ಕರ್ನಾಟಕ

karnataka

ಭಾರತದ ವಿಮಾನಯಾನ ಉದ್ಯಮ ದೇಶದ ಹೆಮ್ಮೆ: ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ

By ETV Bharat Karnataka Team

Published : Oct 12, 2023, 6:42 PM IST

ಭಾರತದ ನಾಗರಿಕ ವಿಮಾನಯಾನ ಉದ್ಯಮ ದೇಶದ ಆರ್ಥಿಕ ಸಾಮರ್ಥ್ಯವನ್ನು ತೋರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಹೇಳಿದರು.

ವಿಂಗ್ಸ್ ಇಂಡಿಯಾ 2024
ವಿಂಗ್ಸ್ ಇಂಡಿಯಾ 2024

ಬೆಂಗಳೂರು:ಭಾರತದ ನಾಗರಿಕ ವಿಮಾನಯಾನ ಉದ್ಯಮ ರಾಷ್ಟ್ರದ ಹೆಮ್ಮೆಯಾಗಿದೆ. ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಜನರ ಸಂಪರ್ಕ ಕೊಂಡಿಯಾಗಿದೆ. ದೇಶದ ಆರ್ಥಿಕ ಸಾಮರ್ಥ್ಯವನ್ನು ತೋರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕ ವ್ಯಾಪಾರ ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ವುಮ್ಲುನ್ಮಾಂಗ್ ವುಲ್ನಾಮ್ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ಮುಂಬರುವ ಜನವರಿ ತಿಂಗಳಲ್ಲಿ ವಿಂಗ್ಸ್ ಇಂಡಿಯಾ 2024 ನಡೆಯಲಿದೆ. ಅದರ ಪ್ರಚಾರಕ್ಕಾಗಿ ನಗರದಲ್ಲಿ ಆಯೋಜಿಸಲಾಗಿದ್ದ ರೋಡ್‌ಶೋ ಉದ್ಘಾಟಿಸಿ ಮಾತನಾಡಿದ ಅವರು, ವಿಮಾನಯಾನ ಕ್ಷೇತ್ರ ಬೆಳೆಯುತ್ತಿರುವ ಆರ್ಥಿಕತೆ, ಹೆಚ್ಚುತ್ತಿರುವ ಆದಾಯ, ಹೊಸ ನೀತಿಗಳು ಮತ್ತು ವಿಮಾನಯಾನ ಸಂಸ್ಥೆಗಳ ನಡುವಿನ ತೀವ್ರ ಪೈಪೋಟಿಯೊಂದಿಗೆ ಬೆಳವಣಿಗೆಯಾಗುತ್ತಿದೆ. ಹೊಸ ಭರವಸೆಯಾಗಿ ಹೊರಹೊಮ್ಮಿದೆ. ಭಾರತದ ವಿಮಾನ ನಿಲ್ದಾಣಗಳು, ವಾಯು ಸಂಚಾರದ ತ್ವರಿತ ವಿಸ್ತರಣೆಯು ಈ ಕ್ಷೇತ್ರದ ಆರೋಹಣವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಸಮೀಪಿಸುತ್ತಿರುವ ಸಂದರ್ಭದಲ್ಲಿ ಹೊಸ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇದು ಮಾದರಿ ಬದಲಾವಣೆಯಾಗಿ ಗುರುತಿಸಲ್ಪಡುತ್ತಿದೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಎಲ್ಲರ ಗಮನ ಸೆಳೆದಿದೆ. ಈ ಬೆಳವಣಿಗೆಯು ರಾಷ್ಟ್ರದ ಎಲ್ಲಾ ಮೂಲೆಗಳಿಗೂ ವಿಸ್ತರಿಸುತ್ತಿದೆ. ಮುಂದುವರೆದ ರಾಷ್ಟ್ರಗಳ ಸಮಾನವಾದ ಬೆಳವಣಿಗೆಯನ್ನು ತೋರ್ಪಡಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತ ಆಕರ್ಷಕ ಹೂಡಿಕೆ ತಾಣ:ಏರ್ ಇಂಡಿಯಾದಿಂದ 470 ವಿಮಾನಗಳು ಮತ್ತು ಇಂಡಿಗೋ ಏರ್‌ಲೈನ್ಸ್‌ನ 500 ವಿಮಾನಗಳ ಇತ್ತೀಚಿನ ಐತಿಹಾಸಿಕ ಖರೀದಿ ಜಾಗತಿಕ ನಾಗರಿಕ ವಿಮಾನಯಾನ ಭೂಪಟದಲ್ಲಿ ಭಾರತ ಆಕರ್ಷಕ ಹೂಡಿಕೆ ತಾಣವಾಗಿದೆ ಎಂದು ಹೇಳಿದರು. ಸಿವಿಲ್ ಏವಿಯೇಷನ್ ​​ಕ್ಷೇತ್ರದ ವಿಂಗ್ಸ್ ಇಂಡಿಯಾ-2024 ಏಷ್ಯಾದಲ್ಲೇ ಪ್ರಮುಖ ಏರ್ ಷೋ ಆಗಿದೆ. ಇಲ್ಲಿ ಹೂಡಿಕೆಗಳು ನೀತಿ ನಿರೂಪಣೆಯ ಮಾತ್ರವಲ್ಲದೆ ಪ್ರಾದೇಶಿಕ ಮತ್ತು ಜಾಗತಿಕ ಸಂಪರ್ಕವನ್ನು ಬೆಳೆಸಲಿದೆ. ಗಡಿಗಳನ್ನು ಮೀರಿದ ಪಾಲುದಾರಿಕೆಗೆ ಸಾಕ್ಷಿಯಾಗಲಿದೆ ಎಂದು ವುಮ್ಲುನ್‌ಮ್ಯಾಂಗ್ ವುಲ್ನಾಮ್ ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಅಸಂಗ್ಬಾ ಚುಬಾ ಆವೊ, ರೆಮಿ ಮೈಲಾರ್ಡ್, ಎಫ್.ಐ.ಸಿ.ಸಿ.ಐ ನಾಗರಿಕ ವಿಮಾನಯಾನ ಸಮಿತಿಯ ಅಧ್ಯಕ್ಷ ಮತ್ತು ಏರ್‌ಬಸ್- ದಕ್ಷಿಣ ಏಷ್ಯಾ ಅಧ್ಯಕ್ಷ ಮತ್ತು ಎಂಡಿಸಿಎಂ ಆನಂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಲೋಡ್‌ ಶೆಡ್ಡಿಂಗ್‌ ಟೀಕಿಸುವ ಬಿಜೆಪಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು?: ಡಿ.ಕೆ.ಶಿವಕುಮಾರ್

ABOUT THE AUTHOR

...view details