ಕರ್ನಾಟಕ

karnataka

By

Published : Feb 8, 2023, 9:42 AM IST

Updated : Feb 8, 2023, 11:36 AM IST

ETV Bharat / state

ಯುವತಿಯ ಹೆಸರಿನಲ್ಲಿ ಹುಡುಗಿ ಜೊತೆ ಚಾಟಿಂಗ್ : ಯುವಕನ ಮೇಲೆ ಚಾಕುವಿನಿಂದ ಹಲ್ಲೆ

ಯುವತಿಯ ಹೆಸರಿನಲ್ಲಿ ಯುವತಿಗೆ ಮೆಸ್ಸೇಜ್ ಮಾಡುತ್ತಿದ್ದ ಯುವಕ - ಸಿಟ್ಟಿಗೆದ್ದ ಯುವತಿಯ ಸಹೋದರನಿಂದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ - ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Etv Bharat
Etv Bharat

ಯುವಕನ ಮೇಲೆ ಚಾಕುವಿನಿಂದ ಹಲ್ಲೆ - ಸಿಸಿಟಿವಿ ವಿಡಿಯೋ

ಬೆಂಗಳೂರು‌:ಯುವತಿಗೆ ಮೆಸ್ಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ಯುವತಿಗೆ ಮೆಸ್ಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಸಹೋದರ ಹಾಗೂ ಸ್ನೇಹಿತರು ಯುವಕನ ಮೇಲೆ ರಸ್ತೆಯಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ. ಸಿದ್ದಾರ್ಥ್ ಎಂಬಾತ ಹಲ್ಲೆಗೊಳಗಾದ ಯುವಕ.

ಸಾಮಾಜಿಕ ಜಾಲತಾಣದಲ್ಲಿ ಮೆಸ್ಸೇಜ್​ ಮಾಡಿದ್ದ ಯುವಕ.. ಇನ್​ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಸಿದ್ದಾರ್ಥ್ ಒಂದು ವರ್ಷದಿಂದ ಯುವತಿಯೊಬ್ಬಳಿಗೆ ಮೆಸ್ಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಮೆಸ್ಸೇಜ್ ಮಾಡುತ್ತಿರುವುದು ಯುವತಿಯಲ್ಲ, ಯುವಕ ಎಂಬ ಅಸಲಿ ವಿಷಯ ತಿಳಿದ ಆ ಯುವತಿ ತನ್ನ ಸಹೋದರ ಚೇತನ್ ಬಳಿ ಈ ವಿಷಯ ತಿಳಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಚೇತನ್, ಸಿದ್ದಾರ್ಥ್​ಗೆ ಕರೆ ಮಾಡಿ ನಿಂದಿಸಿ ಭೇಟಿಯಾಗುವಂತೆ ತಿಳಿಸಿದ್ದಾನೆ. ಅದರಂತೆ ಫೆ. 5ರಂದು ಸಿದ್ದಾರ್ಥ್ ವಾಸವಿದ್ದ ಪಿಜಿ ಬಳಿ ತನ್ನ ಗೆಳೆಯರೊಂದಿಗೆ ಬಂದಿದ್ದ ಚೇತನ್, ಯುವಕನ ಬಳಿ ಜಗಳ ಆರಂಭಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು : ಬಳಿಕ ಯುವಕನ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಚಾಕುವಿನಿಂದ ಸಿದ್ದಾರ್ಥ್ ಮೇಲೆ ಹಲ್ಲೆ ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ಸಿದ್ದಾರ್ಥ್ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಗೋವಿಂದರಾಜನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಕಲಚೇತನ ಯುವಕನ ಮೇಲೆ ಮಂಗಳಮುಖಿಯರಿಂದ ಹಲ್ಲೆ :ಬೆಂಗಳೂರಿನಲ್ಲಿ ವಿಕಲಚೇತನ ಯುವಕನ ಮೇಲೆ ಮಂಗಳಮುಖಿಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇಬ್ಬರು ಮಂಗಳಮುಖಿಯರ ವಿರುದ್ಧ ಇಂದಿರಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಡಗಟ್ಟಿ ಹಲ್ಲೆ ಮಾಡಿದ ಮಂಗಳಮುಖಿಯರು.. ಮಂಗಳವಾರ ಮಧ್ಯಾಹ್ನ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ತನ್ನ ತಾಯಿಯೊಂದಿಗೆ ಬರುತ್ತಿದ್ದ ವೆಂಕಟಪ್ಪ ಎಂಬ ವಿಕಲಚೇತನನನ್ನು ಅಡ್ಡಗಟ್ಟಿದ್ದ ಇಬ್ಬರು ಮಂಗಳಮುಖಿಯರು ಆತನ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಮೊದಲೇ ಬೆದರಿಕೆ ಹಾಕಿದ್ದ ಮಂಗಳಮುಖಿಯರು.. ಚನ್ನಪಟ್ಟಣ ಮೂಲದ ವೆಂಕಟಪ್ಪ, ತನ್ನಂತೆ ವಿಕಲಚೇತನರಿಗೆ ತನ್ನ ಊರಿನಲ್ಲಿ ಆಶ್ರಮ ನಿರ್ಮಿಸುವ ಯೋಜನೆಯಡಿ ದೇಣಿಗೆ ಸಂಗ್ರಹಿಸುತ್ತಿದ್ದ. ಇದರಿಂದಾಗಿ ತಮಗೆ ಯಾರೂ ಹಣ ನೀಡುತ್ತಿಲ್ಲವೆಂದು ಭಾವಿಸಿದ್ದ ಇಬ್ಬರು ಮಂಗಳಮುಖಿಯರು ಈ ಹಿಂದೆ ಒಮ್ಮೆ ವೆಂಕಟಪ್ಪನಿಗೆ ಬೆದರಿಕೆ ಹಾಕಿದ್ದರಂತೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ದೇಣಿಗೆ ಸಂಗ್ರಹದಲ್ಲಿ ನಿರತನಾಗಿದ್ದ ತನ್ನ ಮೇಲೆ ಮಂಗಳವಾರ ಮಧ್ಯಾಹ್ನ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು‌ ಇಂದಿರಾನಗರ ಪೊಲೀಸ್​ ಠಾಣೆಗೆ ವೆಂಕಟಪ್ಪ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಾಲೀಕನ ಕತ್ತು ಕಚ್ಚಿ ಕೊಂದ ಒಂಟೆಯನ್ನು ಹೊಡೆದು ಹತ್ಯೆ.. ರಾಜಸ್ಥಾನದಲ್ಲಿ ಘಟನೆ

Last Updated : Feb 8, 2023, 11:36 AM IST

ABOUT THE AUTHOR

...view details