ಕರ್ನಾಟಕ

karnataka

ಜಗದೀಶ ಶೆಟ್ಟರ್, ಸತೀಶ್​ ಜಾರಕಿಹೊಳಿ ಹೆಸರು ಮುನ್ನೆಲೆಗೆ; ತಂತ್ರವೋ? ಕುತಂತ್ರವೋ?

By

Published : Dec 15, 2020, 8:13 PM IST

ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ್​ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ, ಕಾಂಗ್ರೆಸ್ - ಬಿಜೆಪಿಯಿಂದ ಘಟಾನುಘಟಿ ನಾಯಕರ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್​​​​ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರು ಹಾಗೂ ಬಿಜೆಪಿಯಿಂದ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೆಸರನ್ನು ತೇಲಿ ಬಿಡಲಾಗುತ್ತಿದೆ.

Jagadish Shettar, Satish Jarkiholi
ಜಗದೀಶ ಶೆಟ್ಟರ್, ಸತೀಶ್​ ಜಾರಕಿಹೊಳಿ

ಬೆಳಗಾವಿ: ಲೋಕಸಭೆ ಕ್ಷೇತ್ರದ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ, ಕ್ಷೇತ್ರದಲ್ಲಿ ಘಟಾನುಘಟಿ ನಾಯಕರ ಹೆಸರುಗಳು ಪದೇ ಪದೆ ಪ್ರಸ್ತಾಪವಾಗುತ್ತಿವೆ. ಇದು ಪಕ್ಷದೊಳಗೆ ನಡೆಯುತ್ತಿರುವ ತಂತ್ರವೋ? ಅಥವಾ ಕುತಂತ್ರವೋ? ಎಂಬುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ್​ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ಕಾಂಗ್ರೆಸ್ - ಬಿಜೆಪಿಯಿಂದ ಘಟಾನುಘಟಿ ನಾಯಕರ ಹೆಸರು ಕೇಳಿ ಬರುತ್ತಿವೆ. ಕಾಂಗ್ರೆಸ್ಸಿನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರು ಹಾಗೂ ಬಿಜೆಪಿಯಿಂದ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೆಸರನ್ನು ತೇಲಿ ಬಿಡಲಾಗುತ್ತಿದೆ. ಈ ರೀತಿಯ ಚರ್ಚೆಯಿಂದ ಸ್ವತಃ ಉಭಯ ನಾಯಕರೇ ಕಕ್ಕಾಬಿಕ್ಕಿಯಾಗಿದ್ದಾರೆ.

ಓದಿ:ಪರಿಷತ್​ನಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವದ ಕಗ್ಗೊಲೆ, ಸಂವಿಧಾನ ವಿರೋಧಿ: ಸಿದ್ದರಾಮಯ್ಯ

ನನ್ನ ಹೆಸರು ಕೇಳಿ ಬರುತ್ತಿರುವುದು ಯಾರಿಂದ? ನಿಮ್ಮ ಸುದ್ದಿಯ ಮೂಲ ಯಾವುದು? ಎಂದು ಜಗದೀಶ ಶೆಟ್ಟರ್ ಅವರೇ ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ ನನ್ನ ಹೆಸರನ್ನು ಉದ್ದೇಶ ಪೂರ್ವಕವಾಗಿ ತೇಲಿ ಬಿಡಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಇಬ್ಬರು ನಾಯಕರ ಪ್ರತಿಕ್ರಿಯೆ ಗಮನಿಸಿದರೆ ಇವರ ಹೆಸರು ಮುನ್ನಲೆಗೆ ತರಲು ತಂತ್ರಕ್ಕಿಂತ ಕುತಂತ್ರವೇ ಜಾಸ್ತಿಯಿದೆ ಎಂಬುದು ಸ್ಪಷ್ಟವಾಗುತ್ತಿದೆ.

