ಕರ್ನಾಟಕ

karnataka

By

Published : May 2, 2023, 5:09 PM IST

ETV Bharat / state

ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಅಲ್ಲ, ಭ್ರಷ್ಟ ಸರ್ಕಾರ: ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್​ ವಾಗ್ದಾಳಿ

ಬಿಜೆಪಿ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದಿಂದ ಕರ್ನಾಟಕವನ್ನು ಗುರುತಿಸುವಂತಾಗಿದೆ ಎಂದು ಪೃಥ್ವಿರಾಜ್ ಚೌಹಾಣ್​​ ಹೇಳಿದರು.

Prithviraj Chavan
ಪೃಥ್ವಿರಾಜ್ ಚವ್ಹಾಣ್​

ಬೆಳಗಾವಿ : ಬಿಜೆಪಿಯವರು ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಆದರೆ ಕರ್ನಾಟಕದಲ್ಲಿ ಡಬಲ್ ಎಂಜಿನ್ ಕರೆಪ್ಷನ್ ಇದೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಕೂಡ ಕರೆಪ್ಷನ್ ಇದೆ. ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಡಬಲ್ ಎಂಜಿನ್ ಭ್ರಷ್ಟ ಸರ್ಕಾರ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್​​​ ವಾಗ್ದಾಳಿ ನಡೆಸಿದರು.

ಇಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ದೇಶದ ಮಹತ್ವಪೂರ್ಣ ರಾಜ್ಯವಾಗಿದೆ. ಈ ಮೊದಲು ಮಹಾರಾಷ್ಟ್ರ ದೇಶದ ಆರ್ಥಿಕ ವ್ಯವಸ್ಥೆ ಎಂಜಿನ್ ಆಗಿತ್ತು. ಈಗ ರಾಜ್ಯದ ರಾಜಧಾನಿ ಬೆಂಗಳೂರು ದೇಶದ ಅರ್ಥವ್ಯವಸ್ಥೆಯ ಎಂಜಿನ್ ಆಗಿದೆ. ಆದರೆ, ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದಿಂದ ಕರ್ನಾಟಕವನ್ನು ಗುರುತಿಸುವಂತಾಗಿದೆ. ಇದನ್ನು ನಾವು ಅಳಿಸಿ ಹಾಕಬೇಕಿದೆ ಎಂದರು.

ಗುತ್ತಿಗೆದಾರ ಸಂಘದವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು, ಕೇಂದ್ರ ಸಚಿವ ಗಿರಿರಾಜ ಸಿಂಗ್‌ಗೂ ಸಹ ಪತ್ರ ಬರೆದಿದ್ದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಸಚಿವರಾದ ಕೆ.ಎಸ್.ಈಶ್ವರಪ್ಪ ಮೇಲೂ ಆರೋಪ ಬಂದಿತ್ತು. ಈ ವಿಚಾರಣೆ ನಡೆದ ಬಳಿಕ ಕೆ.ಎಸ್.ಈಶ್ವರಪ್ಪಗೆ ಕ್ಲೀನ್‌ಚಿಟ್ ನೀಡಿದರು.‌ ಕರ್ನಾಟಕದಲ್ಲಿ ಭ್ರಷ್ಟಾಚಾರ ಭುಗಿಲೆದ್ದಿದ್ದು ಬಹಿರಂಗವಾಗಿ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದರು ಎಂದು ಪೃಥ್ವಿರಾಜ್ ಚೌಹಾಣ್​​ ಆರೋಪಿಸಿದರು.

2023ರ ಕರ್ನಾಟಕ ವಿಧಾನಸಭಾ ಚುನಾವಣೆ ಕೇವಲ ಕರ್ನಾಟಕಕ್ಕೆ ಮಹತ್ವವಲ್ಲ. ದೇಶದ ಭವಿಷ್ಯಕ್ಕಾಗಿ ಇದು ಬಹಳ ಮಹತ್ವದ್ದು, ಇನ್ನು ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಪ್ರಜಾಪ್ರಭುತ್ವ ಉಳಿಯುತ್ತೋ, ಸರ್ವಾಧಿಕಾರ ನಡೆಯುತ್ತೋ ಎಂಬುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿರ್ಣಯ ಆಗುತ್ತೆ. ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದೆ. ಹೀಗಾಗಿ ಕರ್ನಾಟಕ ಮತ್ತು ದೇಶದ ಭವಿಷ್ಯಕ್ಕೆ ಈ ಚುನಾವಣೆ ಬಹಳ ಮಹತ್ವಪೂರ್ಣ ಪಡೆದುಕೊಂಡಿದೆ ಪೃಥ್ವಿರಾಜ್ ಚವ್ಹಾಣ್​ ಹೇಳಿದರು.

