ಕರ್ನಾಟಕ

karnataka

ETV Bharat / state

ಪ್ರತಿಪಕ್ಷ ಕೇವಲ ರಾಜಕೀಯ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ವಿರೋಧಿಸುವ ಕಾರ್ಯ ಮಾಡಿದೆ: ಸಿಎಂ - ಕಾಂಗ್ರೆಸ್​ ನಾಯಕ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅನುಮೋದನೆ ವೇಳೆ ಕಾಂಗ್ರೆಸ್​ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದು, ಈ ವೇಳೆ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

CM Basavaraj bommai slams congress leaders
ಕಾಂಗ್ರೆಸ್​ ನಾಯಕರ ನಡೆ ಬಗ್ಗೆ ಸಿಎಂ ಬೊಮ್ಮಾಯಿ ವಾಗ್ದಾಳಿ

By

Published : Dec 23, 2021, 10:06 PM IST

ಬೆಳಗಾವಿ: ಕಾಂಗ್ರೆಸ್ ಪಕ್ಷ ಸದಾ ದ್ವಿಮುಖ ನೀತಿಯನ್ನು ಪಾಲಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪಿಸಿದರು. ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅನುಮೋದನೆ ಆಗಿದೆ. ಇದಕ್ಕೂ ಮುನ್ನ ಇಡೀ ದಿನ ಚರ್ಚೆಗೆ ಅವಕಾಶಗಳನ್ನು ಕೊಡಲಾಗಿತ್ತು. ಪ್ರತಿಪಕ್ಷ ಕೇವಲ ರಾಜಕೀಯ ಉದ್ದೇಶದಿಂದ ವಿರೋಧಿಸುವ ಕಾರ್ಯ ಮಾಡಿದೆ. ಅವರ ಕಾಲದಲ್ಲಿ ಕಾನೂನು ರಚನೆಗೆ ಎಲ್ಲ ಕ್ರಮ ತೆಗೆದುಕೊಂಡಿದ್ದರು ಎಂದು ವಿವರಿಸಿದರು.

ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಾನೂನು ಸಚಿವರಾಗಿದ್ದ ಟಿಬಿ ಜಯಚಂದ್ರ ಅವರಿಂದ ಪರಿಶೀಲನೆ ಮಾಡಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಹೇಳಿದ್ದರು. ಸಂಪುಟದಲ್ಲಿ ಮಂಡನೆ ಮಾಡಿ ಎಂದರೆ ನಿಮಗೆ ಒಪ್ಪಿಗೆ ಆಯ್ತು ಎಂದು ಅರ್ಥ. ದ್ವಿಮುಖ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಆರ್​​ಎಸ್ಎಸ್ ಹಿಡನ್ ಅಜೆಂಡಾ ಎಂದರು. ಆದರೆ, ಇದು ಆರ್​​ಎಸ್ಎಸ್ ಹಿಡನ್ ಅಜೆಂಡಾ ಅಲ್ಲ, ಓಪನ್ ಅಜೆಂಡಾ ಎಂದು ಸಿಎಂ ಹೇಳಿದರು.

ಮತಬ್ಯಾಂಕ್​ ರಾಜಕಾರಣಕ್ಕಾಗಿ ವಿರೋಧ

ಲಾ ಕಮಿಷನ್ ಶಿಫಾರಸು ಬಂದ ಬಳಿಕ ಕಾನೂನು ರಚನೆ ಮಾಡಲಾಗಿದೆ. ನಿಮಗೆ ಅದನ್ನು ತಿರಸ್ಕಾರ ಮಾಡಲು ಮೂರು ವರ್ಷಗಳ ಕಾಲವಕಾಶ ಇತ್ತು. ಏಕೆ ತಿರಸ್ಕಾರ ಮಾಡಿಲ್ಲ, ತಿರಸ್ಕಾರ ಮಾಡದೆ ಅನುಮೋದನೆ ಕೊಟ್ಟು ಕರಡು ಕಾನೂನನ್ನು ಮಾಡಿ ಸಂಪುಟದ ಮುಂದೆ ಮಂಡಿಸುವವರೆಗೂ ಎಲ್ಲಾ ಪ್ರಕ್ರಿಯೆಗೆ ಸಹಿ ಮಾಡಲಾಗಿದೆ.

