ಕರ್ನಾಟಕ

karnataka

ಅಕೌಂಟೆಂಟ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​: ವಿವಾಹೇತರ ಸಂಬಂಧಕ್ಕಾಗಿ ಪತಿಯನ್ನೇ ಮುಗಿಸಿದ ಪತ್ನಿ!

By

Published : Apr 30, 2022, 5:04 PM IST

ಬೆಂಗಳೂರಿನಲ್ಲಿ ನಡೆದ ಖಾಸಗಿ ಸಂಸ್ಥೆ ಅಕೌಂಟೆಂಟ್ ಕೊಲೆ ಪ್ರಕರಣದಲ್ಲಿ ಆತನ ಪತ್ನಿಯೇ ಆರೋಪಿಯಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

wife-arrested-in-bengaluru-accountant-murder-case
ವಿವಾಹೇತರ ಸಂಬಂಧಕ್ಕಾಗಿ ಪತಿಯನ್ನೇ ಮುಗಿಸಿದ ಪತ್ನಿ

ಬೆಂಗಳೂರು:ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಕೌಂಟೆಂಟ್ ಕೊಲೆ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ವಿವಾಹೇತರ ಸಂಬಂಧಕ್ಕಾಗಿ ಪತ್ನಿಯೇ ಅಕೌಂಟೆಂಟ್​ನನ್ನು ಕೊಂದು ಪೊಲೀಸರ ದಿಕ್ಕುತಪ್ಪಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ತಡರಾತ್ರಿ ಚಾಕುವಿನಿಂದ ಯಶವಂತಪುರದ ಎಂ.ಕೆ ನಗರದ ಮನೆಯೊಂದರಲ್ಲಿ ಶಂಕರ್‌ರೆಡ್ಡಿ(35) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಮನೆಯಲ್ಲಿ ಪತ್ನಿ ರಾಣಿ (27) ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿ ಇದ್ದಾಗಲೇ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ವಿವಾಹೇತರ ಸಂಬಂಧಕ್ಕಾಗಿ ಹತ್ಯೆ:ಚಿತ್ತೂರಿನ ತನ್ನ ಗ್ರಾಮದ ಯುವಕನ ಜೊತೆ ವಿವಾಹೇತರ ಸಂಬಂಧ ಇರಿಸಿಕೊಳ್ಳಲು ಅಡ್ಡಿಯಾಗಿದ್ದ ಪತಿ ಶಂಕರ್​​ನನ್ನು ಕೊಲ್ಲಲು ರಾಣಿ ಪ್ಲಾನ್​ ಮಾಡಿದ್ದಳು. ಕೆಲಸ ಮುಗಿಸಿ ಮನೆಗೆ ಬಂದ ಪತಿ ರಾತ್ರಿ ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾಳೆ. ನಂತರ ತನ್ನ ಕೈಗೂ ಕೊಯ್ದು ಗಾಯ ಮಾಡಿಕೊಂಡಿದ್ದಳು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೋಷಕರನ್ನು ಕಂಡ ಮಕ್ಕಳು ತಕ್ಷಣ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದರು. ಬಳಿಕ ಯಶವಂತಪುರ ಠಾಣೆಗೆ ಮಾಹಿತಿ ಲಭ್ಯವಾಗಿತ್ತು.

ಪೊಲೀಸರು ರಾಣಿಯನ್ನು ಆಸ್ಪತ್ರೆಗೆ ಸೇರಿಸಿದಾಗ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪ್ರಕರಣದ ತನಿಖೆಯ ವೇಳೆ ಮಹಿಳೆ ಮೇಲೆ ಅನುಮಾನಗೊಂಡ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ನಿಜ ಸಂಗತಿ ಬಯಲಾಗಿದೆ.

ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಪತ್ನಿ:ಪತ್ನಿ ರಾಣಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ವಿಚಾರಣೆ ನಡೆಸಿದಾಗ ದುಷ್ಕರ್ಮಿಗಳು ಪತಿಗೆ ಚಾಕುವಿನಿಂದ ಇರಿದು, ತನ್ನ ಮಾಂಗಲ್ಯ ಕಳವು ಮಾಡಿದ್ದಾರೆ ಎಂದು ನಾಟಕವಾಡಿದ್ದಾಳೆ. ಆದರೆ ಸರ ಅವಳ ಬಳಿಯೇ ಇರುವುದನ್ನು ಕಂಡ ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದಾಗ, ಆಕೆಯೇ ಕೃತ್ಯ ಎಸಗಿರುವುದನ್ನು ಬಾಯ್ಬಿಟ್ಟಿದ್ದಾಳೆ. ತನ್ನ ಗ್ರಾಮದ ಯುವಕನ ಜೊತೆ ಹೊಂದಿದ್ದ ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಕಾರಣ ಆತ ಮಲಗಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿ ರಾಣಿಯನ್ನು ಬಂಧಿಸಿರುವ ಯಶವಂತಪುರ ಪೊಲೀಸರು, ತಲೆಮರೆಸಿಕೊಂಡಿರುವ ಪ್ರಿಯಕರನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ: ಪತ್ನಿ, ಮಕ್ಕಳು ಮನೆಯಲ್ಲಿರುವಾಗಲೇ ಕೃತ್ಯ!

ABOUT THE AUTHOR

...view details