ಕರ್ನಾಟಕ

karnataka

ETV Bharat / state

ಹಬ್ಬದ ಸಂಭ್ರಮದಲ್ಲೇ ಬೆಳಗಾವಿಯಲ್ಲಿ ಡೆಂಘೀ ದಾಂಗುಡಿ.. ಜ್ವರದಿಂದ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡಿ - ಜಿಲ್ಲಾ ನಿಯಂತ್ರಣಾಧಿಕಾರಿ ಡಾ ಎಂ ಎಸ್‌ ಪಲ್ಲೇದ

ಬೆಳಗಾವಿಯಲ್ಲಿ ಪ್ರಸಕ್ತ ಜನವರಿಯಿಂದ ಸೆಪ್ಟೆಂಬರ್‌ವರೆಗೆ 207 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 1,683ಕ್ಕೂ ಹೆಚ್ಚು ಮಂದಿಯ ರಕ್ತದ ಮಾದರಿ ತಪಾಸಣೆ ನಡೆಸಲಾಗಿದೆ.

ಹಬ್ಬದ ಸಂಭ್ರಮದಲ್ಲೇ ಬೆಳಗಾವಿಯಲ್ಲಿ ಡೆಂಗ್ಯು ದಾಂಗುಡಿ
ಹಬ್ಬದ ಸಂಭ್ರಮದಲ್ಲೇ ಬೆಳಗಾವಿಯಲ್ಲಿ ಡೆಂಗ್ಯು ದಾಂಗುಡಿ

By

Published : Oct 4, 2022, 3:29 PM IST

Updated : Oct 4, 2022, 3:39 PM IST

ಬೆಳಗಾವಿ: ಕೋವಿಡ್ ಕಾರಣಕ್ಕೆ ಎರಡು ವರ್ಷಗಳ ಕಾಲ ಮಂಕಾಗಿದ್ದ ಹಬ್ಬಗಳನ್ನು ಈ ಸಲ ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂಬ ಖುಷಿಯಲ್ಲಿರುವಾಗಲೇ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಡೆಂಘೀ ದಾಂಗುಡಿ ಆತಂಕ ಸೃಷ್ಟಿಸಿದೆ.

ಬೆಳಗಾವಿಯಲ್ಲಿ ಪ್ರಸಕ್ತ ಜನವರಿಯಿಂದ ಸೆಪ್ಟೆಂಬರ್‌ವರೆಗೆ 207 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 1,683ಕ್ಕೂ ಹೆಚ್ಚು ಮಂದಿಯ ರಕ್ತದ ಮಾದರಿ ತಪಾಸಣೆ ನಡೆಸಲಾಗಿದೆ. ಡೆಂಘೀಯಿಂದಾಗಿ ನೆರೆ ರಾಜ್ಯದಲ್ಲಿ ಚಿಕಿತ್ಸೆಗೆ ಒಳಗಾಗಿ ಮೃತಪಟ್ಟವರ ಮಾಹಿತಿ ಇದೆ. ಈ ಮಧ್ಯೆ ಆರೋಗ್ಯ ಇಲಾಖೆಯಿಂದ ತಪಾಸಣಾ ಕ್ರಮ ಜರುಗಿಸಲಾಗಿದೆ.

ಹಬ್ಬದ ಸಂಭ್ರಮದಲ್ಲೇ ಬೆಳಗಾವಿಯಲ್ಲಿ ಡೆಂಗ್ಯು ದಾಂಗುಡಿ

ಆದರೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ‌ಆಕ್ಷೇಪಗಳೂ ವ್ಯಕ್ತವಾಗ್ತಿವೆ. ಲಾರ್ವಾ ಸಮೀಕ್ಷೆ, ಅರಿವು ಮೂಡಿಸುವುದು, ತ್ಯಾಜ್ಯ ವಿಲೇವಾರಿ, ಔಷಧ ಸಂಗ್ರಹ, ಬಿಳಿರಕ್ತ ಕಣಗಳ ಸಂಗ್ರಹ ಸೇರಿದಂತೆ ಇನ್ನಷ್ಟು ಮುಂಜಾಗ್ರತಾ ಕ್ರಮಗಳು ಅಗತ್ಯ ಇದೆ ಎನ್ನುತ್ತಾರೆ ಸೋಂಕಿತರು.