ಸಿದ್ದರಾಮಯ್ಯ ಹಾಗೂ ಅಂದಿನ ಕಾನೂನು ಸಚಿವರು ಕೂಡ ಸಹಿ ಮಾಡಿದ್ದಾರೆ. ಈಗ ಅದನ್ನು ವಿರೋಧಿಸುತ್ತೀರಿ. ಏಕೆಂದರೆ ಇದು ರಾಜಕಾರಣ ಮತ್ತು ಮತಬ್ಯಾಂಕ್​ ಅಷ್ಟೇ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೇರೆ ಬೇರೆ ರಾಜ್ಯಗಳಲ್ಲಿ ಕಾನೂನು ‌ಮಾಡಿದ್ದಾರೆ. ಈ ಕಾನೂನು ರಚನೆ ಪ್ರಯತ್ನ ಹಲವು ವರ್ಷಗಳಿಂದ ನಡೆದಿದೆ. ಇದು ಹೊಸತೇನು ಅಲ್ಲ. ಬಡತನ, ಅಸಾಹಯಕತೆ, ನಿರುದ್ಯೋಗ, ಶಿಕ್ಷಣದ ಕೊರತೆ, ಇತರ ಆಮಿಷಗಳನ್ನು ಒಡ್ಡಿ ಒತ್ತಾಯದ ಮೂಲಕ ಮತಾಂತರಕ್ಕೆ ನಮ್ಮ ವಿರೋಧ ಇದೆ. ಕಾಂಗ್ರೆಸ್ ಪಕ್ಷದವರು ಅದನ್ನು ರಾಜಕೀಯ ದಾಳವಾಗಿ ಬಳಸಲು ಯತ್ನಿಸುತ್ತಿದ್ದಾರೆ. ಅದಕ್ಕೆ ಅವರಿಗೆ ಯಶಸ್ಸು ಸಿಗಲ್ಲ ಎಂದು ಹೇಳಿದರು.

ಎಸ್ಸಿ,ಎಸ್ಟಿಗೆ ಹೆಚ್ಚಿನ ಭದ್ರತೆ ಕೊಡುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.‌ ಈ ಕಾನೂನನ್ನು ರಾಜ್ಯದಲ್ಲಿ ‌ಮಾಡಲು ಅವಕಾಶ ಇದೆ. ಇದು ಸಂವಿಧಾನ ಬದ್ಧ ಹಾಗೂ ಜನಪರವಾಗಿದೆ. ಬರುವಂತಹ ದಿನಗಳಲ್ಲಿ ಈ ಕಾನೂನಿನ ಮೂಲಕ ಎಲ್ಲ ವರ್ಗಗಳ ರಕ್ಷಣೆ ಹಾಗೂ ಅವರ ಸ್ವಾಭಿಮಾನ ಎತ್ತಿ ಹಿಡಿಯಲಾಗುತ್ತದೆ ಎಂದರು.

ಪರಿಷತ್ತಿನಲ್ಲೂ ಬಿಲ್ ಅಂಗೀಕಾರ ವಿಚಾರ ಮಾತನಾಡಿ, ನಮಗೆ ಸಂಪೂರ್ಣವಾದ ಬಹುಮತ ಇಲ್ಲ ಎಂದು ಗೊತ್ತಿದೆ. ಈ ವಿಚಾರಗಳು ಬಂದ ಬಳಿಕ ಕೆಲವು ಜನರ ಭಾವನೆಗಳು ಬದಲಾವಣೆ ಆಗಬಹುದು ನೋಡೋಣ ಎಂದು ಹೇಳಿದರು.

ಸಂಪುಟ ಪುನರಚನೆ ವಿಚಾರ ಮಾತನಾಡಿ, ಸಚಿವ ಸಂಪುಟದ ಪುನರಚನೆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಹೈಕಮಾಂಡ್ ಜೊತೆ ಚರ್ಚೆ ನಡೆಸದೆ ಏನೂ ಹೇಳಲು ಆಗುವುದಿಲ್ಲ. ಪುನಾರಚನೆ ಆದರೆ, ನಾನು ನಿಮಗೆ ತಿಳಿಸುತ್ತೇನೆ. ಕಾದು ನೋಡಿ ಎಂದು ಹೇಳಿದರು.

ಇದನ್ನೂ ಓದಿ: ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ABOUT THE AUTHOR

...view details