ಬೆಂಗಳೂರು: ಕೋಟಿಗಟ್ಟಲೇ ಆಸ್ತಿ ಮಾಡಿ ಸದ್ಯ ಸಿಸಿಬಿ ಕಸ್ಟಡಿಯಲ್ಲಿರುವ ಸ್ವಾಮಿ ಅಲಿಯಾಸ್ ಯುವರಾಜ ತನಿಖೆ ವೇಳೆ ಕೇಳಿದ ಪ್ರಶ್ನೆಗೆಳಿಗೆ ಉತ್ತರಿಸಿರುವ ರೀತಿ ಕಂಡು ಪೊಲೀಸರೇ ಅರೆಕ್ಷಣ ಮೌನವಾಗಿಬಿಟ್ಟಿದ್ದರಂತೆ. ಈತ ತನ್ನನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೂ ಭವಿಷ್ಯ ಹೇಳಲು ಮುಂದಾಗಿದ್ದನಂತೆ.
ಮೊದಲಿಗೆ ನೀನು ಇಷ್ಟೆಲ್ಲಾ ಆಸ್ತಿಯನ್ನು ಹೇಗೆ ಸಂಪಾದಿಸಿದೆ ಎಂದು ಸಿಸಿಬಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ಲಕ್ಷ್ಮಿ ಮನೆಗೇ ಹುಡುಕಿಕೊಂಡು ಬರುವಾಗ ಬೇಡ ಅನ್ನೋಕೆ ಆಗುತ್ತಾ. ನಾನೆಲ್ಲೂ ನನಗೆ ದುಡ್ಡು ಕೊಡಿ ಅಂತ ಕೇಳಿಲ್ಲ. ಅವರಾಗೆ ಮನೆಗೆ ಬರ್ತಿದ್ರು, ಕಾಲಿಗೆ ಬೀಳ್ತಿದ್ರು, ಹಣ ಕೊಡ್ತಿದ್ರು. ನೀವೇ ಹೇಳಿ ನಿಮ್ಮ ಮನೆಗೇ ಲಕ್ಷ್ಮಿ ಹುಡುಕಿಕೊಂಡು ಬಂದ್ರೆ ಬೇಡ ಅಂತಿದ್ರಾ? ಎಂದು ಮರುಪ್ರಶ್ನೆ ಹಾಕಿದ್ದಾನೆ ಎನ್ನಲಾಗ್ತಿದೆ.
ಎಲ್ಲೆಲ್ಲಿ ಆಸ್ತಿ ಮಾಡಿದ್ದೀಯಾ? ಯಾರ್ಯಾರಿಂದ ಹಣ ಪಡೆದಿದ್ದೀಯಾ..? ಎಂದು ಕೇಳಲಾದ ಪ್ರಶ್ನೆಗೂ ಆರಾಮಾಗೆ ಉತ್ತರ ಕೊಟ್ಟ ಸ್ವಾಮಿ, ನಾನು ನನ್ನ ಎಲ್ಲಾ ಮಕ್ಕಳ ಹೆಸರಲ್ಲೂ ಆಸ್ತಿ ಮಾಡಿದ್ದೀನಿ. ಆದ್ರೆ ಅದರ ಟ್ಯಾಕ್ಸ್ ಮಾತ್ರ ನಾನು ಕಟ್ಟುತ್ತಿದ್ದೇನೆ. ಮಂಡ್ಯ, ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು ಹೋದಾಗ ಜಾಗ ಚೆನ್ನಾಗಿದೆ ಅನ್ನಿಸಿದ್ರೆ ಸೈಟ್ ಖರೀದಿ ಮಾಡ್ತಿದ್ದೆ. ನಾನು ದುಡ್ಡು ಇರುವ ರಾಜಕಾರಣಿಗಳಿಂದ ಹಣ ತೆಗೆದುಕೊಳ್ಳುತ್ತಿದ್ದೆ. ಬಡ ರಾಜಕಾರಣಿಗಳಿಂದ ಒಂದು ರೂಪಾಯಿ ಕೂಡ ಮುಟ್ಟುತ್ತಿರಲಿಲ್ಲ. ಪಾಪ ಅವರೂ ಕಷ್ಟಪಟ್ಟು ಮೇಲೆ ಬರಬೇಕು ಅಂದ್ಕೊಂಡಿರ್ತಾರೆ ಎಂದು ಧೈರ್ಯವಾಗೇ ಹೇಳಿದ್ದಾನಂತೆ.
