ಕರ್ನಾಟಕ

karnataka

ETV Bharat / state

ಪತ್ನಿ ಕೊಂದು ಆಸ್ಪತ್ರೆಯಲ್ಲಿ ಹೈಡ್ರಾಮಾ ಮಾಡಿದ್ದ ಪತಿ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಹತ್ಯೆಗೈದು ಬಳಿಕ ಆಸ್ಪತ್ರೆಯಲ್ಲಿ ಹೈಡ್ರಾಮಾ ಮಾಡಿದ್ದ ಪತಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

By

Published : Jun 3, 2023, 3:38 PM IST

Updated : Jun 3, 2023, 4:00 PM IST

wife-killed-by-husband-in-bengaluru
ಪತ್ನಿಯನ್ನು ಕೊಂದು ಆಸ್ಪತ್ರೆಯಲ್ಲಿ ಹೈಡ್ರಾಮಾ ಮಾಡಿದ ಪತಿ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ

ಪತ್ನಿ ಕೊಂದು ಆಸ್ಪತ್ರೆಯಲ್ಲಿ ಹೈಡ್ರಾಮಾ ಮಾಡಿದ್ದ ಪತಿ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ

ಬೆಂಗಳೂರು : ಪತ್ನಿಯನ್ನು ಹತ್ಯೆಗೈದು, ಬಳಿಕ ಆಸ್ಪತ್ರೆಗೆ ಕರೆ ತಂದು ಆಕೆ ಮಾತನಾಡುತ್ತಿಲ್ಲ ಎಂದು ಕಥೆ ಕಟ್ಟಿದ್ದ ಪತಿಯನ್ನು ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶರತ್​ ಎಂದು ಗುರುತಿಸಲಾಗಿದೆ. ಪ್ರಿಯಾ (19) ಕೊಲೆಯಾದ ಮಹಿಳೆ.

ಕಳೆದ ಜೂನ್ 1ರಂದು ಯಶವಂತಪುರದ ಖಾಸಗಿ ಆಸ್ಪತ್ರೆಗೆ ಪತ್ನಿಯ ಶವದೊಂದಿಗೆ ಬಂದಿದ್ದ ಆರೋಪಿ ಶರತ್​ ತನ್ನ ಪತ್ನಿ ಮಾತನಾಡುತ್ತಿಲ್ಲ ಎಂದು ಆಸ್ಪತ್ರೆಯಲ್ಲಿ ಗೋಳಾಡಿದ್ದ. ಈ ಬಗ್ಗೆ ವೈದ್ಯರು ಪರಿಶೀಲನೆ ನಡೆಸಿದಾಗ ಆಕೆ ಸಾವನ್ನಪ್ಪಿರುವುದು ಗೊತ್ತಾಗಿತ್ತು. ಪತ್ನಿ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ ಬಳಿಕವೂ ಆರೋಪಿ ಜೋರಾಗಿ ಅತ್ತು ಗೋಳಾಡಿದ್ದ. ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ಅನುಮಾನಾಸ್ಪದ ಸಾವು ಎಂದು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಬಳಿಕ ಮೃತ ಪ್ರಿಯಾಳ ತಾಯಿ ನೀಡಿದ ದೂರಿನನ್ವಯ ಯಶವಂತಪುರ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ಮುಂದಾಗಿದ್ದರು.

ಪೊಲೀಸರ ತನಿಖೆಯಲ್ಲಿ ಗಂಡನ ಅಸಲಿಯತ್ತು ಬಯಲು: ಆರೋಪಿ ಶರತ್ ಗೆ ಪ್ರಿಯಾ ಎರಡನೇ ಹೆಂಡತಿ. ಮದುವೆಯಾಗಿ ಮೊದಲ ಹೆಂಡತಿ ಇದ್ದರೂ ಶರತ್ ಎರಡನೇ ಮದುವೆಯಾಗಿದ್ದ. ಅಲ್ಲದೆ ಆರೋಪಿ ಶರತ್​ ಪತ್ನಿ ಪ್ರಿಯಾಳೊಂದಿಗೆ ಯಶವಂತಪುರದ ಸಂಜಯ್ ಗಾಂಧಿ ನಗರದಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.

ಇನ್ನು, 'ಮೊದಲ ಪತ್ನಿಯ ಬಳಿ ಹೋಗ್ತಿಯಾ' ಎಂದು ಪ್ರಿಯಾ ಪದೇ ಪದೇ ಜಗಳವಾಡುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಕೆಲ ದಿನಗಳಿಂದ ಜಗಳವಾಗುತ್ತಿತ್ತು ಎನ್ನಲಾಗಿದೆ. ಜೂನ್ 1ರಂದು ಸಂಜೆ ಮತ್ತೆ ಇದೇ ವಿಚಾರವಾಗಿ ಜಗಳ ಆರಂಭವಾಗಿ ಶರತ್ ಪ್ರಿಯಾಳ ಕತ್ತು ಹಿಸುಕಿದ್ದ. ಈ ವೇಳೆ ಪ್ರಿಯಾಗೆ ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿದ್ದಳು. ಇದರಿಂದ ಗಾಬರಿಗೊಂಡ ಶರತ್​ ಘಟನೆಯನ್ನು ಮುಚ್ಚಿಡಲು ಪತ್ನಿಯ ಮೃತದೇಹವನ್ನು ಆಸ್ಪತ್ರೆಗೆ ತಂದು ಹೈಡ್ರಾಮಾ ಮಾಡಿದ್ದ.

ಶರತ್ ನ ಹೈಡ್ರಾಮಾ ಕಂಡು ಅನುಮಾನಗೊಂಡ ಪೊಲೀಸರಿಗೆ, ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅಸಲಿ ಸತ್ಯ ತಿಳಿದುಬಂದಿತ್ತು. ಮೃತಳ ಮೇಲೆ ಹಲ್ಲೆ ನಡೆದಿದ್ದು, ಕುತ್ತಿಗೆಯ ಬಳಿ ಪಕ್ಕೆಲುಬು ಮುರಿದಿರುವುದು ವರದಿಯಲ್ಲಿ ತಿಳಿದುಬಂದಿತ್ತು. ಸದ್ಯ ಆರೋಪಿ ಶರತ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ಸಬ್​ ಇನ್ಸ್​ಪೆಕ್ಟರ್​ ಪತ್ನಿ ಅನುಮಾನಾಸ್ಪದ ಸಾವು : ಸಬ್​​ ಇನ್ಸ್​​ಪೆಕ್ಟರೊಬ್ಬರ ​​ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಆನೇಕಲ್​ನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಟೇಲ್ ಲೇಔಟ್​ನಲ್ಲಿ ಇಂದು ನಡೆದಿದೆ. ಮೃತ ಮಹಿಳೆಯನ್ನು ಸಬ್​ ಇನ್ಸ್​ಪೆಕ್ಟರ್​ ರಮೇಶ್​ ಅವರ ಪತ್ನಿ ಎಂದು ಗುರುತಿಸಲಾಗಿದೆ. ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಕೌಟುಂಬಿಕ ಕಲಹ: ಮಕ್ಕಳನ್ನು ಬಾವಿಗೆ ತಳ್ಳಿ, ಮನೆಗೆ ಬೆಂಕಿ ಹಚ್ಚಿಕೊಂಡು ಮಹಿಳೆಯ ಆತ್ಮಹತ್ಯಾ ಯತ್ನ!

Last Updated : Jun 3, 2023, 4:00 PM IST

ABOUT THE AUTHOR

...view details