ಬೆಳಗಾವಿ :ಪ್ರವಾಹ ಹಾಗೂ ಅತಿವೃಷ್ಠಿಯಿಂದ ಬೆಳೆ ಹಾನಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಹೆಚ್ಚುವರಿ ಪರಿಹಾರ ಘೋಷಣೆ ಮಾಡಿದರು. ನಿಯಮ 69 ಅಡಿಯಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಈ ಬಾರಿ ರಾಜ್ಯಾವ್ಯಾಪಿ ಹೆಚ್ಚು ಮಳೆಯಾಗಿದೆ. ಬರ ಪೀಡಿತ ಜಿಲ್ಲೆಗಳಲ್ಲಿ ಕೆರೆ ಕಟ್ಟೆ ತುಂಬಿ ಒಡೆದು ಹೋಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತರ ಬೆಳೆ ಹಾನಿಯಾಗಿದೆ. ಬೆಳೆ ಕೈಗೆ ಸಿಗಬೇಕು ಅನ್ನೋ ಸಂದರ್ಭದಲ್ಲಿ ಹಾನಿಯಾಗಿದೆ ಎಂದು ತಿಳಿಸಿದರು.
ಜಂಟಿ ಸರ್ವೆ ಮಾಡಿ ಅಪ್ಲೋಡ್ ಮಾಡಿ 40 ಗಂಟೆಗಳಲ್ಲಿ ಪರಿಹಾರ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ 980 ಕೋಟಿ ರೂ. ರೈತರರಿಗೆ ಪರಿಹಾರ ತಲುಪಿದೆ. ಈ ಬೆಳೆ ಹಾನಿ ದೊಡ್ಡ ಪ್ರಮಾಣದಲ್ಲಿ ಆಗಿದೆ. ರಾಜ್ಯ ಸರ್ಕಾರ ಬೆಳೆ ಹಾನಿ ಹಾಗೂ ಮನೆ ಬಿದ್ದವರಿಗೆ ಪರಿಹಾರ ನೀಡಿದ್ದೇವೆ. ಯಾವುದೇ ರೀತಿಯ ತೊಂದರೆ, ಕೊರತೆ ಆಗದ ರೀತಿ ಪ್ರವಾಹ ನಿರ್ವಹಣೆ ಮಾಡಿದ್ದೇವೆ. ಬೆಳೆ ಪರಿಹಾರ ಇನ್ನಷ್ಟು ಹೆಚ್ಚಿಗೆ ಆಗಬೇಕು ಎಂಬ ಚಿಂತನೆ ಇತ್ತು.
ಆ ಕಾರಣಕ್ಕೆ ನಷ್ಟಕ್ಕೆ ಪರಿಹಾರ ಹೆಚ್ಚಳ ಮಾಡಿದ್ದೇವೆ. ಒಣ ಬೇಸಾಯ ಭೂಮಿಗೆ 1 ಹೆಕ್ಟೇರ್ಗೆ 6,800 ರೂಪಾಯಿ ಇತ್ತು. ಇದಕ್ಕೆ ರಾಜ್ಯ ಸರ್ಕಾರದಿಂದ 6,800 ಹೆಚ್ಚುವರಿ ಸೇರಿಸಲಾಗಿದೆ. ಇದೀಗ ಒಟ್ಟು ಪ್ರತೀ ಹೆಕ್ಟೇರ್ ಗೆ 13,600 ಪರಿಹಾರ ನೀಡಲಾಗುವುದು ಎಂದರು.
ನೀರಾವರಿ ಜಮೀನಿಗೆ ಪ್ರತೀ ಹೆಕ್ಟೇರ್ಗೆ 13,500 ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಅದಕ್ಕೆ ಹೆಚ್ಚುವರಿಯಾಗಿ 11,000 ರೂಪಾಯಿ ಸೇರಿಸುವ ಮೂಲಕ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಇದರಿಂದ 12 ಲಕ್ಷದ 69 ಹೆಕ್ಟೇರ್ ಪ್ರದೇಶಕ್ಕೆ ಅನುಕೂಲ ಆಗುತ್ತದೆ ಎಂದರು.
ಈ ಕೂಡಲೇ ಪರಿಹಾರ ಬಿಡುಗಡೆ ಮಾಡುತ್ತೇವೆ. ನಮ್ಮ ಸರ್ಕಾರ ಸದಾ ಕಾಲ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಸದನದ ಆಗ್ರಹ ಕೂಡ ಇತ್ತು. ಕೊವೀಡ್ ಇತಿಮಿತಿ ಒಳಗೆ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವೆ. ಇದರಿಂದ 1,200 ಕೋಟಿ ಹೆಚ್ಚುವರಿ ರಾಜ್ಯ ಸರ್ಕಾರದ ಮೇಲೆ ಹೊರೆ ಬೀಳಲಿದೆ. ತೋಟಗಾರಿಕೆ ಜಮೀನಿಗೆ ಪ್ರತಿ ಹೆಕ್ಟೇರ್ಗೆ 18,000 ಸಾವಿರ ಇದೆ. ಅದಕ್ಕೆ ಅಧಿಕವಾಗಿ ಹತ್ತು ಸಾವಿರ ಸೇರಿಸಿ 28 ಸಾವಿರ ಕೊಡುತ್ತೇವೆ ಎಂದು ತಿಳಿಸಿದರು.
ಡಬಲ್ ಇಂಜಿನ್ ಸರ್ಕಾರದಿಂದ ಪರಿಹಾರ ಕಾರ್ಯಕ್ಕೆ ವೇಗ :
ಡಬಲ್ ಇಂಜಿನ್ ಸರ್ಕಾರದಿಂದ ನೆರೆ ಪರಿಹಾರ ಕಾರ್ಯಕ್ಕೆ ವೇಗ ಸಿಕ್ಕಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಸದನಕ್ಕೆ ತಿಳಿಸಿದರು. ನಿಯಮ 69 ಅಡಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಾಯಕರು ಪದೇ ಪದೆ ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಬಿಡಿ ಕಾಸು ಕೊಟ್ಟಿಲ್ಲ ಎಂದು ಟೀಕಿಸುತ್ತಿದ್ದಾರೆ.