ಚಿಕ್ಕೋಡಿ:ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಬನಜವಾಡ ಗ್ರಾಮದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ, ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ 8 ಲಕ್ಷ ಮೌಲ್ಯದ 177 ಬ್ರಾಸ್ ಮರಳು ಜಪ್ತಿ ಮಾಡಿದ್ದಾರೆ. ತಹಸೀಲ್ದಾರ್ ಮೇಘರಾಜ ನಾಯಕ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಏಕಕಾಲಕ್ಕೆ ಅಧಿಕಾರಿಗಳು ಬನಜವಾಡ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿದಾಗ ಇಲ್ಲಿನ ಪ್ರತಿ ನಾಗರಿಕರ ಮನೆಯ ಸಮೀಪ ಅನಧಿಕೃತವಾಗಿ ಮರಳು ಸಂಗ್ರಹಿಸಿದ್ದು ಕಂಡುಬಂದಿದೆ. ಕೂಡಲೇ ಅವುಗಳನ್ನೆಲ್ಲಾ ವಶಕ್ಕೆ ಪಡೆದು ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಾದ ಎ.ಎಸ್.ಮಗದುಮ್ ಅವರೊಂದಿಗೆ ಗ್ರಾಮ ಲೆಕ್ಕಾಧಿಕಾರಿಗಳು ಸಂಗ್ರಹಿಸಿದ ಮರಳು ಅಳತೆ ಮಾಡಿದರು.
ಸಂಗ್ರಹಿಸಿದ ಮರಳು ಯಾರಿಗೂ ಕಾಣದಂತೆ ಅದರ ಮೇಲೆ ಕಬ್ಬಿನ ಜಲ್ಲೆ, ತೆಂಗಿನ ಮರಗಳ ಒಣ ಟೊಂಗೆಗಳನ್ನು ಬಳಸಿ ಮುಚ್ಚಿಹಾಕಿದ್ದರು. ಆದರೆ, ಅಧಿಕೃತವಾಗಿ ಅಧಿಕಾರಿಗಳಿಗೆ ಮಾಹಿತಿ ಇದ್ದಿದ್ದರಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.