ಯುವಕನ ಸಾವು:ಡೆಂಘೀ ಜ್ವರದಿಂದ ಬಳಲುತ್ತಿದ್ದ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಯುವಕ ಪ್ರೇಮ್ ಸಂಜಯ ಕಮತೆ (19) ಶುಕ್ರವಾರ ಮಹಾರಾಷ್ಟ್ರದ ಇಚಲಕರಂಜಿಯ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಸಾವಿನಿಂದ ಜಿಲ್ಲೆಯಲ್ಲಿ ಡೆಂಘೀ ಭೀತಿ ಆವರಿಸಿದೆ. ಜ್ವರ ಕಾಣಿಸಿಕೊಂಡ ಕೆಲವರು ಆಸ್ಪತ್ರೆಗೆ ದೌಡಾಯಿಸಿ ತಪಾಸಣೆಗೆ ಒಳಗಾಗಿದ್ದಾರೆ.‌ ಡೆಂಘೀ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ. ಜ್ವರ ಬಂದರೆ ತಕ್ಷಣವೇ ಆಸ್ಪತ್ರೆಗೆ ‌ಭೇಟಿ ನೀಡಬೇಕು. ಸಾಧ್ಯವಾದ್ರೆ ರಕ್ತ‌ ಪರೀಕ್ಷೆ ‌ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಮನವಿ ಮಾಡ್ತಿದ್ದಾರೆ.

ಸೋಂಕು ಹೆಚ್ಚಳಕ್ಕೆ ಕಾರಣವೇನು?: ‘ಈಡೀಸ್‌ ಈಜಿಪ್ಟೈ’ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಘೀ ಬರುತ್ತದೆ. ಶುದ್ಧ ನೀರಿನಲ್ಲಿ ಹುಟ್ಟುವುದೇ ಈ ಸೊಳ್ಳೆಯ ಅಪಾಯಕಾರಿ ಗುಣ. ಇದೊಂದೇ ಸೊಳ್ಳೆಯಿಂದ ಡೆಂಗ್ಯು, ಚಿಕೂನ್‌ ಗುನ್ಯ ಹಾಗೂ ಜೀಕಾ (ಮಿದುಳು ಬೆಳವಣಿಗೆಗೆ ಸಮಸ್ಯೆ) ಸೋಂಕುಗಳು ಹುಟ್ಟುತ್ತವೆ.

