ಕರ್ನಾಟಕ

karnataka

By

Published : Nov 30, 2020, 4:30 PM IST

ETV Bharat / state

ಚಳಿಗಾಲದ ಅಧಿವೇಶನದಲ್ಲಿ ಲವ್ ಜಿಹಾದ್ ತಡೆ ವಿಧೇಯಕ ಮಂಡನೆ ಅನುಮಾನ

ಡಿ. 7ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಲವ್ ಜಿಹಾದ್ ವಿಧೇಯಕ ಮಂಡನೆ ಆಗುವುದು ಅನುಮಾನವಾಗಿದೆ. ಧಾರ್ಮಿಕ ಮತಾಂತರ ತಡೆಯುವ ಕಾನೂನು ಜಾರಿಗೆ ತರಬೇಕೆಂದಿದ್ದರೆ ಈಗಾಗಲೇ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು. ಈ ಬಗ್ಗೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗದ ಹಿನ್ನೆಲೆ ಮಂಡನೆಯಾಗುವುದು ಅನುಮಾನ ಎನ್ನಲಾಗುತ್ತಿದೆ.

ಚಳಿಗಾಲದ ಅಧಿವೇಶನ
ಚಳಿಗಾಲದ ಅಧಿವೇಶನ

ಬೆಂಗಳೂರು:ಉತ್ತರಪ್ರದೇಶ ಸರ್ಕಾರ ಲವ್ ಜಿಹಾದ್ ತಡೆ ಕಾನೂನು ಜಾರಿಗೆ ತಂದ ಬೆನ್ನಲ್ಲೇ ದೇಶಾದ್ಯಂತ ಧಾರ್ಮಿಕ ಮತಾಂತರ ತಡೆಯುವ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತ ಕರ್ನಾಟಕದಲ್ಲೂ ಲವ್ ಜಿಹಾದ್ ತಡೆ ಕಾನೂನು ಜಾರಿಗೆ ತರುವ ಬಗ್ಗೆ ಮಾತು ಕೇಳಿ ಬಂದಿತ್ತು.‌ ಗೃಹ ಸಚಿವರು ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸುವ ಬಗ್ಗೆ ಪ್ರಸ್ತಾಪಿಸಿದ್ದರು.‌ ಆದರೆ ಮುಂದಿನ ತಿಂಗಳು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸುವ ಯಾವುದೇ ಪ್ರಸ್ತಾಪ ಇಲ್ಲ ಎನ್ನಲಾಗ್ತಿದೆ.

ಡಿ. 7ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡುವ ಯಾವುದೇ ಪ್ರಸ್ತಾವನೆಯನ್ನು ಗೃಹ ಇಲಾಖೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಸಲ್ಲಿಸಿಲ್ಲ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಈ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

ಒಂದು ವೇಳೆ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಧಾರ್ಮಿಕ ಮತಾಂತರ ತಡೆಯುವ ಕಾನೂನು ಜಾರಿಗೆ ತರಬೇಕೆಂದಿದ್ದರೆ, ಈಗಾಗಲೇ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು. ಅದಕ್ಕೆ ಬೇಕಾಗಿರುವ ಪೂರಕ ಸಿದ್ಧತೆಗಳು, ರಾಜ್ಯದಲ್ಲಿ ದಾಖಲಾದ ಲವ್ ಜಿಹಾದ್ ಪ್ರಕರಣಗಳು, ಕೋರ್ಟ್ ಮೆಟ್ಟಿಲೇರಿದ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಕಾನೂನು ರೂಪಿಸಲು ಪ್ರಸ್ತಾಪವನ್ನು ಕಾನೂನು ಇಲಾಖೆಗೆ ಕಳುಹಿಸಬೇಕಿತ್ತು.‌ ಜೊತೆಗೆ ಕಾನೂನು ಇಲಾಖೆ ಅದನ್ನು ರಾಜ್ಯ ಕಾನೂನು ಆಯೋಗ ಅಥವಾ ರಾಷ್ಟ್ರೀಯ ಕಾನೂನು ಶಾಲೆಗೆ ರವಾನಿಸಿ ಸೂಕ್ತ ಕಾನೂನು ರೂಪಿಸಲು ಸೂಚಿಸಬೇಕಾಗಿದೆ. ಆದರೆ ಈವರೆಗೆ ಅಂತಹ ಪ್ರಸ್ತಾವನೆಗಳಾಗಲಿ, ಟಿಪ್ಪಣಿಗಳಾಗಲಿ ಯಾವ ಇಲಾಖೆಯಿಂದಲೂ ಕಾನೂನು ಇಲಾಖೆಗೆ ಸಲ್ಲಿಕೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಎಚ್ಚರ.. ಎಚ್ಚರ..! 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಾಧ್ಯತೆ

ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ತಡೆ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಇದೇ ಮಾದರಿಯಲ್ಲಿ ಹರಿಯಾಣ ಸರ್ಕಾರ, ಮಧ್ಯಪ್ರದೇಶ ಸರ್ಕಾರಗಳು ಕಾನೂನು ಜಾರಿಗೊಳಿಸುವ ತೀರ್ಮಾನ ಪ್ರಕಟಸಿವೆ. ಅದೇ ರೀತಿ ರಾಜ್ಯ ಸರ್ಕಾರವೂ ಇಂತಹದೊಂದು ಕಾನೂನು ಜಾರಿಗೆ ತರುವುದಾಗಿ ತಿಳಿಸಿತ್ತು. ಅದಕ್ಕೆ ಪೂರಕವಾಗಿ ನ. 5ರಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಲವ್ ಜಿಹಾದ್ ಸಂಬಂಧ ರಾಜ್ಯದಲ್ಲಿಯೂ ಧಾರ್ಮಿಕ ಮತಾಂತರ ತಡೆಗೆ ಕಾನೂನು ತರುವುದಾಗಿ ಪ್ರಕಟಿಸಿದ್ದರು. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯದಲ್ಲಿಯೂ ಲವ್ ಜಿಹಾದ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಧಾರ್ಮಿಕ ಮತಾಂತರ ತಡೆಯಲು ಕಾನೂನು ತರುವುದಾಗಿ ಹೇಳಿದ್ದರು.

ಇತ್ತ ಇತರೆ ಬಿಜೆಪಿ ನಾಯಕರೂ ನಮ್ಮ ರಾಜ್ಯದಲ್ಲೂ ಲವ್ ಜಿಹಾದ್ ತಡೆ ಕಾನೂನು ತರುವುದಾಗಿ ಹೇಳಿಕೆಗಳನ್ನು ನೀಡಿದ್ದರು. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ಮಂಡಿಸುವುದಾಗಿ ಹೇಳಿದ್ದರು. ಆದರೆ ಈ ಅಧಿವೇಶನದಲ್ಲಿ ಲವ್ ಜಿಹಾದ್ ತಡೆ ವಿಧೇಯಕ ಮಂಡನೆಯಾಗುವುದು ಅನುಮಾನವಾಗಿದೆ. ಈವರೆಗೆ ಕಾನೂನು ಇಲಾಖೆಗೆ ಅಂತಹ ಯಾವುದೇ ಪ್ರಸ್ತಾಪ ಸಲ್ಲಿಕೆಯಾಗಿಲ್ಲ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details