ಕರ್ನಾಟಕ

karnataka

ETV Bharat / state

ಮತ್ತೆ ಮುನ್ನೆಲೆಗೆ ಬೆಳಗಾವಿ ಜಿಲ್ಲಾ ವಿಭಜನೆ ಚರ್ಚೆ.. ಜಾರಕಿಹೊಳಿ ಸಹೋದರರನ್ನ ಕೆರೆಳಿಸುತ್ತಾ 'ಕತ್ತಿ'ವರಸೆ.. - ಕಳೆದ ನಾಲ್ಕು ದಶಕಗಳಿಂದ ಪ್ರತ್ಯೇಕ ಬೆಳಗಾವಿ ಜಿಲ್ಲೆ ಕೂಗೂ

ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂಬ ಕೂಗು ಇಂದು-ನಿನ್ನೆಯದಲ್ಲ. ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ, ಅಥಣಿ ಜಿಲ್ಲಾ ಹೋರಾಟ ವೇದಿಕೆ, ಗೋಕಾಕ್​​ ಜಿಲ್ಲಾ ಹೋರಾಟ ಸಮಿತಿ ಹಾಗೂ ನಿಪ್ಪಾಣಿ ಜಿಲ್ಲಾ ಹೋರಾಟ ಸಮಿತಿಗಳು ಈಗಾಗಲೇ ಹುಟ್ಟಿಕೊಂಡಿವೆ..

ಮತ್ತೇ ಮುನ್ನೆಲೆಗೆ ಬೆಳಗಾವಿ ಜಿಲ್ಲಾ ವಿಭಜನೆ ಚರ್ಚೆ
ಮತ್ತೇ ಮುನ್ನೆಲೆಗೆ ಬೆಳಗಾವಿ ಜಿಲ್ಲಾ ವಿಭಜನೆ ಚರ್ಚೆ

By

Published : Apr 5, 2022, 5:53 PM IST

ಬೆಳಗಾವಿ :ಬಹುಬೇಡಿಕೆಯ ಬೆಳಗಾವಿ ಜಿಲ್ಲಾ ವಿಭಜನೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಅಖಂಡ ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಯನ್ನು ಪ್ರತ್ಯೇಕಿಸಬೇಕು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ಪಕ್ಷಾತೀತ ಬೆಂಬಲವೂ ದೊರೆಯುತ್ತಿದೆ. ಆದರೆ, ದಿಢೀರ್ ಹುಟ್ಟಿಕೊಂಡ ಈ ಬೆಳವಣಿಗೆ ಜಿಲ್ಲೆಯ ಪ್ರಭಾವಿ ರಾಜಕೀಯ ಕುಟುಂಬಗಳಾದ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬಗಳ ಸಂಘರ್ಷಕ್ಕೆ ವೇದಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಬೆಳಗಾವಿ ಜಿಲ್ಲೆಯ ವಿಭಜನೆಗೆ ಕನ್ನಡ ಹೋರಾಟಗಾರರ ವಿರೋಧ..

ಕಳೆದ ನಾಲ್ಕು ದಶಕಗಳಿಂದ ಪ್ರತ್ಯೇಕ ಜಿಲ್ಲೆಯ ಕೂಗೂ : ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂಬ ಕೂಗು ಇಂದು-ನಿನ್ನೆಯದಲ್ಲ. ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ, ಅಥಣಿ ಜಿಲ್ಲಾ ಹೋರಾಟ ವೇದಿಕೆ, ಗೋಕಾಕ್​​ ಜಿಲ್ಲಾ ಹೋರಾಟ ಸಮಿತಿ ಹಾಗೂ ನಿಪ್ಪಾಣಿ ಜಿಲ್ಲಾ ಹೋರಾಟ ಸಮಿತಿಗಳು ಈಗಾಗಲೇ ಹುಟ್ಟಿಕೊಂಡಿವೆ. ಜಿಲ್ಲೆಯನ್ನು ವಿಭಿಸುವುದಾದರೆ ತಮ್ಮ ತಮ್ಮ ತಾಲೂಕಿಗೆ ಜಿಲ್ಲಾ ಸ್ಥಾನಮಾನ ನೀಡುವಂತೆ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ಸ್ಥಳೀಯ ಶಾಸಕರು ಆದಿಯಾಗಿ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಲೇ ಬರಲಾಗುತ್ತಿದೆ.

