ಕರ್ನಾಟಕ

karnataka

ETV Bharat / state

ಪಾರ್ಶ್ವವಾಯು ಪತಿ, ಮಾನಸಿಕ ಅಸ್ವಸ್ಥ ಪುತ್ರ... ಬಾಡಿಗೆ ಕಟ್ಟಲಾಗದೇ ಬೀದಿಗೆ ಬಿತ್ತು ಈ ಕುಟುಂಬ!

ಹುಕ್ಕೇರಿ ತಾಲೂಕಿನ ಕರಜಗಿ ಗ್ರಾಮದ ಶಂಕರ್ ಮೀರಜ್ಕರ್ ಕುಟುಂಬ ಇದೀಗ ಬೀದಿ ಬದಿ ವಾಸವಾಗಿದೆ. ಮಳೆ-ಚಳಿಯಲ್ಲಿರುವ ಬಡ ಕುಟುಂಬ ನೋಡಿ ಸ್ಥಳೀಯರು ಮಮ್ಮಲ ಮರಗುತ್ತಿದ್ದಾರೆ. ಈ ಬಡಪಾಯಿಗಳಿಗೆ ಸಹೃದಯಿಗಳ ನೆರವು ಬೇಕಿದೆ.

By

Published : Jun 18, 2020, 7:04 PM IST

Belgaum
ಬೀದಿಗೆ ಬಿದ್ದ ಕುಟುಂಬ

ಬೆಳಗಾವಿ:ಮನೆಗೆ ಆಧಾರಸ್ತಂಭವಾಗಿದ್ದ ಪತಿಗೆ ವಕ್ಕರಿಸಿದ ಪಾರ್ಶ್ವವಾಯು ಕಾಯಿಲೆ.‌ ಮನೆಗೆ ಬೆಳಕಾಗಬೇಕಿದ್ದ 29 ವರ್ಷದ ಪುತ್ರನೂ ಮಾನಸಿಕ ಅಸ್ವಸ್ಥ. ಮನೆಮನೆಗೆ ತೆರಳಿ ಕೆಲಸ ಮಾಡಿ ಪತಿ, ಪುತ್ರನನ್ನು ಸಾಕುತ್ತಿದ್ದ ಮಹಿಳೆ. ಈ ಬಡಪಾಯಿ ಮಹಿಳೆಯ ಕೆಲಸ ಕಿತ್ತುಕೊಂಡ ಮಹಾಮಾರಿ ಕೊರೊನಾ. ಇಂಥ ವೇಳೆ ಮಾನವೀಯತೆ ಮೆರೆಯದೇ ಬಡ ಕುಟುಂಬವನ್ನು ಬೀದಿಗೆ ತಳ್ಳಿದ ಮನೆ ಮಾಲೀಕ. ಧಾರಾಕಾರ ಮಳೆ ಮಧ್ಯೆಯೇ ಬೀದಿಯಲ್ಲಿ ವಾಸಿಸುತ್ತಿರುವ ಕುಟುಂಬ.

ಬೀದಿಗೆ ಬಿದ್ದ ಕುಟುಂಬ

ಈ ಮನಕಲಕುವ ದೃಶ್ಯ ಕಂಡುಬಂದಿದ್ದು ಬೆಳಗಾವಿಯ ತಾನಾಜೀ ಗಲ್ಲಿಯಲ್ಲಿ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಜಗಿ ಗ್ರಾಮದ ಶಂಕರ್ ಮೀರಜ್ಕರ್ ಕುಟುಂಬ ಇದೀಗ ಬೀದಿ ಬದಿ ವಾಸವಾಗಿದ್ದು, ಮಳೆ-ಚಳಿಯಲ್ಲಿರುವ ಬಡ ಕುಟುಂಬ ನೋಡಿ ಸ್ಥಳೀಯರು ಮಮ್ಮಲ ಮರಗುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ದಶಕದ ಹಿಂದೆ ಶಂಕರ್ ಅವರು ಕುಟುಂಬದೊಮದಿಗೆ ಬೆಳಗಾವಿಗೆ ವಲಸೆ ಬಂದು ನಾರ್ವೇಕರ್ ಗಲ್ಲಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶಂಕರ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ರೆ, ಇವರ ಪತ್ನಿ ಕಮಲ ಅವರು ಮನೆಮನೆಗೆ ತೆರಳಿ ಕೆಲಸ ಮಾಡುತ್ತಿದ್ದರು. ಬಂದ ಹಣದಲ್ಲೇ ಮಾನಸಿಕ ಅಸ್ವಸ್ಥನಾಗಿದ್ದ ಪುತ್ರ ನಾರಾಯಣ ಅವರ ಚಿಕಿತ್ಸೆಗೆ ವೆಚ್ಚಮಾಡಿ ಉಳಿದ ಹಣದಲ್ಲಿ ಜೀವನ ಬಂಡಿ ಸಾಗಿಸುತ್ತಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಶಂಕರ್​ಗೆ ಐದು ವರ್ಷದ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಹೀಗಾಗಿ ಕಮಲ ಅವರೇ ಕೂಲಿ ಕೆಲಸ ಮಾಡಿ ಕುಟುಂಬ ಸಾಗಿಸುತ್ತಿದ್ದರು.

ಆದ್ರೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಮಲ ಕೂಡ ಕೆಲಸ ಕಳೆದುಕೊಂಡರು. ಹೀಗಾಗಿ ಮೂರು ತಿಂಗಳಿಂದ ಕೆಲಸ ಕಳೆದುಕೊಂಡ ಮೀರಜ್ಕರ್ ಕುಟುಂಬಸ್ಥರು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಕೆಲಸ ಇಲ್ಲದ್ದಕ್ಕೆ ಮನೆ ಬಾಡಿಗೆ ಕಟ್ಟಲು ಈ ಕುಟುಂಬಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಮನೆ ಮಾಲೀಕ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಕುಟುಂಬವನ್ನೇ ಮನೆಯಿಂದ ಹೊರಹಾಕಿದ್ದಾನೆ. ಮನೆಯಲ್ಲಿದ್ದ ವಸ್ತುಗಳ ಜತೆಗೆ ತಾನಾಜಿ ಗಲ್ಲಿಯ ಸಂಭಾಜೀ ಉದ್ಯಾನವನಕ್ಕೆ ಆಗಮಿಸಿದ್ದ ಈ ಕುಟುಂಬ ಪ್ರೇಕ್ಷಕರ ಗ್ಯಾಲರಿ ಕೆಳಗೆ ವಾಸವಾಗಿದ್ದಾರೆ. ಜಿಲ್ಲಾಡಳಿತ ಈ ಬಡ ಕುಟುಂಬದ ನೆರವಿಗೆ ಧಾವಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ABOUT THE AUTHOR

...view details