ಕರ್ನಾಟಕ

karnataka

ETV Bharat / state

Independence Day: ಇತಿಹಾಸ ಸಾರುವ ಬೆಳಗಾವಿ ವೀರಸೌಧ; ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಹೇಳಿದ್ದೇನು?

77th Independence Day: ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಈ ಸ್ಥಳದ ಇತಿಹಾಸ ನಿಮಗೆ ಗೊತ್ತೇ?.

By

Published : Aug 15, 2023, 6:03 AM IST

ಬೆಳಗಾವಿ ವೀರಸೌಧ
ಬೆಳಗಾವಿ ವೀರಸೌಧ

ಸ್ವಾತಂತ್ರ್ಯ ಹೋರಾಟದ ಇತಿಹಾಸ ಸಾರುತ್ತಿದೆ ಬೆಳಗಾವಿಯ ವೀರಸೌಧ.

ಬೆಳಗಾವಿ :ಭಾರತ ದೇಶ ತನ್ನ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರದಲ್ಲಿದೆ. ಇನ್ನೊಂದೆಡೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿದ್ದ ಬೆಳಗಾವಿ ವೀರಸೌಧದಲ್ಲಿ ಪ್ರತಿ ವರ್ಷ ಆಗಸ್ಟ್ 15ರಂದು ಬೆಳಿಗ್ಗೆ 7 ಗಂಟೆಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ. ಅಲ್ಲದೇ ಬೆಳಗಾವಿಗೆ ಬರುವ ಎಲ್ಲ ಮಹನೀಯರು ಈ ಸೌಧಕ್ಕೆ ಭೇಟಿ ನೀಡುತ್ತಾರೆ. ಏಕೆಂದರೇ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಇತಿಹಾಸ ತನ್ನದೇಯಾದ ಛಾಪು ಮೂಡಿಸಿದೆ.

ಹೌದು, ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಮಣ್ಣಿಗೆ ವಿಶೇಷ ನಂಟಿದ್ದು, ಹಲವು ಬಲಿದಾನಗಳಿಗೆ ಸಾಕ್ಷಿಯಾಗಿದೆ. ಪ್ರಮುಖವಾಗಿ 1924ರಲ್ಲಿ ಇಂದಿನ ಟಿಳಕವಾಡಿಯ ಅಂದಿನ ವಿಜಯನಗರದ ಈ ಸ್ಥಳದಲ್ಲಿಯೇ 39ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿಕೊಂಡ ಮೊದಲ ಮತ್ತು ಏಕೈಕ ಅಧಿವೇಶನ ಎಂಬ ಹೆಗ್ಗಳಿಕೆಯೂ ಈ ಸ್ಥಳಕ್ಕಿದೆ. ಅಧಿವೇಶನಕ್ಕೆ ಸಾಕ್ಷಿಯಾದ ನೆಲದಲ್ಲಿ ಈಗ ವೀರಸೌಧ ನಿರ್ಮಿಸಲಾಗಿದ್ದು, 2002ರಲ್ಲಿ ಸ್ಮಾರಕವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅಧಿವೇಶನಕ್ಕೆ ಆಗಮಿಸುವ ಜನರಿಗಾಗಿ ಅಂದು ಬೆಳಗಾವಿಯಲ್ಲೇ ತಾತ್ಕಾಲಿಕ ರೈಲು ನಿಲ್ದಾಣ ಕೂಡ ನಿರ್ಮಿಸಲಾಗಿತ್ತು.

