೆ..!
ಕೊರೊನಾದ ಕಾರಣದಿಂದಾಗಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೆ ಯಾರೂ ಕೂಡಾ ಹೆಣ್ಣು ಮಕ್ಕಳನ್ನು ತವರು ಮನೆಗೆ ಕಳಿಸಕೂಡದು ಹಾಗೂ ಯಾರು ಕೂಡಾ ತಮ್ಮ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರಬಾರದು ಎಂದು ಗ್ರಾಮ ಪಂಚಾಯತಿ ಡಂಗೂರದ ಮೂಲಕ ಜನರಿಗೆ ಸೂಚನೆ ನೀಡಿದೆ.
ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಅತಿ ಸುಂದರವಾಗಿ ಆಚರಿಸುತ್ತಾರೆ. ಆದರೆ, ಈ ಕೊರೊನಾ ರೋಗದಿಂದ ಈ ಬಾರಿ ಪಂಚಮಿ ಹಬ್ಬ ಆಚರಿಸುವುದಿಲ್ಲ. ಯಾರೂ ಕೂಡಾ ಹೆಣ್ಣು ಮಕ್ಕಳನ್ನು ತವರು ಮನೆಗೆ ಕಳಿಸಕೂಡದು ಹಾಗೂ ಯಾರು ಕೂಡಾ ತಮ್ಮ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರಬಾರದು. ಹಾಗೆಯೇ ಯಾರೂ ಕೂಡಾ ಪಂಚಮಿ ಉಂಡೆಯನ್ನು ಸಂಬಂಧಿಕರಿಗೆ ಕೊಡುವುದನ್ನು ನಿಷೇಧಿಸಲಾಗಿದೆ ಎಂದು ಗ್ರಾಮ ಪಂಚಾಯತಿ ಡಂಗೂರದ ಮೂಲಕ ಜನರಿಗೆ ಸೂಚನೆ ನೀಡಿದೆ..
ಸಾಮಾಜಿಕ ಜಾಲತಾಣಗಳಲ್ಲಿ ಹಳ್ಳಿಗಳಲ್ಲಿ ಸಾರಿರುವ ಡಂಗೂರಗಳ ವಿಡಿಯೋಗಳು ಹರಿದಾಡುತ್ತಿದೆ. ಪ್ರತಿವರ್ಷ ನಾಗರ ಪಂಚಮಿಗೆ ಎಲ್ಲರೂ ಮನೆಗಳಲ್ಲಿ ನಾನಾ ಬಗೆಯ ಉಂಡೆಗಳನ್ನು ತಯಾರಿಸಿ, ನೆರೆ ಹೊರೆ ಮತ್ತು ಸಂಬಂಧಿಕರ ನಡುವೆ ಸೌಹಾರ್ದತೆ, ವಿಶ್ವಾಸ ವೃದ್ಧಿಯ ಪ್ರತೀಕವಾಗಿ ಪರಸ್ಪರರು ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಯಾವುದೇ ರೀತಿ ಉಂಡೆಗಳನ್ನು ಕೊಡುವ ಹಾಗಿಲ್ಲ, ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವಂತಿಲ್ಲ ಎಂದು ಹಳ್ಳಿಗಳಲ್ಲಿ ಡಂಗೂರ ಸಾರುತ್ತಿದ್ದಾರೆ.