2000 ಬಿಲ್ ಆಗೋ ಜಾಗದಲ್ಲಿ 50 ಸಾವಿರ ಕೊಡುತ್ತಿದ್ದ ಸ್ವಾಮಿ :
ಪ್ರತಿಷ್ಠಿತ ಹೋಟೆಲ್ಗಳಲ್ಲಿ ಊಟ, ಕಾಫಿಗೆ ತೆರಳಿದಾಗ ಎರಡು ಸಾವಿರ ಬಿಲ್ ಆದ್ರೆ 50 ಸಾವಿರ ಹಣ ಕೊಡುತ್ತಿದ್ದ ಸ್ವಾಮಿಯನ್ನು, ಹೀಗೆ ಮಾಡುವುದರ ಉದ್ದೇಶವೇನು ಎಂದು ಕೇಳಿದಾಗ. ಆತ ಉತ್ತರಿಸಿ, ನಾನು ಈಗ ಅಷ್ಟೂ ಖರ್ಚು ಮಾಡಿಲ್ಲ ಅಂದ್ರೆ ನೆಕ್ಸ್ಟ್ ಹೋಟೆಲ್ಗೆ ಬಂದಾಗ ಸೆಲ್ಯೂಟ್ ಹೊಡೆಯಲ್ಲ. ತಾಜ್ ವೆಸ್ಟೆಂಡ್ ನಲ್ಲಿ ದಿನಕ್ಕೆ 50 ಸಾವಿರ ರೂ. ಕೊಟ್ಟು ಬರ್ತೀನಿ. ಒಬ್ಬೊಬ್ಬರಿಗೂ 5 ಸಾವಿರ ಟಿಪ್ಸ್ ಕೊಡುತ್ತೇನೆ. ಹೀಗಾಗಿ ಈಗಲೂ ನಾನು ಹೋದ್ರೆ ಕಾರ್ ಡೋರ್ ತೆಗಿತಾರೆ. ಬಾಡಿಗಾರ್ಡ್ಸ್ ತರ ಸೀಟ್ ವರೆಗೂ ಬಿಡ್ತಾರೆ. ಸೆಲ್ಯೂಟ್ ಹೊಡಿತಾರೆ. ಇದನ್ನ ನೋಡಿದ ಜನ ನನ್ನ ನಂಬ್ತಾರೆ. ಇದರಲ್ಲಿ ನನ್ನ ತಪ್ಪು ಏನಿದೆ ಸರ್? ಜನರ ನಂಬಿಕೆ ಗಳಿಸೋದು ಒಂದು ಕಲೆ. ನಿಮ್ಮ ಅಧಿಕಾರಿಗಳೇ ನನ್ನ ನಂಬಿದ್ದಾರಲ್ಲ ಎಂದು ಉತ್ತರ ಹೇಳಿದ್ದಾನೆ.
ತನಿಖಾಧಿಕಾರಿಗಳಿಗೇ ಭವಿಷ್ಯ ಹೇಳ್ತಿನಿ ಅಂತ ಮುಂದಾಗಿದ್ದ ಭೂಪ :
ಸದ್ಯ ಸಿಸಿಬಿ ವಶದಲ್ಲಿರುವ ಸ್ವಾಮಿ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗೇ ನಿಮ್ಮ ಮುಖ ನೋಡ್ತೇನಿ ನೀವು ಏನು ಅಂತ ಹೇಳ್ತೀನಿ. ಒಂದೆರೆಡು ನಿಮಿಷ ಸುಮ್ಮನಿರಿ ಅಂತ ಮರಳು ಮಾಡಲು ಮುಂದಾಗಿದ್ದನಂತೆ. ನಂತರ ನೀವೆಲ್ಲಾ ದೈವ ಭಕ್ತರು, ನಿಮಗೆ ಯಾರ ಭಯವೂ ಇಲ್ಲ ಅಂತ ಭವಿಷ್ಯ ನುಡಿದಿದ್ದಾನೆ. ಈ ವೇಳೆ ಅಧಿಕಾರಿಗಳು ಯುವರಾಜನಿಗೆ ಕ್ಲಾಸ್ ತೆಗೆದುಕೊಂಡು, ನಾವು ಕೇಳಿದ್ದಕ್ಕಷ್ಟೇ ಉತ್ತರ ಕೊಡು ಎಂದಿದ್ದಾರೆ. ಸದ್ಯ 28 ನೇ ತಾರೀಖಿನವರೆಗೂ ಯುವರಾಜ ಸಿಸಿಬಿ ಕಸ್ಟಡಿಯಲ್ಲಿರಲಿದ್ದು, ಈತನ ಆಟಾಟೋಪಕ್ಕೆ ಬ್ರೇಕ್ ಹಾಕಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಹಿನ್ನೆಲೆ:
ಯುವರಾಜ್ ಅಲಿಯಾಸ್ ಸ್ವಾಮಿ ಎಂಬ ಈತನಿಗೆ ಬಿಜೆಪಿ ಮುಖಂಡರು, ರಾಜಕಾರಣಿಗಳು, ಉದ್ಯಮಿಗಳು, ಹಿರಿಯ ಐಪಿಎಸ್ ಅಧಿಕಾರಿಗಳಿಗೆ ತನಗೆ ಬಿಜೆಪಿಯ ಎಲ್ಲಾ ಮುಖಂಡರು ಗೊತ್ತು. ನಿಮಗೆ ಆಗಬೇಕಾದ ಕೆಲಸ ಮಾಡಿಕೊಡುತ್ತೇನೆ ಎಂದು ನಂಬಿಸಿ ಕೋಟಿಗಟ್ಟಲೇ ಹಣ ಪಡೆದು ದೋಖಾ ಮಾಡ್ತಿದ್ದ ಎಂಬ ಆರೋಪದ ಹಿನ್ನೆಲೆ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದಾನೆ.