ಬೆಳಗಾವಿ:ಮಹದಾಯಿ ಯೋಜನೆಗೆ ಕೇಂದ್ರದ ಪರಿಸರ ಇಲಾಖೆ ತಡೆಯಾಜ್ಞೆ ನೀಡಿದ್ದು, ಈ ಸಂಬಂಧ ಶೀಘ್ರವೇ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಬಳಿ ತೆರಳಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಜಾರಿಗೆ ಈ ಹಿಂದೆ ಪರಿಸರ ಇಲಾಖೆ ಒಪ್ಪಿಗೆ ನೀಡಿತ್ತು. ಆದರೆ, ಈಗ ತಾತ್ಕಾಲಿಕ ತಡೆ ನೀಡಿ, ಆದೇಶ ಹೊರಡಿಸಿದೆ. ಮೋದಿ ಜೊತೆಗೆ ಪರಿಸರ ಇಲಾಖೆ ಸಚಿವರನ್ನು ಭೇಟಿ ಮಾಡಲಿದ್ದೇವೆ. ಮಲಪ್ರಭಾ ನದಿ ತೀರದ ಜನರ ಸಂಕಷ್ಟವನ್ನು ಕೇಂದ್ರಕ್ಕೆ ಮನವರಿಕೆ ಮಾಡಲಾಗುವುದು. ಭಾಷೆ, ಗಡಿ, ಜಲ ವಿಷಯಗಳು ಸೌಹಾರ್ದವನ್ನು ಹೆಚ್ಚಿಸಬೇಕು, ಹದಗೆಡಿಸಬಾರದು ಎಂದರು.
ಗಡಿ, ಭಾಷೆ ವಿಷಯಗಳು ನಮ್ಮ ಬದುಕು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಬದುಕನ್ನು ಕಟ್ಟಿಕೊಡಬೇಕಾಗಿದೆ. ನಾವು ಯಾರನ್ನೂ ದೂರುವುದಿಲ್ಲ. ಬದಲಿಗೆ ಕೇಂದ್ರದ ನಿರ್ಧಾರದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಎಲ್ಲ ಅಡೆತಡೆ ನಿವಾರಿಸಿ, ಕರ್ನಾಟಕದ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಲಿದೆ. ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬಂದಾಗ ನಾವೆಲ್ಲರೂ ಒಂದಾಗಿ ರಾಜ್ಯದ ಪರವಾಗಿ ನಿಲುವು ತೋರುತ್ತೇವೆ ಎಂದರು.