ಕರ್ನಾಟಕ

karnataka

ETV Bharat / state

ಬೆಳಗಾವಿ: ವಿವಿಧೆಡೆ ಬೈಕ್ ಕದಿಯುತ್ತಿದ್ದ ಇಬ್ಬರ ಬಂಧನ, 29 ಬೈಕ್ ಜಪ್ತಿ - etv bharat kannada

ಕರ್ನಾಟಕ, ಮಹಾರಾಷ್ಟ್ರದ ಹಲವೆಡೆ ಬೈಕ್​ಗಳ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬೆಳಗಾವಿ ಅಂಕಲಗಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೈಕ್ ಕದಿಯುತ್ತಿದ್ದ ಇಬ್ಬರ ಬಂಧನ
ಬೈಕ್ ಕದಿಯುತ್ತಿದ್ದ ಇಬ್ಬರ ಬಂಧನ

By ETV Bharat Karnataka Team

Published : Aug 24, 2023, 10:26 PM IST

ಬೆಳಗಾವಿ:ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಬೈಕ್‌ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ್ ತಾಲೂಕಿನ ಅಂಕಲಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 8.25 ಲಕ್ಷ ರೂ ಮೌಲ್ಯದ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ತಾಲ್ಲಕಿನ ಕಳಂಭದ ನಿವಾಸಿ ಸಂತೋಷ ರಾಮಚಂದ್ರ ನಿಶಾನೆ (30) ಹಾಗೂ ಗೋಕಾಕ ತಾಲ್ಲೂಕಿನ ತೆಳಗಿನಹಟ್ಟಿಯ ಭರಮಪ್ಪ ಯಲ್ಲಪ್ಪ ಕೊಪ್ಪದ (21) ಬಂಧಿತರು. ಇವರಿಂದ ವಿವಿಧ ಕಂಪನಿಗಳ 23 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಗೋಕಾಕ ನಗರ, ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಆ.23ರಂದು ಕುಂದರಗಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಎದುರಿಗೆ ನಿಲ್ಲಿಸಿದ್ದ ಬೈಕ್‌ ಕೂಡ ಕಳ್ಳತನವಾಗಿತ್ತು. ಈ ಬಗ್ಗೆ ಮಾಲೀಕರು ಅಂಕಲಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದು ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು ಇಬ್ಬರು ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದಾರೆ. ವಿಚಾರಣೆ ವೇಳೆ ಮತ್ತಷ್ಟು ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಮಾರ್ಕೆಟ್​ ಪೊಲೀಸರು ವಶ ಪಶಪಡಿಸಿಕೊಂಡ ಬೈಕ್​ಗಳು

ಮಹಾರಾಷ್ಟ್ರದ ಕೊಲ್ಹಾಪುರ, ಕರವೀರ, ಇಂಚಲಕರಂಜಿ, ಹಾಥ್‌ ಕಣಗಲಾ ಹಾಗೂ ಕರ್ನಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ ಸೇರಿದಂತೆ ಇನ್ನೂ ಹಲವೆಡೆ ಬೈಕ್​ ಕಳ್ಳತನ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಬೈಕ್‌ ಕಳ್ಳರ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಸಾರ್ವಜನಿಕರು ರಾತ್ರಿ ವೇಳೆ ತಮ್ಮ ಬೈಕ್‌ಗಳನ್ನು ನಿಷ್ಕಾಳಜಿಯಿಂದ ನಿಲ್ಲಿಸಬಾರದು. ಸರಿಯಾಗಿ ಹ್ಯಾಂಡಲ್‌ ಲಾಕ್‌ ಮಾಡಿ, ಸುರಕ್ಷಿತ ಸ್ಥಳದಲ್ಲೇ ನಿಲ್ಲಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಪ್ರಕರಣ ಭೇದಿಸಿದ ಹೆಚ್ಚುವರಿ ಎಂ.ವೇಣುಗೋಪಾಲ, ಗೋಕಾಕ ಸಿಪಿಐ ಗೋಪಾಲ ಆರ್. ರಾಠೋಡ, ಎಎಸ್‌ಪಿ ಡಿ.ಎಚ್.ಮುಲ್ಲಾ, ಅಂಕಲಗಿ ಪಿಎಸ್‌ಐ ಎಚ್.ಡಿ.ಯರಝರ್ವಿ, ಗೋಕಾಕ ಪಿಎಸ್‌ಐ ಎಂ.ಡಿ.ಘೋರಿ, ಗೋಕಾಕ ಗ್ರಾಮೀಣ ಪಿಎಸ್‌ಐ ಕಿರಣ ಮೋಹಿತ, ಕಾನ್‌ಸ್ಟೆಬಲ್‌ಗಳಾದ ಬಿ.ವಿ.ನೇರ್ಲಿ, ವಿಠ್ಠಲ ನಾಯಕ, ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಂ.ಬಿ.ತಳವಾರ, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಂ.ಎಂ.ಹಾಲೊಳ್ಳಿ, ಎ.ಆರ್.ಮಾಳಗಿ ತಂಡವನ್ನು ಎಸ್ಪಿ ಅಭಿನಂದಿಸಿದ್ದಾರೆ.

ಮಾರ್ಕೆಟ್ ಪೊಲೀಸರಿಂದಲೂ‌ ಕಾರ್ಯಾಚರಣೆ:ಇಲ್ಲಿಯ ಖಡೇಬಜಾರ್‌ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಿದಾಗ ಕಳವು ಮಾಡಿದ ಆರು ಬೈಕುಗಳನ್ನು ಮಾರ್ಕೆಟ್‌ ಠಾಣೆ ಪೊಲೀಸರು ಪತ್ತೆ ಮಾಡಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದ ಸಂತೋಷ ಶಿವಪ್ಪ ಬೇವಿನಕೊಪ್ಪ (29) ಹಾಗೂ ಬೆಳಗಾವಿ ನಗರದ ಶ್ರೀನಗರದ ನಿವಾಸಿ ಅಬುಬಕರ್‌ ಸಿಖಂದರ್ ಸವದಿ (21) ಬಂಧಿತರು. ಆರೋಪಿಗಳಿಂದ 2.40 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಕೆಟ್‌ ಎಸಿಪಿ ಎನ್.ವಿ. ಭರಮನಿ ಅವರ ನಿರ್ದೇಶನದಲ್ಲಿ ಇನ್‌ಸ್ಪೆಕ್ಟರ್‌ ಮಹಾಂತೇಶ ಕೆ.ಧಾಮಣ್ಣವರ ಹಾಗೂ ಸಿಬ್ಬಂದಿ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಮಹಿಳೆಯ ಕೊಲೆ ಮಾಡಿ ಶವ ಹೂತು ಹಾಕಿ ಬಂದ ಯುವಕ : ಐದು ತಿಂಗಳ ಬಳಿಕ ಆರೋಪಿ ಅರೆಸ್ಟ್​

ABOUT THE AUTHOR

...view details