ಬೆಳಗಾವಿ:ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಗೆ ಕಾಂಗ್ರೆಸ್ನವರು ಕಾರಣ ಎಂಬ ಸಿದ್ದರಾಮಯ್ಯನವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೋವಿನ ಹೇಳಿಕೆಗಳನ್ನು ನನಗೆ ಕೆಲವರು ತಿಳಿಸಿದ್ದಾರೆ. ಸಿದ್ದರಾಮಯ್ಯ ಹಿರಿಯ ರಾಜಕಾರಣಿ, ಶಾಸಕಾಂಗ ಪಕ್ಷದ ನಾಯಕರಿದ್ದಾರೆ. ಎಂತವರಿಗಾಗಲಿ ಚೆನ್ನಾಗಿ ಕೆಲಸ ಮಾಡಿ ಸೋತಾಗ ನೋವಾಗುತ್ತದೆ. ರಾಜಕೀಯವಾಗಿ ಆ ಕ್ಷೇತ್ರ ಪುನರ್ಜನ್ಮ ಕೊಟ್ಟಿದೆ. ಚಾಮುಂಡೇಶ್ವರಿಯಲ್ಲಿ ಅಷ್ಟು ಅಂತರದಿಂದ ಸೋಲ್ತಾರೆಂದು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯರವರ ಕರ್ಮಭೂಮಿ, ಜನ್ಮಭೂಮಿ ಎರಡೂ ಕೂಡ ಅದೇ ಆಗಿತ್ತು. ಯಾವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಕ್ಷೇತ್ರದ ಜನರ ಮುಂದೆ ಅಳಲು ತೋಡಿಕೊಂಡಿರಬಹುದು. ಆದರೆ ಇದು ಅವರ ವೈಯಕ್ತಿಕ ಅಭಿಪ್ರಾಯ. ಸಿದ್ದರಾಮಯ್ಯನವರು ಮಾಡಿದ್ದ ಕಾರ್ಯಕ್ಕೆ ಅವರು ಗೆಲ್ಲಲೇಬೇಕಿತ್ತು. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಎಲೆಕ್ಷನ್ ಎದುರಿಸಿದ್ದೇವೆ. ಸಿದ್ದರಾಮಯ್ಯನವರೇ ನಾಯಕರಾಗಬೇಕು ಎಂಬ ಇಚ್ಛೆ ನಮ್ಮದಾಗಿತ್ತು. ಯಾವ ದೃಷ್ಟಿಯಲ್ಲಿ ಸಿದ್ದರಾಮಯ್ಯ ಆ ರೀತಿಯ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಇಂಟರ್ನಲ್ ಏನಾಯ್ತು ಗೊತ್ತಿಲ್ಲ, ನಾನದನ್ನ ಅಧ್ಯಯನ ಮಾಡೋಕೂ ಹೋಗಿಲ್ಲ ಎಂದರು.
ಓದಿ...ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಎರಡನೇ ಬಾರಿ ಸಿಎಂ ಆಗೋದು ನಮ್ಮವರಿಗೇ ಬೇಡವಾಗಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಂತ ಹೆಸರು ಹೇಳಿದ್ರೆ ಹೇಳಬಹುದು, ಜನರಲ್ ಆಗಿ ಹೇಳಿದ್ರೆ ನಾವು ಕೇಳಕ್ಕಾಗುತ್ತಾ? ನಮಗಂತೂ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಲಿ ಅಂತಾನೇ ಇತ್ತು. ಹುಣಸೂರಲ್ಲಿ ನಾನೇ ಭಾಷಣ ಮಾಡಿ ಬಂದಿದ್ದೆ. ರಾಹುಲ್ ಗಾಂಧಿ ಆದಿಯಾಗಿ ಎಲ್ಲರೂ ಸಂಪೂರ್ಣ ಆಶೀರ್ವಾದ ಕೊಟ್ಟಿದ್ರು. ಯಾವ ಸಿಎಂಗೂ ಎರಡು ಕ್ಷೇತ್ರದಲ್ಲಿ ನಿಲ್ಲೋಕೆ ಬಿಡುತ್ತಿರಲಿಲ್ಲ. ಎಸ್.ಎಂ.ಕೃಷ್ಣಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಕೊಟ್ಟಿರಲಿಲ್ಲ. ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಸೋಲಿಗೆ ಕಾರಣ ಅವರೇ ಹುಡುಕುತ್ತಾರೆ. ಕರ್ಮಭೂಮಿಯಲ್ಲಿ ಯಾರಿಗೆ ಸಹಾಯ ಮಾಡಿರ್ತೇವೆ ಅವರಿಂದ ತೊಂದರೆ ಆದಾಗ ನೋವಾಗುತ್ತದೆ ಎಂದರು.