ಜಗದೀಶ ಶೆಟ್ಟರ್, ಸತೀಶ್​ ಜಾರಕಿಹೊಳಿ ಮಾತನಾಡಿದರು

ಸತೀಶ್​ ಹೆಸರನ್ನು ತೇಲಿ ಬಿಟ್ಟವರು ಯಾರು?: ಹಿಂದಿನ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸತೀಶ್​ ಜಾರಕಿಹೊಳಿ ನಂತರ ಕಾಂಗ್ರೆಸ್ ಸರ್ಕಾರದಲ್ಲಿ ಹಾಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದರು. ಅಲ್ಲದೇ ಜಿಲ್ಲಾದ್ಯಂತ ಹಿಡಿತ ಹೊಂದಿರುವ ಸತೀಶ್​ ಜಾರಕಿಹೊಳಿ ಅವರೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಬೇಕು. ಅವರೇ ಸಮರ್ಥ ಅಭ್ಯರ್ಥಿ ಎಂಬ ಅಭಿಪ್ರಾಯವನ್ನು ಜಿಲ್ಲಾ ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಅಲ್ಲದೇ ಅಭ್ಯರ್ಥಿ ಆಯ್ಕೆ ಸಂಬಂಧ ಕೆಲ ದಿನಗಳ ಹಿಂದೆ ಎಂ.ಬಿ. ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಕೆಲವರು ಈ ಅಭಿಪ್ರಾಯ ಮಂಡಿಸಿದ್ದರು. ಆದರೆ, ಜಾರಕಿಹೊಳಿ ಅವರನ್ನು ರಾಜ್ಯ ರಾಜಕಾರಣದಿಂದ ದೂರವಿಡಲು ಕೆಲ ಜಿಲ್ಲಾ ನಾಯಕರು ಕುತಂತ್ರ ನಡೆಸುತ್ತಿದ್ದಾರೆ ಎಂಬ ಸಂಗತಿ ಗುಟ್ಟಾಗಿ ಉಳಿದಿಲ್ಲ. ನನ್ನ ಹೆಸರನ್ನು ಉದ್ದೇಶ ಪೂರ್ವಕವಾಗಿ ತೇಲಿ ಬಿಡಲಾಗುತ್ತಿದೆ ಎಂಬ ಜಾರಕಿಹೊಳಿ ಅವರ ಪ್ರತಿಕ್ರಿಯೆ ಇದಕ್ಕೆ ಪುಷ್ಠಿ ನೀಡುವಂತಿದೆ. ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬೆಳಗಾವಿಯಲ್ಲಿ ನಡೆಯಬೇಕೇ ಹೊರತು, ಬೆಂಗಳೂರಲ್ಲಿ ಅಲ್ಲ ಎನ್ನುವ ಮೂಲಕ ಸತೀಶ್ ಜಾರಕಿಹೊಳಿ‌ ತಿರುಗೇಟು ನೀಡಿದ್ದಾರೆ.

ಜಗದೀಶ್​ ಶೆಟ್ಟರ್ ಹೆಸರೂ ಮುನ್ನೆಲೆಗೆ:ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಹಾಗೂ ಹಾಲಿ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರ ಹೆಸರು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಉಸ್ತುವಾರಿಯ ಹೊಣೆಯನ್ನು ಹೆಚ್ಚುವರಿ ಆಗಿ ನೀಡಲಾಗಿತ್ತು. ಅಲ್ಲದೇ ಶೆಟ್ಟರ್ ಅವರು ಸುರೇಶ್​ ಅಂಗಡಿ ಅವರ ಬೀಗರೂ ಆಗಿದ್ದಾರೆ. ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಇದ್ದರೂ ಬಿಜೆಪಿಯಲ್ಲಿ ಈ ಸಂಪ್ರದಾಯ ಇಲ್ಲ. ಈ ಕಾರಣಕ್ಕೆ ಅವರು ಬೀಗರು ಆಗಿರುವ ಜಗದೀಶ ಶೆಟ್ಟರ್ ಅವರ ಹೆಸರನ್ನು ತೇಲಿ ಬಿಡಲಾಗುತ್ತಿದೆ ಎನ್ನಲಾಗುತ್ತಿದೆ.

ಆದರೆ ರಾಷ್ಟ್ರರಾಜಕಾರಣದ ಬಗ್ಗೆ ಜಗದೀಶ ಶೆಟ್ಟರ್ ಒಲವು ಹೊಂದಿಲ್ಲ. ಈ ಕಾರಣಕ್ಕೆ ಯಾವ ಮೂಲದಿಂದ ಸುದ್ದಿ ಮಾಡುತ್ತಿದ್ದೀರಿ ಎಂದು ಜಗದೀಶ ಶೆಟ್ಟರ್ ಅವರೇ ಇತ್ತೀಚೆಗೆ ಮಾಧ್ಯಮಗಳನ್ನು ಪ್ರಶ್ನಿಸಿದ್ದರು. ಅದೇನೆ ಇರಲಿ ಬೆಳಗಾವಿ ಕ್ಷೇತ್ರಕ್ಕೆ ಘಟಾನುಘಟಿ ನಾಯಕರ ಹೆಸರು ಚಾಲ್ತಿಗೆ ಬಂದಿದ್ದು ತಂತ್ರವೋ? ಕುತಂತ್ರವೋ? ಎಂಬ ಚರ್ಚೆಗೆ ನಾಂದಿ ಹಾಡಿದ್ದು ಮಾತ್ರ ಸುಳ್ಳಲ್ಲ.

ABOUT THE AUTHOR

...view details