ಬೆಂಗಳೂರು: ಶಾಸಕರು ರಾಜೀನಾಮೆ ನೀಡಿದಾಗ ಆರ್ಟಿಕಲ್,190 ಪ್ರಕಾರ ವಿಚಾರಣೆಗೆ ಬರಬೇಕೆಂದು ನೋಟಿಸ್ ನೀಡಿದ್ದೆ, ಆದ್ರೆ ಅವರು ಬರಲಿಲ್ಲ. ಮತ್ತೆ ನಾನ್ಯಾಕೆ ಅವರನ್ನು ಕರೆಯಬೇಕು ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.
ದೊಮ್ಮಲೂರಿನ ಅವರ ನಿವಾಸದ ಬಳಿ ಇಂದು ಮಾತನಾಡಿದ ಅವರು, ಶಾಸಕರನ್ನು ಕರೆಸಿ ವಿಚಾರಣೆ ಮಾಡಬೇಕಿತ್ತು ಅಂತ ಕರೆದಿದ್ದೆ, ಆದ್ರೆ ಅವರು ಬಂದಿಲ್ಲ. ಮತ್ತೆ, ಮತ್ತೆ ಅವರಿಗೆ ನೋಟಿಸ್ ಕೊಡುವುದಕ್ಕೆ ನನಗೆ ಮಾಡೋಕೆ ಕೆಲಸ ಇಲ್ವಾ. ಒಮ್ಮೆ ನೋಟಿಸ್ ಕೊಡಲಾಗಿದೆ, ಅಲ್ಲಿಗೆ ಆ ವಿಚಾರ ಮುಗಿದಿದೆ ಎಂದು ಹೇಳಿದರು.
ಸಹಜವಾಗಿ 31ರೊಳಗಾಗಿ ಧನ ವಿನಿಯೋಗ ಮಸೂದೆ ಪಾಸ್ ಮಾಡಿಕೊಳ್ಳೊದೇ ಹೋದರೆ ಸರ್ಕಾರ ಸ್ಥಗಿತವಾಗುತ್ತದೆ. ಸಂಬಳ ಕೂಡ ಕೊಡಬೇಕು. ಈ ರೀತಿಯ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದೆ ಯಾರು ಸರ್ಕಾರ ಮಾಡುತ್ತೀರೋ ಅವರು ಅಧಿವೇಶನ ಕರೆಬೇಕು ಅಂತ ಹೇಳಿದ್ದೇನೆ ಎಂದರು.
ಅತೃಪ್ತ ಶಾಸಕರ ಕೇಸ್ನ ತೀರ್ಪಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತೀರ್ಪಿನ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ನನಗೆ ವಿವೇಚನೆ ಇದೆ. ಸುಪ್ರೀಂಕೋರ್ಟ್ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ರಾಜೀನಾಮೆ ನೀಡಿದ ಶಾಸಕರಿಗೆ ಪರೋಕ್ಷ ಸಂದೇಶ ಕೊಟ್ಟರು.