ಬೆಳಗಾವಿ :ಇಲ್ಲಿನ ಮಹಾನಗರ ಪಾಲಿಕೆ ಎದುರು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಕನ್ನಡ ಧ್ವಜಸ್ತಂಭವನ್ನು ಇದೀಗ ಮತ್ತಷ್ಟು ಸುಭದ್ರಗೊಳಿಸಲಾಗಿದೆ. ಪಾಲಿಕೆ ಎದುರು ಮೂರು ಅಡಿ ಆಳವಾದ ತೆಗ್ಗು ತೆಗೆದು ಧ್ವಜಸ್ತಂಭ ಅಳವಡಿಸಲಾಯಿತು.
ರಾತ್ರಿ 9.30 ರಿಂದ 10.30ರವರೆಗೆ ಕನ್ನಡ ಸಂಘಟನೆ ಕಾರ್ಯಕರ್ತರು ಒಂದು ಗಂಟೆಯ ಕಾಲ ಮಿಂಚಿನ ಕಾರ್ಯಾಚರಣೆ ನಡೆಸಿ ಧ್ವಜಸ್ತಂಭ ಭದ್ರಗೊಳಿಸಿದರು. ಡಿಗ್ಗಿಂಗ್ ಯಂತ್ರದ ಮೂಲಕ ಮೂರಡಿ ಆಳದ ತೆಗ್ಗು ತೆಗೆಯಲಾಯಿತು. ಬಳಿಕ ಧ್ವಜಸ್ತಂಭ ಕುಣಿಯಲ್ಲಿ ಇಳಿಸಿ ಸಿಮೆಂಟ್ ಕಾಂಕ್ರೀಟ್ನಿಂದ ಭದ್ರಗೊಳಿಸಲಾಯಿತು. ನೆಲದಿಂದ ಎರಡು ಅಡಿ ಸಿಮೆಂಟ್ನಿಂದ ಕಟ್ಟೆ ಕಟ್ಟಲಾಯಿತು. ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳ ಮುಖಂಡರು ಮುಂದೆ ನಿಂತು ಧ್ವಜಸ್ತಂಭ ಸುಭದ್ರಗೊಳಿಸಿದ್ದು ವಿಶೇಷವಾಗಿತ್ತು.
ಎರಡು ದಿನಗಳ ಹಿಂದೆ ಪಾಲಿಕೆ ಎದುರು ಕನ್ನಡ ಹೋರಾಟಗಾರರು ಧ್ವಜಸ್ತಂಭ ಅಳವಡಿಸಲು ಯತ್ನಿಸಿದ್ದರು. ಆಗ ಪೊಲೀಸರು ಧ್ವಜಸ್ತಂಭ ಅಳವಡಿಕೆ ಯತ್ನ ವಿಫಲಗೊಳಿಸಲು ಮುಂದಾದರು. ಧ್ವಜಸ್ತಂಭ ಅಳವಡಿಸಲು ತಂದಿದ್ದ ಮೊಳೆ ಹಾಗೂ ಸುತ್ತಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.