ಸ್ವಾತಂತ್ರ್ಯ ಯೋಧ ಆರ್‌.ಎಚ್‌.ಕುಲಕರ್ಣಿ ನೇತೃತ್ವದಲ್ಲಿ ಹಲವು ಸೇನಾನಿಗಳೇ ಇದಕ್ಕೆ ಸೌಧದ ರೂಪ ಕೊಟ್ಟಿದ್ದಾರೆ. ಇಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆ ಹಾಗೂ ದಿಗ್ಗಜ ನಾಯಕರ ಉಬ್ಬುಚಿತ್ರಗಳು ಆಕರ್ಷಿಸುತ್ತಿವೆ.‌ ಅತ್ಯಂತ ವಿರಳವಾದ, ಐತಿಹಾಸಿಕ ಕ್ಷಣದ ಹಲವು ಫೋಟೊಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅಧಿವೇಶನಕ್ಕೆ ಆಗಮಿಸಿದ್ದ ಹೋರಾಟಗಾರರಿಗೆ ಕುಡಿಯುವ ನೀರಿಗಾಗಿ ಬಾವಿ ತೋಡಲಾಗಿತ್ತು. ಅದು ‘ಕಾಂಗ್ರೆಸ್‌ ಬಾವಿ’ ಎಂದೇ ಪ್ರಸಿದ್ಧವಾಗಿದ್ದು, ಈಗಲೂ ಅಂದಿನ ಹೋರಾಟಕ್ಕೆ ಈ ಬಾವಿ ಸಾಕ್ಷಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು ಎನ್ನುವ ನಿರ್ಣಯ ಅಂಗೀಕರಿಸಿದ್ದು ಕೂಡ ಇಲ್ಲಿನ ನಡೆದ ಅಧಿವೇಶನದಲ್ಲಿ ಎನ್ನುವುದು‌ ಮತ್ತೊಂದು‌ ವಿಶೇಷ.

ಬೆಳಗಾವಿಗೆ ಬಂದಿದ್ದ ದಿಗ್ಗಜ‌ ನಾಯಕರು :ಗಾಂಧೀಜಿ ಅವರಿಂದ ‘ಕರ್ನಾಟಕದ ಸಿಂಹ’ ಎಂದೇ ಕರೆಯಿಸಿಕೊಂಡ ಹುದಲಿ ಗ್ರಾಮದ ಗಂಗಾಧರರಾವ್‌ ದೇಶಪಾಂಡೆಯವರ ಪ್ರಯತ್ನದ ಫಲವಾಗಿ ಅಧಿವೇಶನ ಯಶಸ್ವಿಯಾಗಿ ನಡೆದಿತ್ತು. ಮೋತಿಲಾಲ್‌ ನೆಹರು, ಜವಾಹರಲಾಲ್‌ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ, ಮೌಲಾನಾ ಅಬುಲ್ ಕಲಾಂ ಆಜಾದ್, ಮೌಲಾನಾ ಶೌಕತ್‌ಅಲಿ, ಸರೋಜಿನಿ ನಾಯ್ಡು, ಲಾಲಾ ಲಜಪತ ರಾಯ್‌ ಸೇರಿದಂತೆ ಘಟಾನುಘಟಿ ನಾಯಕರು ಸಮಾವೇಶಕ್ಕೆ ಆಗಮಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಕ್ತಿ ತುಂಬಿದ್ದರು.

ಇತಿಹಾಸ ಸಾರುವ ಕಪ್ಪು-ಬಿಳುಪಿನ ಚಿತ್ರಗಳು :ಕಾಂಗ್ರೆಸ್ ಅಧಿವೇಶನದ ಅಪರೂಪದ ಭಾವಚಿತ್ರಗಳು, ಅಂದಿನ ಕಾಂಗ್ರೆಸ್ ಬಾವಿ, ಜವಾಹರಲಾಲ್ ನೆಹರು, ಸುಭಾಷಚಂದ್ರ ಬೋಸ, ಸರ್ದಾರ್ ವಲ್ಲಭಬಾಯಿ ಪಟೇಲ್, ಸರೋಜಿನಿ ನಾಯ್ಡು ಸೇರಿ ಮತ್ತಿತರ ರಾಷ್ಟ್ರ ನಾಯಕರ ಜೊತೆಗೆ ಗಾಂಧೀಜಿ ಅವರು ಇರುವ ಭಾವಚಿತ್ರಗಳು ಇತಿಹಾಸವನ್ನು ಬಿಂಬಿಸುತ್ತಿವೆ. ಇದರೊಂದಿಗೆ, ಗಾಂಧೀಜಿ ಅವರ ಬಾಲ್ಯ, ಕಲಿತ ಶಾಲೆ, ಬೆಳೆದ ಮನೆಯ ಚಿತ್ರಗಳಿವೆ. ಬೆಳಗಾವಿಯ ಮಣ್ಣು ಮುಟ್ಟಿ ನಮಸ್ಕರಿಸುವ ಅವರ ಫೋಟೊ. ಗಾಂಧಿ ಅವರೇ ‘ಗಾಂಧಿ ಟೋ‍ಪಿ’ ಧರಿಸಿದ ಕಪ್ಪು ಬಿಳುಪಿನ ಚಿತ್ರಗಳು ಅಂದಿನ ಸ್ವಾತಂತ್ರ್ಯ ಚಳುವಳಿಯ ಇತಿಹಾಸವನ್ನು ಕಟ್ಟಿಕೊಡುತ್ತಿವೆ.

