ಕರ್ನಾಟಕ

karnataka

ಅವ್ಯವಸ್ಥೆ ಸರಿಪಡಿಸಿ ಆಸ್ಪತ್ರೆಗಳಿಗೆ ಜೀವ ರಕ್ಷಕ ಔಷಧ ಪೂರೈಸಲಾಗುವುದು: ದಿನೇಶ್​ ಗುಂಡೂರಾವ್

By ETV Bharat Karnataka Team

Published : Dec 12, 2023, 7:19 PM IST

ಸರ್ಕಾರಿ ಆಸ್ಪತ್ರೆಗಳಿಗೆ ಜೀವ ರಕ್ಷಕ ಔಷಧವನ್ನು ಶೀಘ್ರವಾಗಿ ಪೂರೈಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದಿನೇಶ್​ ಗುಂಡೂರಾವ್
ದಿನೇಶ್​ ಗುಂಡೂರಾವ್

ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಿಗೆ ಜೀವ ರಕ್ಷಕ ಔಷಧ ಪೂರೈಕೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸಿ, ಶೀಘ್ರವಾಗಿ ಔಷಧ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್​ ಗುಂಡೂರಾವ್ ಹೇಳಿದ್ದಾರೆ.

ವಿಧಾನ ಪರಿಷತ್​ನಲ್ಲಿ ಸದಸ್ಯೆ ಹೇಮಲತಾ ನಾಯಕ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯದ ಬಗ್ಗೆ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ನಿಗದಿತ ಸಮಯಕ್ಕೆ ಔಷಧ ಸಿಗುವುದಿಲ್ಲ ಎನ್ನುವುದು ಗಂಭೀರ ವಿಷಯವಾಗಿದೆ. ಆಸ್ಪತ್ರೆಗಳಿಗೆ ಸಕಾಲಕ್ಕೆ ಔಷಧ ಪೂರೈಸಬೇಕಾಗಿರುವುದು ನಮ್ಮ ಮೂಲ ಜವಾಬ್ದಾರಿಯಾಗಿದೆ. ಆಸ್ಪತ್ರೆಗಳಿಗೆ ಶೇ.35ರಷ್ಟು ಮಾತ್ರ ಔಷಧ ಪೂರೈಕೆಯಾಗುತ್ತಿದೆ. ಟೆಂಡರ್ ಮೂಲಕ ಔಷಧ ಖರೀದಿಸುವ ಪ್ರಕ್ರಿಯೆಯಲ್ಲಿ ಸರಬರಾಜುದಾರರು ಭಾಗಿಯಾಗುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎನ್ನಲಾಗುತ್ತಿದ್ದು, ಈ ಅವ್ಯವಸ್ಥೆಯನ್ನು ಎರಡು ಮೂರು ತಿಂಗಳೊಳಗೆ ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಆಸ್ಪತ್ರೆಗಳಲ್ಲಿ ಕೆಲವೊಂದು ಪ್ರಮುಖ ಔಷಧಗಳು ಸದಾಕಾಲ ಲಭ್ಯತೆಯಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಕೆಲ ಪ್ರಮುಖ ಔಷಧಗಳನ್ನು ಖರೀದಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಔಷಧವು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗಬೇಕು. ಔಷಧ ಪೂರೈಕೆ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಹ ಸರಬರಾಜುದಾರರು ಮುಕ್ತವಾಗಿ ಭಾಗಿಯಾಗಬೇಕು. ಸರಿಯಾದ ಸಮಯಕ್ಕೆ ಔಷಧ ಸರಬರಾಜು ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಈಗಿರುವ ಅವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹೇಮಲತಾ ನಾಯಕ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಕೆಎಸ್‌ಎಂಎಸ್‌ಸಿಎಲ್ ಔಷಧಗಳನ್ನು ಖರೀದಿಸಿ, ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಿಲ್ಲ. ಇದರಿಂದಾಗಿ ಹಾವು, ನಾಯಿ ಕಡಿತದಂತಹ ಚಿಕಿತ್ಸೆಗಳು ಮಾತ್ರವಲ್ಲದೇ ಕ್ಯಾನ್ಸರ್, ಹೃದಯಾಘಾತ ಮೊದಲಾದ ಗಂಭೀರ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಗಳು ಸಿಗದೇ ಬಡ ರೋಗಿಗಳು ಪರದಾಡುವಂತಾಗಿದೆ. ಔಷಧ ಪೂರೈಕೆ ಟೆಂಡರ್ ಪ್ರಕ್ರಿಯೆಯನ್ನು ಇನ್ನು ಮುಗಿಸಿಲ್ಲ. ಬಡ ರೋಗಿಗಳು ವೈದ್ಯರು ಬರೆದು ಕೊಡುವ ಔಷಧಗಳನ್ನು ಹೊರಗಡೆ ದುಬಾರಿ ಬೆಲೆ ತೆತ್ತು ಖರೀದಿಸಬೇಕಿದೆ. ಇದಕ್ಕ ಸೂಕ್ತ ಕ್ರಮ ವಹಿಸಬೇಕು ಎಂದು ಸದಸ್ಯರಾದ ಹೇಮಲತಾ ನಾಯಕ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಪರಿಷತ್‌ನಲ್ಲಿ 5 ವಿಧೇಯಕಗಳು ಚರ್ಚೆಗೆ: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, 2023, ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ 2023 ಸೇರಿದಂತೆ ಐದು ವಿಧೇಯಕಗಳನ್ನು ಕಾರ್ಯದರ್ಶಿಯವರು ಇಂದು ವಿಧಾನ ಪರಿಷತ್ ಮುಂದಿಟ್ಟರು.

ಕರ್ನಾಟಕ ವೈದ್ಯಕೀಯ ಕೋರ್ಸ್​ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ 2023, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ (ತಿದ್ದುಪಡಿ) ವಿಧೇಯಕ 2023 ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023ಗಳನ್ನು ಕಾರ್ಯದರ್ಶಿಗಳು ಸಭೆಯ ಮುಂದಿಟ್ಟರು. ಈ ವಿಧೇಯಕಗಳ ಪರ್ಯಾಯಲೋಚನೆ ಹಾಗೂ ಅಂಗೀಕಾರ ಪ್ರಕ್ರಿಯೆ ಇದೆ ಅಧಿವೇಶನದಲ್ಲಿ ನಡೆಯಲಿದೆ.

ಇದನ್ನೂ ಓದಿ:ಏತ ನೀರಾವರಿ ಯೋಜನೆಗಳ ದುರಸ್ತಿ ಕಾರ್ಯ‌ ಶೀಘ್ರ ಪೂರ್ಣ: ಡಿಸಿಎಂ

ABOUT THE AUTHOR

...view details