ನಗರ, ಪಟ್ಟಣಗಳಲ್ಲಿ ಮನೆ ಬಳಕೆಯ ವಸ್ತುಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಪ್ಲಾಸ್ಟಿಕ್‌ ಬ್ಯಾಗ್‌, ಪ್ಲಾಸ್ಟಿಕ್‌ ಬಕೆಟ್‌, ಬುಟ್ಟಿ, ಕೊಡ, ವಾಹನಗಳ ಟೈರ್, ಟ್ಯೂಬ್‌ಗಳ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ರೂಢಿ. ಅಂಥ ವಸ್ತುಗಳಲ್ಲಿ ಮಳೆ ನೀರು ನಿಲ್ಲುತ್ತದೆ. ಒಂದು ಸೊಳ್ಳೆ ಒಂದು ಹನಿ ನೀರಿನಲ್ಲಿಯೂ ಮೊಟ್ಟೆ ಇಡಬಲ್ಲದು. ಹೀಗೆ ಒಂದು ಬಾರಿಗೆ ಒಂದು ಸೊಳ್ಳೆ 300ರಿಂದ 350 ಮೊಟ್ಟೆಗಳನ್ನು ಇಡುತ್ತದೆ. ಒಂದೇ ವಾರದಲ್ಲಿ ಅವೆಲ್ಲವೂ ರೆಕ್ಕೆ ಬೆಳೆದು ಹಾರಾಡಲು ಶುರು ಮಾಡುತ್ತವೆ. ಇದೇ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ಡೆಂಘೀ ಮಾಹಿತಿ: ಈವರೆಗೆ ಜಿಲ್ಲೆಯಲ್ಲಿ 3019 ಡೆಂಘೀ ಪ್ರಕರಣ ಗುರುತಿಸಲಾಗಿದೆ. 1683 ಮಾದರಿ ಪರೀಕ್ಷೆ ನಡೆಸಲಾಗಿದೆ. 207 ಸರ್ಕಾರಿ ಲ್ಯಾಬ್‌ನಿಂದ ಡೆಂಘೀ ಖಚಿತಪಟ್ಟಿದ್ದು, ಹಲವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ವರ್ಷ 91 ಡೆಂಘೀ ಪ್ರಕರಣ ಬೆಳಕಿಗೆ ಬಂದಿದ್ದವು. ಈ ವರ್ಷ ಸೋಂಕಿತರ ಪ್ರಮಾಣ ದುಪ್ಪಟ್ಟಾಗಿದೆ. ಬಿಮ್ಸ್‌, ಜಿಲ್ಲಾ ಆಸ್ಪತ್ರೆ, ಕೆಎಲ್‌ಇಎಸ್‌ ಆಸ್ಪತ್ರೆ, ಡಯಾಗ್ನಾಸ್ಟಿಕ್‌ ಸೆಂಟರ್‌ ಸೇರಿ ನಾಲ್ಕು ವಿಆರ್‌ಡಿಎಲ್‌ (ವೈರಸ್‌ ರಿಸರ್ಜ್ ಅಂಡ್‌ ಡಯಾಗ್ನಾಸ್ಟಿಕ್‌ ಲ್ಯಾಬ್‌) ಪ್ರಯೋಗಾಲಯಗಳು ಇವೆ. ವೈರಾಣು ಪರೀಕ್ಷೆ ನಿರಂತರವಾಗಿ ಸಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ ಎಂ ಎಸ್‌ ಪಲ್ಲೇದ, ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ತೀವ್ರ ಜ್ವರ ಹಾಗೂ ಬೊಬ್ಬೆ ಲಕ್ಷಣಗಳು ಕಂಡುಬಂದ ತಕ್ಷಣ ತಪಾಸಣೆಗೆ ಒಳಗಾಗಬೇಕು. ಇದರಿಂದ ಪ್ಲೇಟ್‌ಲೇಟ್‌ಗಳು ಕಡಿಮೆಯಾಗುವ ಮುನ್ನ ಚಿಕಿತ್ಸೆ ಕೊಡಬಹುದು. ಡೆಂಘೀ ‌ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಕೋರಿದರು‌.

ಡೆಂಘೀಯಿಂದ ರಕ್ಷಣೆ ಹೇಗೆ?: ಸೊಳ್ಳೆಯಿಂದ ರಕ್ಷಣೆಗೆ ಮಕ್ಕಳಿಗೆ ಉದ್ದ ತೋಳಿನ ಉಲನ್‌ ಬಟ್ಟೆ ಹಾಕಬೇಕು. ಮಲಗುವಾಗ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಬೇಕು. ಪ್ರತಿದಿನ ಬೇವಿನ ತಪ್ಪಲು ಅಥವಾ ಸೊಳ್ಳೆ ಬತ್ತಿಗಳನ್ನು ಉರಿಸಬೇಕು. ಮನೆಯ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ, ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ವಾಟರ್‌ ಫಿಲ್ಟರ್‌, ಬಕೇಟ್​ ಟ್ಯಾಂಕ್‌, ಪೂಜೆಯ ಜಗಲಿಕಟ್ಟೆ, ಡ್ರಮ್‌ಗಳನ್ನು ಎರಡು ದಿನಕ್ಕೊಮ್ಮೆ ಚೆನ್ನಾಗಿ ಉಜ್ಜಿ ತೊಳೆಯಬೇಕು.

ಓದಿ:ಮದ್ದು ಪಡೆದರೂ ಮಕ್ಕಳಲ್ಲಿ ಕಡಿಮೆಯಾಗದ ಜ್ವರ, ಕೆಮ್ಮು, ಶೀತ: ವೈದ್ಯರು ಏನಂತಾರೆ?

Last Updated : Oct 4, 2022, 3:39 PM IST

ABOUT THE AUTHOR

...view details