ಬೆಳಗಾವಿ:ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ವಿವಾದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಎಡಿಜಿಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸುದೀರ್ಘ ಸಂಧಾನ ಸಭೆ ಮೂಲಕ ಇತ್ಯರ್ಥಗೊಂಡಿದೆ.
ಸಂಧಾನ ಸಕ್ಸಸ್: ಅಭಿಮಾನಿಗಳು ಗುರುತಿಸಿದ್ದ ಜಾಗದಲ್ಲೇ ರಾಯಣ್ಣನ ಪುತ್ಥಳಿ
ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ ಬೇಡಿಕೆ ಹಾಗೂ ಇಚ್ಛೆಯಂತೆ ವಿವಾದ ಇತ್ಯರ್ಥ ಪಡಿಸಲಾಗಿದೆ. ಇತ್ತ ಶಿವಸೇನೆ ಹಾಗೂ ಎಂಇಎಸ್ ಮುಖಂಡರ ಬೇಡಿಕೆಯಂತೆ ಪೀರನವಾಡಿ ವೃತ್ತಕ್ಕೆ ಶಿವಾಜಿ ಸರ್ಕಲ್ ಎಂದು ಹೆಸರಿಸಲು ನಿರ್ಣಯ ಕೈಗೊಳ್ಳಲಾಯಿತು.
ಈ ಸಂಬಂಧ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಅಭಿಮಾನಿಗಳು ಗುರುತಿಸಿದ್ದ ಜಾಗದಲ್ಲೇ ಸಂಗೊಳ್ಳಿ ರಾಯಣ್ಣ ಮೂರ್ತಿ ರಾರಾಜಿಸಲಿದೆ.
ರಾಯಣ್ಣನ ಅಭಿಮಾನಿಗಳು ಹಾಗೂ ಕನ್ನಡ ಸಂಘಟನೆ ಮುಖಂಡರು ಗುರುತಿಸಿದ್ದ ಜಾಗದಲ್ಲೇ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಆದರೆ ಪೀರನವಾಡಿ ವೃತ್ತಕ್ಕೆ ಶಿವಾಜಿ ಸರ್ಕಲ್ ಎಂದು ಹೆಸರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕೆ ಉಭಯ ಬಣದ ಮುಖಂಡರು ಸಮ್ಮತಿ ಸೂಚಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ನೋಟಿಫಿಕೇಶನ್ ಹೊರಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಸಭೆಗೆ ಭರವಸೆ ನೀಡಿದರು.