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿತ್ತು. ಬಿಜೆಪಿ ಎರಡನೇ ಸ್ಥಾನ, ಜೆಡಿಎಸ್ ಮೂರನೇ ಸ್ಥಾನದಲ್ಲಿತ್ತು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಲಾಯಿತು. ಒಂದೇ ವರ್ಷದಲ್ಲಿ ಸರ್ಕಾರವನ್ನು ಹೈಜಾಕ್ ಮಾಡಿ, ಆಪರೇಷನ್ ಕಮಲದ ಮೂಲಕ ಕೆಲ ಶಾಸಕರ ರಾಜೀನಾಮೆ ಪಡೆದು ಬಿಜೆಪಿ ಸರ್ಕಾರ ರಚಿಸಿತು. ಕರ್ನಾಟಕ ಜನರು ನೀಡಿದ ಆದೇಶ ಅಪಮಾನಿಸಲಾಯಿತು ಎಂದು ಪೃಥ್ವಿರಾಜ್ ಚವ್ಹಾಣ ಹರಿಹಾಯ್ದರು.

ಭ್ರಷ್ಟಾಚಾರಿ ಡಬಲ್ ಇಂಜಿನ್ ಸರ್ಕಾರ : ಭ್ರಷ್ಟಾಚಾರದ ಬಗ್ಗೆ ಸಂಸತ್‌ನಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿ ಅದಾನಿಗೂ ನಿಮಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು. ರಾಹುಲ್ ಗಾಂಧಿ ಧ್ವನಿ ಅಡಗಿಸಲು ಸುಳ್ಳು ಮೊಕದ್ದಮೆ ನಡೆಸಿ ಲೋಕಸಭಾ ಸದಸ್ಯತ್ವ ರದ್ದು ಮಾಡಿದರು. ಮಾನಹಾನಿ ಮೊಕದ್ದಮೆಯಲ್ಲಿ ಲೋಕಸಭೆ ಸದಸ್ಯತ್ವ ರದ್ದು ಮಾಡಿದ್ದು ದೇಶದಲ್ಲೆ ಮೊದಲ ಬಾರಿ. ಅದಾನಿ 15 ರಿಂದ 20 ಪರ್ಸೆಂಟ್ ಕಮಿಷನ್ ಏಜೆಂಟ್ ಎಂದು ಕೇಜ್ರಿವಾಲ್ ಆರೋಪಿಸಿದರು. ಮಾಮೂಲಿ ವ್ಯಾಪಾರಿ ಇದ್ದ ಅದಾನಿ ವಿಶ್ವದ ಎರಡನೇ ಅತ್ಯಂತ ದೊಡ್ಡ ಶ್ರೀಮಂತ ಆಗಿದ್ದಾನೆ. ಭ್ರಷ್ಟಾಚಾರಿ ಡಬಲ್ ಇಂಜಿನ್ ಸರ್ಕಾರ ಇದೆ, ಹೀಗಾಗಿ ಜನ ನಿಶ್ವಯ ಮಾಡಬೇಕು. ಬಿಜೆಪಿ ಪರ ಇದ್ದ ವಾಹಿನಿಗಳೇ ಕಾಂಗ್ರೆಸ್ 130 ಸೀಟ್ ಬರುತ್ತೆ ಎಂದಿದ್ದಾರೆ. ಹೀಗಾಗಿ ಕರ್ನಾಟಕದ ಜನತೆ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸುತ್ತಾರೆ ಎಂದು ಪೃಥ್ವಿರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಚುನಾವಣೆ ವೇಳೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಹ ಬಂದಾಗ ಕರ್ನಾಟಕ ಪ್ರವಾಸ ಏಕೆ ಕೈಗೊಳ್ಳಲಿಲ್ಲ. ಕರ್ನಾಟಕ ಬಗ್ಗೆ ಪ್ರಧಾನಿ ಮೋದಿಗೆ ಎಷ್ಟು ಕಾಳಜಿ ಇದೆ ಎಂದು ಜನರಿಗೆ ಗೊತ್ತು. ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಲು ಪ್ರಮುಖ ಪಾತ್ರ ವಹಿಸಿದ್ದೇ ಪ್ರಧಾನಿ ಮೋದಿ.‌ ಕಾಂಗ್ರೆಸ್ ಜನಾದೇಶ ಕದ್ದು, ಕರ್ನಾಟಕದಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡಿತು. ಭಾರತದ ಪ್ರಜಾಪ್ರಭುತ್ವ ಒಡೆಯುವ ಕೆಲಸ ಆಯಿತು. ಇದಕ್ಕೆಲ್ಲ ಹೊಣೆ ಪ್ರಧಾನಿ ಮೋದಿ ಎಂದು ಪೃಥ್ವಿರಾಜ್ ಮತ್ತೊಮ್ಮೆ ಆರೋಪಿಸಿದರು.

