ಕರ್ನಾಟಕ

karnataka

By

Published : Nov 6, 2019, 6:58 PM IST

ETV Bharat / state

ಬಿಬಿಎಂಪಿ ಕಚೇರಿಯಲ್ಲಿ ಆರ್‌​ಎಸ್‌ಎಸ್ ನಾಯಕರ ಭಾವಚಿತ್ರಕ್ಕೆ ಪೂಜೆ, ವಿವಾದ

ಬಿಬಿಎಂಪಿ ಕಚೇರಿಯಲ್ಲಿ ಆರ್​​ಎಸ್​ಎಸ್ ಸಂಘಟನೆಯ ಮುಖಂಡರ ಫೋಟೋಗಳನ್ನಿಟ್ಟು ಪೂಜಿಸಲಾಗಿದೆ. ಬಿಬಿಎಂಪಿಯ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಪೂಜೆ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಆರ್​ಎಸ್​ಎಸ್ ನಾಯಕರ ಭಾವಚಿತ್ರಕ್ಕೆ ಪೂಜೆ

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಂಘ ಸಂಸ್ಥೆಗಳ ಅಥವಾ ಖಾಸಗಿ ವ್ಯಕ್ತಿಗಳ ಫೋಟೋ ಲಗತ್ತಿಸಬಾರದು ಎಂಬ ಕಡ್ಡಾಯ ನಿಯಮವಿದೆ. ಆದ್ರೂ ಕಾನೂನುಬಾಹಿರವಾಗಿ ಆರ್​​ಎಸ್​ಎಸ್ ಸಂಘಟನೆ ಮುಖಂಡರ ಫೋಟೋಗಳನ್ನು ಬಿಬಿಎಂಪಿ ಕಚೇರಿಯಲ್ಲಿ ಇಟ್ಟು ಪೂಜಿಸುತ್ತಿರುವ ವಿಚಾರ ಗೊತ್ತಾಗಿದೆ.

ಇತ್ತೀಚೆಗಷ್ಟೇ ಬಿಬಿಎಂಪಿಯ ಆಡಳಿತ ಪಕ್ಷದ ನಾಯಕನಾಗಿ ಆರ್​​ಎಸ್​ಎಸ್ ಹಿನ್ನೆಲೆಯುಳ್ಳ ಜಕ್ಕೂರು ವಾರ್ಡ್​ನ ಮುನೀಂದ್ರ ಕುಮಾರ್​ ಅವರನ್ನು ಸಂಘದ ಸೂಚನೆ ಮೇರೆಗೆ ಆಯ್ಕೆ ಮಾಡಲಾಗಿತ್ತು. ಇಂದು ಕಚೇರಿ ಪೂಜೆ ವೇಳೆ, ದೇವರ ಫೋಟೋದೊಂದಿಗೆ ಆರ್​​ಎಸ್​ಎಸ್ ಸಂಸ್ಥಾಪಕರಾದ ಕೆ.ಬಿ. ಹೆಡಗೆವಾರ್, ಎಮ್. ಎಸ್. ಗೋಲ್ವಾಲ್ಕರ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಗಿದೆ. ಜೊತೆಗೆ ಆರ್​ಎಸ್​​ಎಸ್ ಸಂಘ ಪೂಜಿಸುವ ಭಾರತ ಮಾತೆಯ ಫೋಟೋ ಕೂಡಾ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಆರ್​ಎಸ್​ಎಸ್ ನಾಯಕರ ಭಾವಚಿತ್ರಕ್ಕೆ ಪೂಜೆ, ವಿವಾದ

ಸರ್ಕಾರಿ ಕಚೇರಿಯ‌ನ್ನು ಆರ್​ಎಸ್​ಎಸ್ ಕಚೇರಿಯನ್ನಾಗಿ ಪರಿವರ್ತಿಸಿದ ಕುಮಾರ್ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇನ್ನು ಬಿಬಿಎಂಪಿಯ ಕೆಎಂಸಿ ಕಾಯ್ದೆ ಪ್ರಕಾರವೂ ಇದು ಕಾನೂನು ಬಾಹಿರವಾಗಿದೆ. ಗಾಂಧೀಜಿ, ಬಸವಣ್ಣ, ಸಿಎಂ, ಪಿಎಂ ಭಾವಚಿತ್ರಗಳನ್ನು ಬಿಟ್ಟರೆ, ಬೇರೆ ಯಾರ ಭಾವಚಿತ್ರವನ್ನೂ ಸರ್ಕಾರಿ ಕಚೇರಿಯಲ್ಲಿ ಲಗತ್ತಿಸುವ ಹಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುನೀಂದ್ರ ಕುಮಾರ್, ಗುರುಗಳಿಗೆ ವಂದನಾ ಅರ್ಪಣೆ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಗೆ ಶಕ್ತಿ ನೀಡಿದಂತಹ ಹಾಗೂ ದಾರಿ ತೋರಿಸಿದವರ ಫೋಟೋ ಇಟ್ಟು ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ. ಆರ್​ಎಸ್​ಎಸ್ ಯಾವಾಗಲೂ ರಾಜಕೀಯದಲ್ಲಿ ಬೆರೆತಿಲ್ಲ. ಸಾಮಾಜಿಕ ಚಟುವಟಿಕೆಯನ್ನೇ ನಡೆಸಿಕೊಂಡು ಬಂದಿದೆ ಎಂದು ಸಮರ್ಥಿಸಿಕೊಂಡರು.

ABOUT THE AUTHOR

...view details