ಬೆಳಗಾವಿ:ಬೆಳಗಾವಿಯಲ್ಲಿ ನಡೆದ ಶೆಫರ್ಡ್ಸ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶವು ಕುರುಬ ಸಮುದಾಯ ಮತ್ತು ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದರು. ನೆಚ್ಚಿನ ನಾಯಕನ ಕಣ್ತುಂಬಿಕೊಂಡು ಜನ ಪುಳಕಿತರಾದರು.
ಹೌದು, ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಮಂಗಳವಾರ ಆಯೋಜಿಸಿದ್ದ ಶೆಫರ್ಡ್ಸ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶವು ದಾವಣಗೆರೆಯಲ್ಲಿ ಕಳೆದ ವರ್ಷ ನಡೆದ ಸಿದ್ದರಾಮೋತ್ಸವ ನೆನಪಿಸಿತು. ಅಷ್ಟೊಂದು ಸಂಖ್ಯೆಯಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಕುರುಬ ಸಮುದಾಯದ ಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಕಾಗಿನೆಲೆಯ ನಿಜಗುಣಾನಂದ ಸ್ವಾಮೀಜಿ ಸೇರಿ ಮತ್ತಿತರ ನಾಯಕರು ಕೂಡ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಆಯೋಜಕರು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ, ಖಡ್ಗ ಹಾಗೂ ಕಿರೀಟ ತೊಡಿಸಿ, ಕಂಬಳಿ ಹೊದಿಸಿ ಸತ್ಕರಿಸಿದರು. ಬಳಿಕ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಶಿಳ್ಳೆ, ಚಪ್ಪಾಳೆಗಳು ಕಿವಿಗಡಚಿಕ್ಕಿದವು. ಜಾತಿ ವ್ಯವಸ್ಥೆ ಮೇಲೆ ನಾನು ನಂಬಿಕೆ ಇಟ್ಟಿಲ್ಲ. ಕುರುಬ ಜಾತಿಯಲ್ಲಿ ನಾನು ಹುಟ್ಟಿದ್ದೇನೆ ಅಷ್ಟೇ. ಅವಕಾಶಗಳಿಂದ ವಂಚಿತರಾದ ಜಾತಿಯವರು ಅವಕಾಶಗಳು ಪಡೆದುಕೊಳ್ಳಲು ಸಂಘಟನೆ ಶಕ್ತಿ ಬೇಕಾಗುತ್ತದೆ. ಹಾಗಾಗಿ ಜಾತಿ ಸಮಾವೇಶ ಮಾಡಿದರೆ ತಪ್ಪಲ್ಲ. ಕರ್ನಾಟಕ ಬಿಟ್ಟು ರಾಜಕೀಯವಾಗಿ ಬೇರೆ ರಾಜ್ಯಗಳಲ್ಲಿ ಸಂಘಟನೆ ಮತ್ತು ನಾಯಕತ್ವದ ಕೊರತೆಯಿಂದ ಬೆಳೆದಿಲ್ಲ. ಹಾಗಾಗಿ, ಎಲ್ಲರೂ ಸಂಘಟಿತರಾಗಬೇಕು. ನಾಯಕತ್ವ ಬೆಳೆಸಿಕೊಳ್ಳಲು ಪ್ರೀತಿ ಇರಬೇಕು. ಸಂಘಟನೆ ಬೆಳೆಸಬೇಕು. ಶೆಫರ್ಡ್ ಇಂಡಿಯಾ ಸಂಘಟನೆ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ಕುರುಬರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ವಾಸವಿದ್ದಾರೆ. ಅವರೆಲ್ಲಾ ಒಂದು ವೇದಿಕೆಯಲ್ಲಿ ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲ ಜಾತಿ, ವರ್ಗದ ಜನರು ಸಂಘಟಿತರಾಗಿ ಸಂವಿಧಾನ ಕೊಟ್ಟ ಹಕ್ಕು ಪಡೆಯಬೇಕು ಎಂದ ಸಿದ್ದರಾಮಯ್ಯ, ಸಮಾಜವಾದ ಹೇಳುತ್ತಾರೆ, ಜ್ಯಾತ್ಯಾತೀತತೆ ಪ್ರತಿಪಾದಿಸುತ್ತಾರೆ. ಆದರೆ, ಜಾತಿ ಸಮಾವೇಶಕ್ಕೆ ಹೋಗುತ್ತಾರೆ ಎಂದು ಕೆಲವರು ನನ್ನ ಬಗ್ಗೆ ಕುಹಕವಾಡುತ್ತಾರೆ. ಆದರೆ, ಯಾವ ಜಾತಿಗಳು ಅವಕಾಶಗಳಿಂದ ವಂಚಿತವಾಗಿವೆ, ಅವು ಜಾತಿಯಿಂದ ಸಂಘಟನೆಯಾದರೆ ಅದು ಜಾತಿವಾದ ಅಲ್ಲ. ಯಾವ ಜಾತಿಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿದವೆಯೋ ಅವು, ಜಾತಿ ಸಮಾವೇಶ ಮಾಡಿದರೆ ಅದು ಜಾತಿವಾದ ಎಂದರು.