ಸ್ವಾತಂತ್ರ್ಯ ಹೋರಾಟಗಾರ ಕಲಘಟಗಿ ಅಜ್ಜ ಹೇಳಿದ್ದೇನು? :ಸಮಾವೇಶಕ್ಕೆ ಸೇರಿದ್ದ 30 ಸಾವಿರ ಜನರಿಗೆ ನೀರಿನ ವ್ಯವಸ್ಥೆ ಮಾಡುವ ಸಲುವಾಗಿ ಇದೇ ಜಾಗದಲ್ಲಿ ಅಂದು 4,370 ರೂ. 3 ಆಣೆ ಖರ್ಚು ಮಾಡಿ ಬಾವಿಯೊಂದನ್ನು ಕೊರೆಯಿಸಲಾಗಿತ್ತು. ಆ ಬಾವಿಗೆ ಪಂಪಾ ಸರೋವರ ಎಂದು ಹೆಸರಿಸಲಾಗಿತ್ತು. ಕಾಲಾಂತರದಲ್ಲಿ ಕಾಂಗ್ರೆಸ್ ಬಾವಿ ಎಂದೇ ಜನಪ್ರಿಯವಾಗಿದೆ. ಅಧಿವೇಶನ ನಡೆದಾಗ ನನಗೆ 4 ವರ್ಷ ವಯಸ್ಸು, ಅದನ್ನು ನಾನು ಪ್ರತ್ಯಕ್ಷ ನೋಡಲು ಸಾಧ್ಯವಾಗಲಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ರಾಜೇಂದ್ರ ಕಲಘಟಗಿ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂದರ್ಭವನ್ನು‌‌ ಮೆಲುಕು ಹಾಕಿದರು.

ಬ್ರಿಟಿಷರೇ ಭಾರತ ಬಿಟ್ಟು‌ ತೊಲಗಿ ಹೋರಾಟಕ್ಕೆ ಮಹಾತ್ಮಾ ಗಾಂಧೀಜಿ ನೀಡಿದ್ದ ಕರೆಗೆ ಓಗೊಟ್ಟು ನಾವು ಹೋರಾಟಕ್ಕೆ ಧುಮಕಿದ್ದೆವು.‌ ಅಲ್ಲದೇ ಜೈಲುವಾಸ ಕೂಡ ಅನುಭವಿಸಿದ್ದೇವು ಎಂದು ವಿವರಿಸಿದರು. ಇನ್ನು ಬ್ರಿಟಿಷರ ಅವಧಿಯಲ್ಲಿ ದೇಶದಲ್ಲಿ ಏನೂ ಇರಲಿಲ್ಲ. ಸ್ವಾತಂತ್ರ್ಯ ಸಿಕ್ಕ‌ ಬಳಿಕ‌ ದೇಶ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಹಿಂದೆ ನಾವೆಲ್ಲಾ ರೊಟ್ಟಿ ತಿನ್ನುತ್ತಿದ್ದೇವು. ಆದರೆ ಇಂದಿನವರು ಕುರಕುರಿ ತಿಂದು ಬದುಕುತ್ತಿವೆ. ಯುವಕರು ಗುಟಕಾ ಸೇರಿ ದುಶ್ಚಟಗಳ ದಾಸರಾಗಿರೋದು‌ ಖೇದಕರ ಸಂಗತಿ ಎಂದರು.

ಇದನ್ನೂ ಓದಿ :Independence day: ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ದೇಶಪ್ರೇಮ ಸಾರುವ ಕನ್ನಡ ಸಿನಿಮಾಗಳಿವು..

ABOUT THE AUTHOR

...view details