ವಿಭಜನೆಗೆ ಕತ್ತಿ ಖಡಕ್​ ನಿರ್ಧಾರ : ಆದರೆ, ನಿನ್ನೆಯಷ್ಟೇ ಜಿಲ್ಲಾ ವಿಭಜನೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಸಚಿವ ಉಮೇಶ ಕತ್ತಿ, ಬೆಳಗಾವಿಯನ್ನು ಪ್ರತ್ಯೇಕಿಸಿ ಮೂರು ಜಿಲ್ಲೆಗಳನ್ನು ಮಾಡಬೇಕು. ಉಪವಿಭಾಗಾಧಿಕಾರಿ ಕಚೇರಿ ಇರುವ ಬೆಳಗಾವಿ, ಚಿಕ್ಕೋಡಿ ಹಾಗೂ ಬೈಲಹೊಂಗಲ ಜಿಲ್ಲೆಗಳಾಗಬೇಕು. ಈ ಸಂಬಂಧ ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗಿದೆ. ಶೀಘ್ರವೇ ಬೆಳಗಾವಿ ನಾಯಕರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದೆ.

ನನಗೆ ಬೆಂಬಲ ಸಿಗಲಿ, ಸಿಗದೇ ಇರಲಿ. ಒಬ್ಬನಾದರೂ ಹೋಗಿ ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಸಲ್ಲಿಸುತ್ತೇನೆ ಎಂದಿದ್ದಾರೆ. ಸಚಿವ ಉಮೇಶ ಕತ್ತಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಬೆಂಬಲ ಸೂಚಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆ ಪ್ರತ್ಯೇಕವಾಗಬೇಕು. ಇದಕ್ಕೆ ಪಕ್ಷಾತೀತ ಬೆಂಬಲ ಸೂಚಿಸಲಾಗುವುದು ಎಂದಿದ್ದರು.

ಸಂಘರ್ಷಕ್ಕೆ ವೇದಿಕೆಯಾಗುತ್ತಾ? : ಕಳೆದೊಂದು ದಶಕಗಳಿಂದ ಕತ್ತಿ-ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಒಂದೇ ಆಗಿದ್ದರು. ಆದರೆ, ಕಳೆದ ಪರಿಷತ್ ಚುನಾವಣೆ ನಂತರ ಎರಡೂ ಕುಟುಂಬಗಳ ಮಧ್ಯೆದ ವೈಮನಸ್ಸು ದಿನ ಕಳೆದಂತೆ ಬಿಗಡಾಯಿಸುತ್ತಿದೆ. ಇನ್ನು ಜಿಲ್ಲಾ ವಿಭಜನೆ ಆದರೆ ಗೋಕಾಕಿಗೂ ಜಿಲ್ಲಾ ಸ್ಥಾನಮಾನ ದೊರಕಿಸಿಕೊಡಲು ಜಾರಕಿಹೊಳಿ ಸಹೋದರರು ಸರ್ವಪ್ರಯತ್ನ ಮಾಡಲೇಬೇಕು. ಆದರೀಗ ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ಅಖಂಡ ಬೆಳಗಾವಿಯನ್ನು ವಿಭಜಿಸಿ ಬೆಳಗಾವಿ, ಚಿಕ್ಕೋಡಿ ಹಾಗೂ ಬೈಲಹೊಂಗಲನ್ನು ಜಿಲ್ಲೆ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಲಿದೆ.

ಜಾರಕಿಹೊಳಿ ಸಹೋದರರನ್ನ ಕೆರೆಳಿಸಿದ 'ಕತ್ತಿ'ವರಸೆ : ಜಿಲ್ಲಾ ಸ್ಥಾನಕ್ಕಾಗಿ ಬೈಲಹೊಂಗಲದ ಜನರ ತ್ವರಿತ ಬೇಡಿಕೆ ಏನೂ ಆಗಿಲ್ಲ. ಆದರೆ, ಸಚಿವ ಕತ್ತಿ ಹೇಳಿಕೆ ಬೈಲಹೊಂಗಲ ಜನರಲ್ಲಿ ಹೊಸ ಆಶಾಭಾವನೆ ಮೂಡಿದರೆ, ಗೋಕಾಕ್​​ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಗೋಕಾಕ್​ ಬಿಟ್ಟು ಬೈಲಹೊಂಗಲಕ್ಕೆ ಜಿಲ್ಲಾ ಸ್ಥಾನಮಾನ ಕಲ್ಪಿಸಲು ಮುಂದಾಗುತ್ತಿರುವ ಉಮೇಶ ಕತ್ತಿ ನಡೆಯೂ ಜಾರಕಿಹೊಳಿ ಸಹೋದರರನ್ನು ಕೆರೆಳಿಸುವಂತೆ ಮಾಡಿದೆ.

