ಕರ್ನಾಟಕ

karnataka

By

Published : Jul 19, 2022, 5:35 PM IST

ETV Bharat / state

ಬೆಳಗಾವಿಯಲ್ಲಿ 82 ಪಶು ಸಂಜೀವಿನಿ ಆ್ಯಂಬುಲೆನ್ಸ್​ಗಳ ಲೋಕಾರ್ಪಣೆ

82 ಪಶು ಸಂಜೀವಿನಿ ಆ್ಯಂಬುಲೆನ್ಸ್​​ಗಳು ಲೋಕಾರ್ಪಣೆ- ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳರಿಂದ ಗ್ರೀನ್​​ ಸಿಗ್ನಲ್​

ಪಶು ಸಂಜೀವಿನಿ ಆ್ಯಂಬುಲೆನ್ಸ್​ಗಳ ಲೋಕಾರ್ಪಣೆ
ಪಶು ಸಂಜೀವಿನಿ ಆ್ಯಂಬುಲೆನ್ಸ್​ಗಳ ಲೋಕಾರ್ಪಣೆ

ಬೆಳಗಾವಿ: ರೈತರಿಗೆ, ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬೆಳಗಾವಿ ವಿಭಾಗದ 7 ಜಿಲ್ಲೆಗಳಿಗೆ 87 ಸುಸಜ್ಜಿತ 'ಪಶು ಸಂಜೀವಿನಿ' ಆ್ಯಂಬುಲೆನ್ಸ್‌ಗಳನ್ನು, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಲೋಕಾರ್ಪಣೆಗೊಳಿಸಿದರು. ಬೆಳಗಾವಿ ತಾಲೂಕಿನ ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 82 ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಲೋಕಾರ್ಪಣೆ ಮಾಡಿದರು.

ಈ ವೇಳೆ ಗೋ ಮಾತೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗಾವಿ ಜಿಲ್ಲೆಗೆ 17, ಗದಗ 8, ಹಾವೇರಿ 9, ಧಾರವಾಡ 8, ಬಾಗಲಕೋಟೆ 13, ವಿಜಯಪುರ 14, ಉತ್ತರ ಕನ್ನಡ ಜಿಲ್ಲೆಗೆ 13 ಆ್ಯಂಬುಲೆನ್ಸ್‌ ಒದಗಿಸಿದರು.

ಪಶು ಸಾಕಾಣಿಕೆ ಕಷ್ಟದ ಕೆಲಸ: ಬಳಿಕ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಪಶುಚಿಕಿತ್ಸೆಗೆ ಅನುಕೂಲವಾಗಲೆಂದು 44 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆ್ಯಂಬುಲೆನ್ಸ್ ಖರೀದಿ ಮಾಡಲಾಗಿದೆ. ಜಾನುವಾರುಗಳು ರೈತನ ಮಿತ್ರನಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಪಶು ಸಾಕಾಣಿಕೆ ಕಷ್ಟದ ಕೆಲಸವಾಗುತ್ತಿದೆ. ದನಕರುಗಳನ್ನು ಸಾಕಿದಷ್ಟು ಭೂಮಿ ಫಲವತ್ತಾಗುತ್ತದೆ. ಆದ್ದರಿಂದ ಪಶು ಸಾಕಾಣಿಕೆ ಹೆಚ್ಚಾಗಬೇಕಿದೆ ಎಂದರು.

ರೈತರ ಆದಾಯ ದ್ವಿಗುಣ: ಆಹಾರ ಉತ್ಪಾದನೆಯಲ್ಲಿ ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆ ಪ್ರಮಾಣ ಹೆಚ್ಚಾಗುತ್ತಿದೆ. ಗುಣಮಟ್ಟದ ಆಹಾರ ಧಾನ್ಯ ಬೆಳೆಯಲು ಅನುಕೂಲವಾಗುವಂತೆ ಸಾವಯವ ಕೃಷಿಯನ್ನು ಸರಕಾರ ಪ್ರೋತ್ಸಾಹಿಸುತ್ತಿದೆ. ಕೃಷಿಯ ಜತೆಗೆ ಪಶು ಸಾಕಾಣಿಕೆ ಲಾಭದಾಯಕವಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಪಶು ಸಾಕಾಣಿಕೆ ಸಹಕಾರಿಯಾಗಿದೆ.

