ಕರ್ನಾಟಕ

karnataka

By

Published : Mar 28, 2023, 10:04 AM IST

ETV Bharat / state

ಗಾಂಜಾ: ತಿಂಗಳ ಹಿಂದೆ ಪತಿಗೆ ಜೈಲು; ದಂಧೆ ಮುಂದುವರೆಸಿದ ಪತ್ನಿಯೂ ಸೆರೆ

ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

a-women-arrested-in-ganja-case-by-kalasipalya-police
ಗಾಂಜಾ ಮಾರಾಟದಲ್ಲಿ ಒಂದು ತಿಂಗಳ ಹಿಂದೆ ಪತಿ ಜೈಲು ಪಾಲು : ದಂಧೆ ಮುಂದುವರೆಸಿದ್ದ ಪತ್ನಿಯ ಬಂಧನ

ಬೆಂಗಳೂರು: ಮಾದಕ ವಸ್ತು ಮಾರಾಟ ದಂಧೆಯಲ್ಲಿ ಪತಿ ಜೈಲು ಪಾಲಾದ ಬಳಿಕ ದಂಧೆಯನ್ನು ಮುಂದುವರೆಸುತ್ತಿದ್ದ ಚಾಲಾಕಿ ಮಹಿಳೆಯನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಆರೋಪಿ ಮಹಿಳೆಯನ್ನು ನಗ್ಮಾ (27) ಎಂದು ಗುರುತಿಸಲಾಗಿದೆ. ಈಕೆಯಿಂದ 13 ಲಕ್ಷ ರೂ ಮೌಲ್ಯದ 26 ಕೆ.ಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶಾಖಪಟ್ಟಣಂನಿಂದ ಗಾಂಜಾ ತಂದು ಬೆಂಗಳೂರಿನಲ್ಲಿ‌ ಮಾರಾಟ ಮಾಡುತ್ತಿದ್ದ ನಗ್ಮಾಳ ಪತಿ ಮುಜ್ಜುನನ್ನು ಕಳೆದ ಒಂದು ತಿಂಗಳ ಹಿಂದೆ ಜೆ.ಜೆ.ನಗರ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಗಂಡನ ಬಂಧನದ ಬಳಿಕ ತಾನೂ ಸಹ ಅದೇ ದಾರಿ ಆಯ್ದುಕೊಂಡಿದ್ದ ನಗ್ಮಾ, ತಾಯಿ ಹಾಗೂ ಮೂವರು ಮಕ್ಕಳೊಂದಿಗೆ ವಿಶಾಖಪಟ್ಟಣಂಗೆ ಹೋಗುತ್ತಿದ್ದಳು. ಒಂದು ದಿನ ಅಲ್ಲಿಯೇ ರೂಂ ಪಡೆದು ವಾಸವಿದ್ದು, ಗಾಂಜಾ ಖರೀದಿಸಿ ಮರುದಿನ ಬಸ್ ಮೂಲಕ ಬೆಂಗಳೂರಿಗೆ ಬರುತ್ತಿದ್ದಳು. ಮಕ್ಕಳು, ಬ್ಯಾಗ್ ಇರುವುದನ್ನು ಕಂಡ ಪೊಲೀಸರು ಯಾವುದೋ ಕುಟುಂಬಸ್ಥರು ಹೋಗುತ್ತಿದ್ದಾರೆ ಎಂದು ಪರಿಶೀಲನೆ ಮಾಡುತ್ತಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ನಗ್ಮಾ ಸಲೀಸಾಗಿ ಬೆಂಗಳೂರಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದಳು.

ಇದೇ ರೀತಿ ಮಾರ್ಚ್ 20ರಂದು ವಿಶಾಖಪಟ್ಟಣದಿಂದ ಗಾಂಜಾ ತಂದಿದ್ದ ನಗ್ಮಾ ಕಲಾಸಿಪಾಳ್ಯದ ಕಾರ್ನೇಷಲ್ ಸರ್ಕಲ್ ಬಳಿ ನಿಂತಿದ್ದಾಗ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ನಗ್ಮಾ ಬಳಿ 26 ಕೆಜಿ ಗಾಂಜಾ ದೊರಿತಿದೆ. ಕೂಡಲೇ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಂಗಳೂರಿನಲ್ಲಿ ಗಾಂಜಾ ಪೆಡ್ಲರ್​​ಗಳ ಬಂಧನ:ಮಾದಕ ದ್ರವ್ಯ ಸೇವನೆ ಮತ್ತು ಮಾರಾಟ ಮಾಡಿದ ಎರಡು ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸರು ಮೂವರು ಪೆಡ್ಲರ್​ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಡಿಶಾ ಮೂಲದ ಚಿಂತಾಮಣಿ, ದೂಬ ಮತ್ತು ನಗರದ ಬೈಕಂಪಾಡಿ ಮಿನಾಕಳಿಯ ನಿವಾಸಿ ವಿಕ್ರಂ ಯಾನೆ ಜಯರಾಂ ಎಂಬವರನ್ನು ಬಂಧಿಸಲಾಗಿದೆ. ಗಾಂಜಾ ಸೇವನೆ ಮಾಡಿದ ಪ್ರಕರಣ ಸಂಬಂಧ ಕೊಡಿಯಾಲ್ ಬೈಲ್ ಸತೀಶ್, ಕುಳಾಯಿ ಹೊನ್ನಕಟ್ಟೆಯ ಸರ್ಫರಾಜ್, ಬೈಕಂಪಾಡಿಯ ಅಕ್ಷಯ್ ಎಂಬವರನ್ನು ಬಂಧಿಸಲಾಗಿದೆ.

ಕಳೆದ ಮಾರ್ಚ್ 26ರಂದು ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಗ್ರಾಮದಲ್ಲಿ ಕೆಲ ಯುವಕರು ಸೇರಿಕೊಂಡು ಗಾಂಜಾ ಮಾರಾಟ ಮತ್ತು ಸೇವನೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಸಂಬಂಧ ಉತ್ತರ ಪೊಲೀಸ್ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ಆದೇಶ ಮತ್ತು ನಿರ್ದೇಶನದ ಮೇರೆಗೆ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರದೀಪ್ ಟಿ.ಆರ್. ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜೀತ್ ಮ್ಯಾಥ್ಯೂ, ದಿಲೀಪ್, ಕಾರ್ತಿಕ್ ರವರ ತಂಡ ದಾಳಿ‌ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.

ಇದನ್ನೂ ಓದಿ :ಮಂಗಳೂರಿನಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣ: ಮೂವರು ಸ್ಮಗ್ಲರ್ ಸೇರಿ ಆರು ಮಂದಿ ಬಂಧನ

ABOUT THE AUTHOR

...view details