ಬೆಳಗಾವಿ: ರೈತರಿಗೆ, ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳಿಗೆ 87 ಸುಸಜ್ಜಿತ 'ಪಶು ಸಂಜೀವಿನಿ' ಆ್ಯಂಬುಲೆನ್ಸ್ಗಳನ್ನು, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಲೋಕಾರ್ಪಣೆಗೊಳಿಸಿದರು. ಬೆಳಗಾವಿ ತಾಲೂಕಿನ ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 82 ಪಶು ಸಂಜೀವಿನಿ ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಿದರು.
ಈ ವೇಳೆ ಗೋ ಮಾತೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗಾವಿ ಜಿಲ್ಲೆಗೆ 17, ಗದಗ 8, ಹಾವೇರಿ 9, ಧಾರವಾಡ 8, ಬಾಗಲಕೋಟೆ 13, ವಿಜಯಪುರ 14, ಉತ್ತರ ಕನ್ನಡ ಜಿಲ್ಲೆಗೆ 13 ಆ್ಯಂಬುಲೆನ್ಸ್ ಒದಗಿಸಿದರು.
ಪಶು ಸಾಕಾಣಿಕೆ ಕಷ್ಟದ ಕೆಲಸ: ಬಳಿಕ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಪಶುಚಿಕಿತ್ಸೆಗೆ ಅನುಕೂಲವಾಗಲೆಂದು 44 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆ್ಯಂಬುಲೆನ್ಸ್ ಖರೀದಿ ಮಾಡಲಾಗಿದೆ. ಜಾನುವಾರುಗಳು ರೈತನ ಮಿತ್ರನಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಪಶು ಸಾಕಾಣಿಕೆ ಕಷ್ಟದ ಕೆಲಸವಾಗುತ್ತಿದೆ. ದನಕರುಗಳನ್ನು ಸಾಕಿದಷ್ಟು ಭೂಮಿ ಫಲವತ್ತಾಗುತ್ತದೆ. ಆದ್ದರಿಂದ ಪಶು ಸಾಕಾಣಿಕೆ ಹೆಚ್ಚಾಗಬೇಕಿದೆ ಎಂದರು.
ರೈತರ ಆದಾಯ ದ್ವಿಗುಣ: ಆಹಾರ ಉತ್ಪಾದನೆಯಲ್ಲಿ ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆ ಪ್ರಮಾಣ ಹೆಚ್ಚಾಗುತ್ತಿದೆ. ಗುಣಮಟ್ಟದ ಆಹಾರ ಧಾನ್ಯ ಬೆಳೆಯಲು ಅನುಕೂಲವಾಗುವಂತೆ ಸಾವಯವ ಕೃಷಿಯನ್ನು ಸರಕಾರ ಪ್ರೋತ್ಸಾಹಿಸುತ್ತಿದೆ. ಕೃಷಿಯ ಜತೆಗೆ ಪಶು ಸಾಕಾಣಿಕೆ ಲಾಭದಾಯಕವಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಪಶು ಸಾಕಾಣಿಕೆ ಸಹಕಾರಿಯಾಗಿದೆ.
ಪಶುಗಳಿಗೆ ಉತ್ತಮ ಹಾಗೂ ಸಕಾಲಿಕ ಚಿಕಿತ್ಸೆ ಒದಗಿಸಲು ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಸರಕಾರ ಒದಗಿಸುತ್ತಿದೆ. ಜನರು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿ ಮನೆಯಲ್ಲಿ ಇರುವ ಕುಟುಂಬದ ಸದಸ್ಯರ ಸಂಖ್ಯೆಗಿಂತ ಹೆಚ್ಚು ಹಸು, ಕುರಿ, ಎಮ್ಮೆ, ಕೋಳಿ ಸೇರಿದಂತೆ ವಿವಿಧ ಜಾನುವಾರುಗಳನ್ನು ಸಾಕಬೇಕು. ಈ ನಿಟ್ಟಿನಲ್ಲಿ ರೈತಾಪಿ ಕುಟುಂಬಗಳು ಮುಂದಾಗಬೇಕು ಎಂದು ಕರೆ ನೀಡಿದರು.