ಬೆಳಗಾವಿ:ರೈಲ್ವೆ ಇಲಾಖೆ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ರೆ ಉದ್ರಿಕ್ತರಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕೆಂಬ ತಮ್ಮದೇ ಹೇಳಿಕೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಅಂಗಡಿ ಘಟಪ್ರಭಾ-ಬೆಳಗಾವಿ ಮಾರ್ಗಮಧ್ಯೆ ರೈಲ್ವೆ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ಕೆಲವರು ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಹಾಗೂ ರೈಲ್ವೆ ಇಲಾಖೆ ಆಸ್ತಿಗೆ ಹಾನಿ ಆಗುತ್ತಿದೆ. ಈ ರೀತಿ ಹಾನಿ ಮಾಡುವವರಿಗೆ ಕಂಡಲ್ಲಿ ಗುಂಡಿಕ್ಕಿ ಎಂದು ನಾನು ನೀಡಿದ್ದ ಈಗಲೂ ಬದ್ಧವಾಗಿದ್ದೇನೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮ ದೇಶದ ಯಾವುದೇ ಪ್ರಜೆಗೆ ತೊಂದರೆಯಿಲ್ಲ. ಪ್ರತಿಪಕ್ಷದವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪೌರತ್ವ ಕಾಯ್ದೆಯಿಂದ ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲ ಅಲ್ಪಸಂಖ್ಯಾತರನ್ನು ಬಳಸಿಕೊಂಡು ರಾಜಕೀಯ ಮಾಡಲಾಗ್ತಿದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೆ ಕುಮ್ಮಕ್ಕು ನೀಡಲಾಗ್ತಿದೆ ಎಂದು ಆರೋಪಿಸಿದರು.
ಅರ್ಬನ್ ನಕ್ಸಲೈಟ್ಸ್ ಬುದ್ಧಿ ಜೀವಿಗಳಿಂದ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವಾಗ ಸರ್ಕಾರ ಏನು ಮಾಡಬೇಕು. ನಾವು ಮೂಕ ಪ್ರೇಕ್ಷಕರಾಗಿ ಕೂರಬೇಕಾ ಎಂದ ಪ್ರಶ್ನಿಸಿದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಮಾತೇ ಇಲ್ಲ. ನಮ್ಮ ದೇಶದ ಜನರನ್ನು ನಾವು ರಕ್ಷಣೆ ಮಾಡುತ್ತಿದ್ದೇವೆ ಎಂದರು.
ನಿರ್ಭಯಾ ಪ್ರಕರಣದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ ವಿಳಂಬವಾದರೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ ಎಂದರು.