ಪಶುಗಳಿಗೆ ಉತ್ತಮ ಹಾಗೂ ಸಕಾಲಿಕ ಚಿಕಿತ್ಸೆ ಒದಗಿಸಲು ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಸರಕಾರ ಒದಗಿಸುತ್ತಿದೆ. ಜನರು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿ ಮನೆಯಲ್ಲಿ ಇರುವ ಕುಟುಂಬದ ಸದಸ್ಯರ ಸಂಖ್ಯೆಗಿಂತ ಹೆಚ್ಚು ಹಸು, ಕುರಿ, ಎಮ್ಮೆ, ಕೋಳಿ ಸೇರಿದಂತೆ ವಿವಿಧ ಜಾನುವಾರುಗಳನ್ನು ಸಾಕಬೇಕು‌. ಈ ನಿಟ್ಟಿನಲ್ಲಿ ರೈತಾಪಿ ಕುಟುಂಬಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಸಿಎಂ ಲೋಕಾರ್ಪಣೆ:ಬಳಿಕ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾತನಾಡಿ, ಪ್ರಧಾನಿ ಮೋದಿ ಗೋರಕ್ಷಕರು, ಗೋಪಾಲಕರು, ಪ್ರಧಾನಿ ಮೋದಿ ಕೃಪೆಯಿಂದ ಕೇಂದ್ರದಿಂದ ರಾಜ್ಯಕ್ಕೆ 275 ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಕರ್ನಾಟಕಕ್ಕೆ ಮಂಜೂರಾಗಿದೆ‌. ಈಗಾಗಲೇ 70 ಆ್ಯಂಬುಲೆನ್ಸ್​​ಗಳಿಗೆ ಬೆಂಗಳೂರಿನಲ್ಲಿ ಸಿಎಂ ಲೋಕಾರ್ಪಣೆ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್‌ವೈ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೃಪೆಯಿಂದ ಹಲವು ಯೋಜನೆ ಮಾಡುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಆ್ಯಂಬುಲೆನ್ಸ್‌ ನೀಡಲಾಗುತ್ತಿದೆ.

ಗೋಶಾಲೆ ಆರಂಭ:ನಮ್ಮ ರಾಜ್ಯಕ್ಕೆ ಒಂದು ಲಕ್ಷ ಜಾನುವಾರುಗಳಿಗೆ ಒಂದು ಆ್ಯಂಬುಲೆನ್ಸ್‌ ಮಂಜೂರಾಗಿದೆ. ರಾಜ್ಯದಲ್ಲಿ ಈ ಹಿಂದೆ 15 ಜಿಲ್ಲೆಗಳಿಗೆ ಆ್ಯಂಬುಲೆನ್ಸ್‌ ಕೊಟ್ಟಿದ್ದೆ. ನಮ್ಮ ಯೋಜನೆ ಇಡೀ ದೇಶದಲ್ಲಿ ಅನುಷ್ಠಾನ ಆಗುತ್ತಿರೋದಕ್ಕೆ ನಮಗೆ ಹೆಮ್ಮೆಯಿದೆ. ಆ್ಯಂಬುಲೆನ್ಸ್‌ ಮೆಂಟೆನೆನ್ಸ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶೇ. 60:40 ಅನುಪಾತದಲ್ಲಿ ಅನುದಾನ ಇದ್ದು, ಟೆಂಡರ್ ಪ್ರೊಸೆಸ್‌ನಲ್ಲಿದೆ.

ಪ್ರತಿ ಜಿಲ್ಲೆಗೊಂದರಂತೆ 30 ಗೋಶಾಲೆ ಸಿದ್ಧವಾಗಿದ್ದು, ನಾಲ್ಕು ಗೋಶಾಲೆ ಪ್ರಾರಂಭ ಮಾಡಿದ್ದೇವೆ. ಶೀಘ್ರದಲ್ಲೇ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಆರಂಭಿಸಲಾಗುವುದು. ಇದಾದ ಮೇಲೆ ಮತ್ತೆ 70 ಗೋಶಾಲೆ ಆರಂಭ ಮಾಡಲಾಗುವುದು.

ಇದನ್ನೂ ಓದಿ:ಕಾಂಗ್ರೆಸ್​​ನವರು ಸತ್ಯ ಮಾತನಾಡಿದರೆ ಅವರಿಗೆ ಸಾವು ಬರುತ್ತದೆ: ಸಚಿವ ಕಾರಜೋಳ

ಆತ್ಮನಿರ್ಭರ ಗೋಶಾಲಾ ನಿರ್ಮಾಣ ಮಾಡ್ತಿದ್ದೀವಿ. ಪ್ರಾಣಿ ಸಹಾಯವಾಣಿ ಕೇಂದ್ರ, ಪ್ರಾಣಿ ಕಲ್ಯಾಣ ಮಂಡಳಿ ಶುರು ಮಾಡಿದ್ದೇವೆ‌‌‌. ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿಗಾ ವ್ಯವಸ್ಥೆಗಾಗಿ ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪಿಸಲಾಗಿದೆ. ರೈತರಿಂದ 8277100200 ಅಥವಾ 1962ಕ್ಕೆ ಕರೆ ಬಂದ ತಕ್ಷಣ ನಮ್ಮ ಆ್ಯಂಬುಲೆನ್ಸ್‌ ನೇರವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತದೆ.

ಪ್ರತಿ ಆ್ಯಂಬುಲೆನ್ಸ್‌ನಲ್ಲಿ ಪಶು ವೈದ್ಯ, ಪಶು ಸಹಾಯಕ ಮತ್ತು ವಾಹನ ಚಾಲಕ ಕಂ ಡಿದರ್ಜೆ ನೌಕಕರು ಕಾರ್ಯನಿರ್ವಹಿಸುತ್ತಾರೆ ಎಂದು ಪ್ರಭು ಚವ್ಹಾಣ್ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details