ಗಡಿ ವಿವಾದ ವಿಚಾರ : ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಪ್ರಕರಣಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ. ಇದು ಕಾಂಗ್ರೆಸ್‌ ಬಿಜೆಪಿ ಮಧ್ಯೆ ನಡೆಯುತ್ತಿರುವ ಚುನಾವಣೆಯಾಗಿದ್ದು, ಮರಾಠಿ ಭಾಷಿಕ ಮತದಾರರು ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು. ಎರಡೂ ರಾಜ್ಯಗಳ ಗಡಿ ವಿವಾದ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದೆ. ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದರು. ಎಂಇಎಸ್‌ ಅಭ್ಯರ್ಥಿಗಳು ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುತ್ತೀರಾ ಎಂಬ ಮಾಧ್ಯಮಗಳ‌ ಪ್ರಶ್ನೆಗೆ, ಕೆಪಿಸಿಸಿ ಮತ್ತು ಕಾಂಗ್ರೆಸ್ ಜಿಲ್ಲಾ ಘಟಕ ಸೂಚಿಸಿದ ವಿಧಾನಸಭೆ ಕ್ಷೇತ್ರಗಳಲ್ಲಿ ನಾನು ಪ್ರಚಾರ ಕೈಗೊಳ್ಳುತ್ತೇನೆ ಎಂದು ಪೃಥ್ವಿರಾಜ್‌ ಚೌಹಾಣ್​​​ ಸ್ಪಷ್ಟಪಡಿಸಿದರು.

ಎನ್‌ಸಿಪಿ ವಿರುದ್ದ ವಾಗ್ದಾಳಿ : ಕರ್ನಾಟಕ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿಗಳ ಕಣಕ್ಕಿಳಿಸಿದ ವಿಚಾರಕ್ಕೆ ಮಿತ್ರಪಕ್ಷ ಎನ್‌ಸಿಪಿ ವಿರುದ್ಧ ಕಿಡಿಕಾರಿದ ಪೃಥ್ವಿರಾಜ್‌ ಚೌಹಾಣ್​​ ನಿಪ್ಪಾಣಿಯಲ್ಲಿ ನಾನು ಕಾಂಗ್ರೆಸ್‌ ಅಭ್ಯರ್ಥಿ ಕಾಕಾಸಾಹೇಬ್ ಪಾಟೀಲ್ ಪರ ಪ್ರಚಾರಕ್ಕೆ ತೆರಳಿದ್ದೆ. ನಿಪ್ಪಾಣಿಯಲ್ಲಿ ಎನ್​ಸಿಪಿ ಅಭ್ಯರ್ಥಿ ಸಹ ಸ್ಪರ್ಧಿಸಿದ್ದಾರೆ. ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟದಲ್ಲಿ ಎನ್‌ಸಿಪಿ ಮಿತ್ರಪಕ್ಷವಾಗಿದೆ. ನಾವು ಮಾತುಕತೆ ನಡೆಸಿ ಇಬ್ಬರೂ ಒಗ್ಗೂಡಿ ಬಿಜೆಪಿ ಎದುರಿಸಬಹುದಿತ್ತು. ಆದರೆ ಕರ್ನಾಟಕದಲ್ಲಿ ಎನ್​ಸಿಪಿ ಸುಮಾರು 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆ ಎಂದು ನಾನು ಕೇಳಲ್ಪಟ್ಟಿದ್ದೇನೆ.

ಆದರೆ ಎನ್‌ಸಿಪಿಗೆ ಈಗ ರಾಷ್ಟ್ರೀಯ ಪಕ್ಷದ ಮಾನ್ಯತೆ ಮುಗಿದಿದೆ. ರಾಷ್ಟ್ರೀಯ ಪಕ್ಷದ ಮಾನ್ಯತೆಗೆ ರಾಜ್ಯಗಳಲ್ಲಿ ಇಷ್ಟಿಷ್ಟು ಪ್ರತಿಶತ ಮತ ಪಡೆಯಬೇಕೆಂಬ ಷರತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಚುನಾವಣೆ ಮಾಡಿ ರಾಷ್ಟ್ರೀಯ ಮಾನ್ಯತೆ ಪಡೆಯಲು ಬಯಸಿರಬಹುದು. ನಾನು ನಿನ್ನೆ ಕೊಗನೊಳ್ಳಿ ಪ್ರಚಾರ ಸಭೆಯಲ್ಲಿಯೂ ಇದನ್ನ ವಿರೋಧಿಸಿದ್ದೇನೆ. ಎನ್‌ಸಿಪಿ ಕೇವಲ ಕಾಂಗ್ರೆಸ್ ಮತ ಒಡೆಯುವ ಕೆಲಸ ಮಾಡುತ್ತಿದೆ. ಇದಾಗಿಯೂ ಸಹಿತ ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟದ ಭಾಗವಾಗಿ ಎನ್‌ಸಿಪಿ ಇರುತ್ತೆ ಎಂಬ ವಿಶ್ವಾಸ ಇದೆ ಎಂದರು.

ಇದನ್ನೂ ಓದಿ :ಜಿ ಪರಮೇಶ್ವರ್ ಗೆದ್ರೆ ನನಗಾಗುವಷ್ಟು ಸಂತೋಷ ಬೇರೆ ಯಾರಿಗೂ ಆಗಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details