ಕಾಗಿನೆಲೆ ಗುರುಪೀಠ ಕುರುಬ ಸಮುದಾಯಕ್ಕೆ ಮಾತ್ರ ಸಿಮೀತವಲ್ಲ. ಇದು ತುಳಿತಕ್ಕೊಳಗಾದ ಎಲ್ಲ ಸಮಾಜಗಳ ಪೀಠ ಎಂದು ಎಚ್ ವಿಶ್ವನಾಥ್ ಪೀಠದ ಮೊದಲ ಕಾರ್ಯಕ್ರಮದಲ್ಲೆ ಹೇಳಿದ್ದರು. ಹಾಗಾಗಿ, ನಾನು ಜಾತಿವಾದ ಮಾಡುವ ಮಠಗಳನ್ನು ನಾನು ಬೆಂಬಲಿಸುವುದಿಲ್ಲ. ಎಲ್ಲರೂ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ಎಲ್ಲರಿಗೂ ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೆ ತರುತ್ತಿದ್ದೇವೆ. ಹಿಂದೆ ನಾನು ಮುಖ್ಯಮಂತ್ರಿಯಿದ್ದಾಗ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್ ಎಲ್ಲ ಯೋಜನೆಗಳು ಎಲ್ಲ ಸಮಾಜಗಳಿಗೂ ನೀಡಿದ್ದೆ. ನಾನು ಯಾವುದೇ ಕಾರಣಕ್ಕೂ ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಉತ್ತಮ ಆಡಳಿತ ನೀಡುತ್ತೇನೆ. ಇದನ್ನು ವಿರೋಧಿಗಳು ಸಹಿಸಿಕೊಳ್ಳದಿದ್ದರೆ ಏನೂ ಮಾಡಲು ಆಗೊಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ನಾನು ರಾಜಕೀಯದಲ್ಲಿ ಇರೋವರೆಗೂ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆಮಿಷ ಒಡ್ಡುತ್ತಾರೆ, ದುಡ್ಡು ಕೊಡುತ್ತಾರೆ ಎಂದು ಕೆಲವರು ಆರೋಪಿಸಿ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಅದು ಆಮಿಷ ಅಲ್ಲ. ಬಡವರಿಗಾಗಿ ತಂದ ಯೋಜನೆಗಳು. ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ಜಾತಿಯವರಿಗೂ ಸಮಾನವಾಗಿ ಕುಳಿತುಕೊಳ್ಳುತ್ತಿದ್ದರು. ಶ್ರೇಣೀಕೃತ ವ್ಯವಸ್ಥೆ ಹೋಗಿ ಸಮಾನಾಂತರ ವ್ಯವಸ್ಥೆ ಬರಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಹೋರಾಟ ಮಾಡಿದ್ದರು. ಕನಕದಾಸರು ಕುಲ ಕುಲ ಎಂದು ಹೊಡೆದಾಡಬೇಡಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಹೇಳಿದ್ದರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಕಂಡಿದ್ದ ಕನಸು ನನಸಾಗಬೇಕಾದರೆ ಎಲ್ಲ ಸಮಾಜಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮೇಲೆ ಬಂದರೆ ಮಾತ್ರ ಅದು ಸಾಕಾರವಾಗುತ್ತದೆ ಎಂದರು.