ಕರ್ನಾಟಕ

karnataka

ಪ್ರತ್ಯೇಕ ಘಟನೆಗಳಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಯೋಧರು ಸಾವು; ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

By

Published : Jun 30, 2023, 3:56 PM IST

Updated : Jun 30, 2023, 4:33 PM IST

ರಜೆಗೆಂದು ಊರಿಗೆ ಬಂದಿದ್ದ ಸೈನಿಕನೋರ್ವ ನಿಪ್ಪಾಣಿ ಬಳಿಯ ಸ್ತವನಿಧಿ ಘಾಟ್‌ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟರೆ, ಇನ್ನೊಬ್ಬ ಯೋಧ ಹಾವೇರಿಯ ಬಸ್ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಅಸುನೀಗಿದ್ದಾರೆ.

Soldier Yogesh Dattawade, Sangappa Savadi
ಸೈನಿಕ ಯೋಗೇಶ ದತ್ತವಾಡೆ,ಸಂಗಪ್ಪ ಸವದಿ

ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಚಿಕ್ಕೋಡಿ: ರಜೆಗೆಂದು ಊರಿಗೆ ಬಂದಿದ್ದ ಸೈನಿಕರೊಬ್ಬರು ಸ್ನೇಹಿತನನ್ನು ಭೇಟಿ ಮಾಡಿ ವಾಪಸ್ ಗ್ರಾಮಕ್ಕೆ ಮರಳುವಾಗ ನಿಪ್ಪಾಣಿ ಬಳಿಯ ಸ್ತವನಿಧಿ ಘಾಟ್‌ನಲ್ಲಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಪ್ಪಾಣಿ ತಾಲೂಕಿನ ನವಲಿಹಾಳ ಗ್ರಾಮದ ಯೋಗೇಶ ಅಪ್ಪಾಸಾಹೇಬ್ ದತ್ತವಾಡೆ (24) ಮೃತರೆಂದು ಗುರುತಿಸಲಾಗಿದೆ. ಇವರು ಮದ್ರಾಸ್ ರೆಜಿಮೆಂಟ್‌ನಲ್ಲಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಮೃತದೇಹವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ ಗ್ರಾಮಸ್ಥರು ಪುಷ್ಪಾರ್ಚನೆಯ ಮೂಲಕ ಅಂತಿಮ ನಮನ ಸಲ್ಲಿಸಿದರು. ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯತಪ್ಪಿ ಬಿದ್ದು ಯೋಧ ಸಾವು:ರಜೆಗೆ ಬಂದಿದ್ದ ಇನ್ನೊಬ್ಬ ಯೋಧ ಹಾವೇರಿಯ ಬಸ್ ನಿಲ್ದಾಣದಲ್ಲಿ ಆಯ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಸಂಗಪ್ಪ ರಾಯಪ್ಪ ಸವದಿ (33) ಮೃತರೆಂದು ಗುರುತಿಸಲಾಗಿದೆ. ಹಾವೇರಿ ನಗರದ ಬಸ್​ ನಿಲ್ದಾಣದಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದರಿಂದ ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೊಕಟನೂರ ಗ್ರಾಮದ ತೋಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಕಳೆದ 13 ವರ್ಷದಿಂದ ಇವರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಐಗಳಿ ಮತ್ತು ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಸೋಲಾರ್ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ... ಸೊಪ್ಪು ತಿನ್ನಲು ಸೊಂಡಿಲು ಹಾಕಿದ ಕಾಡಾನೆ ಸಾವು

Last Updated : Jun 30, 2023, 4:33 PM IST

ABOUT THE AUTHOR

...view details