ಕರ್ನಾಟಕ

karnataka

By ETV Bharat Karnataka Team

Published : Oct 12, 2023, 3:54 PM IST

ETV Bharat / state

ನವೆಂಬರ್‌ 1 ರಂದು ಕರಾಳ ದಿನಾಚರಣೆಗೆ ಅನುಮತಿ ಇಲ್ಲ: ಬೆಳಗಾವಿ ಜಿಲ್ಲಾಧಿಕಾರಿ

ಬೆಳಗಾವಿಯ ಜಿ.ಪಂ.ಸಭಾಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು.

ಬೆಳಗಾವಿ ಡಿ ಸಿ ನಿತೇಶ್​ ಪಾಟೀಲ್
ಬೆಳಗಾವಿ ಡಿ ಸಿ ನಿತೇಶ್​ ಪಾಟೀಲ್

ಬೆಳಗಾವಿ ಡಿ.ಸಿ.ನಿತೇಶ್​ ಪಾಟೀಲ್

ಬೆಳಗಾವಿ : ಮಹಾತ್ಮಾ ಪುಲೆ ಆರೋಗ್ಯ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ನಿರ್ಣಯ ಕೈಗೊಂಡಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಕರ್ನಾಟಕ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಬೆಳಗಾವಿಯ ಜಿ.ಪಂ.ಸಭಾಭವನದಲ್ಲಿ ಇಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ಸರ್ಕಾರದ ನಿರ್ಣಯ ಖಂಡಿಸಿದರು.

ಕರ್ನಾಟಕದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದೆ. ಮರಾಠಿ ಭಾಷಿಕರನ್ನು ಪ್ರಚೋದಿಸಲು ಚಂದಗಡದಲ್ಲಿ ಕಚೇರಿ ಸ್ಥಾಪಿಸುತ್ತಿದ್ದಾರೆ. ಗಡಿ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಸಚಿವರು, ಓರ್ವ ಸಂಸದರನ್ನೂ ನೇಮಿಸಿದೆ. ಆದರೆ, ನಮ್ಮ ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರ, ಸಂರಕ್ಷಣಾ ಆಯೋಗ ಇದ್ದೂ ಇಲ್ಲದಂತಾಗಿದೆ. ಹಾಗಾಗಿ, ಈ ಎಲ್ಲ ವಿಚಾರಗಳ ಕುರಿತು ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಮೂಲಕ ಸಿಎಂ ‌ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಈ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಹಿಂದಿನ ವರ್ಷದಂತೆ ಈ ಬಾರಿಯೂ ಕರಾಳ ದಿನ ಆಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸಭೆಯಲ್ಲಿ ಘೋಷಿಸಿದರು. ಜಿಲ್ಲಾಧಿಕಾರಿಗಳು ಈ ನಿರ್ಣಯ ಘೋಷಿಸುತ್ತಿದ್ದಂತೆ ಸಭೆಯಲ್ಲಿ ನೆರೆದಿದ್ದ ಕನ್ನಡಪರ ಸಂಘಟನೆ ಮುಖಂಡರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ:ಮಹಾರಾಷ್ಟ್ರದ ಸಚಿವರು, ಸಂಸದರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಿಸಿ ನಿತೇಶ್ ಪಾಟೀಲ (ಡಿಸೆಂಬರ್​ -5-2023) ಹೇಳಿದ್ದರು. ನಗರದಲ್ಲಿ ಮಾತನಾಡಿದ್ದ ಅವರು, ಅವರು ಜಿಲ್ಲೆಗೆ ಬಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಅವರ ಸುರಕ್ಷತೆಗೂ ಸಮಸ್ಯೆ ಇದೆ. ಅವರಾಗೇ ಪ್ರವಾಸ ರದ್ದು ಪಡಿಸುವ ನಿರೀಕ್ಷೆ ಇದೆ. ಇಲ್ಲವಾದರೆ ನಾವೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಇದನ್ನೂ ಓದಿ:ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ: ಬೆಳಗಾವಿ ಡಿಸಿ ನಿತೇಶ್​ ​

ABOUT THE AUTHOR

...view details