ಜಿಲ್ಲೆಯನ್ನು ವಿಭಜಿಸುವುದಾದರೆ ಗೋಕಾಕಿಗೂ ಜಿಲ್ಲಾಸ್ಥಾನ ನೀಡಬೇಕು ಎಂದು ಜಾರಕಿಹೊಳಿ ಸಹೋದರರು ಸಿಎಂ ಬಳಿ ಪಟ್ಟು ಹಿಡಿಯುವ ಸಾಧ್ಯತೆಯೂ ಇದೆ. ಚುನಾವಣೆ ವರ್ಷದಲ್ಲೇ ಜಿಲ್ಲಾ ನಾಯಕರ ಮಧ್ಯೆ ತಿಕ್ಕಾಟಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಜಿಲ್ಲಾ ವಿಭಜನೆಯ ಜೇನುಗೂಡಿಗೆ ಸಿಎಂ ಕಲ್ಲು ಹೊಡೆಯುವರೇ ಎಂಬುದೇ ಸದ್ಯದ ಕುತೂಹಲ. ಆದರೆ, ಕತ್ತಿ ನೇತೃತ್ವದ ನಿಯೋಗ ಮಾತ್ರ ಜಿಲ್ಲಾ ವಿಭಜನೆಗೆ ಹಕ್ಕೋತ್ತಾಯ ಮಂಡಿಸುವುದಂತು ಸುಳ್ಳಲ್ಲ.

ಕನ್ನಡ ಹೋರಾಟಗಾರರ ವಿರೋಧ :ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬೇಕು ಎಂಬ ಅಭಿಪ್ರಾಯಕ್ಕೆ ಯಾರ ವಿರೋಧವಿಲ್ಲ. ಆದರೆ, ಬೆಳಗಾವಿ ರಾಜ್ಯದ ಗಡಿ ಜಿಲ್ಲೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವೂ ಸುಪ್ರೀಂಕೋರ್ಟಿನಲ್ಲಿದೆ. ಇಂಥ ಸಮಯದಲ್ಲಿ ಜಿಲ್ಲೆಯನ್ನು ವಿಭಜಿಸುವುದಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. 1997ರ ಸಮಯದಲ್ಲಿ ಜಿಲ್ಲೆಯ ವಿಭಜನೆಗೆ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್​​ ಕೈಹಾಕಿದ್ದರು.

ಜನರ ವಿರೋಧಕ್ಕೆ ಮಣಿದಿದ್ದ ಪಟೇಲ್ ಸರ್ಕಾರ :ಬೆಳಗಾವಿಯನ್ನು ಒಡೆದು ಬೆಳಗಾವಿ ಜೊತೆಗೆ ಚಿಕ್ಕೋಡಿ ಹಾಗೂ ಗೋಕಾಕ್​​ ಜಿಲ್ಲೆಯಾಗಿ ವಿಭಜಿಸಲು ನಿರ್ಧರಿಸಲಾಗಿತ್ತು. ಆದರೆ, ಬೆಳಗಾವಿ ಸೂಕ್ಷ್ಮಪ್ರದೇಶವಾದ ಕಾರಣ, ಸರ್ಕಾರದ ನಿರ್ಧಾರಕ್ಕೆ ಈ ಭಾಗದ ಜನ ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಮಠಾಧೀಶರು, ರೈತ ಹೋರಾಟಗಾರರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಾಥ್ ನೀಡಿದ್ದವು. ಬೆಳಗಾವಿ ಜನರಿಂದ ತೀವ್ರ ವಿರೋಧಕ್ಕೆ ಮಣಿದ ಪಟೇಲ್ ಸರ್ಕಾರ ಜಿಲ್ಲಾ ವಿಭಜನೆಯ ನಿರ್ಧಾರದಿಂದ ಹಿಂದೆ ಸರಿದಿತ್ತು.

ಅಂದಿನಿಂದ ಚಿಕ್ಕೋಡಿ ಹಾಗೂ ಗೋಕಾಕ್​​ ಭಾಗದ ಜನರು ಪ್ರತ್ಯೇಕ ಜಿಲ್ಲೆಗಾಗಿ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ, ನಂತರ ಬಂದ ಯಾವ ಸರ್ಕಾರವೂ ಜಿಲ್ಲಾ ವಿಭಜನೆಗೆ ಕೈಹಾಕಿಲ್ಲ. ಆದರೀಗ ಸರ್ಕಾರದ ಭಾಗವಾಗಿರುವ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಉಮೇಶ ಕತ್ತಿಯೇ ಜಿಲ್ಲಾ ವಿಭಜನೆ ಬಗ್ಗೆ ಮಾತನಾಡಿದ್ದಾರೆ. ಇದು ಯಾವ ಹಂತಕ್ಕೆ ತಲುಪಲಿದೆ ಎಂಬುವುದೇ ಸದ್ಯದ ಕುತೂಹಲ.

ABOUT THE AUTHOR

...view details