ಕರ್ನಾಟಕ

karnataka

ಕೊರೊನಾ ಸೋಂಕು ಗೆದ್ದು ಬಂದ ಬೆಂಗಳೂರಿನ ವ್ಯಕ್ತಿ ಹೇಳಿದ್ದೇನು..? ವಿಡಿಯೋ..

By

Published : Jul 13, 2020, 8:24 PM IST

ಕೊರೊನಾದಿಂದಾಗಿ ಭೀತಿ ಆವರಿಸಿಕೊಳ್ಳುತ್ತಿರುವ ನಡುವೆ ಇಲ್ಲೊಬ್ಬರು ಕೊರೊನಾ ಕುರಿತ ತಮ್ಮ ಅನುಭವವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಬಳಿಕ ವಿಡಿಯೋದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

What did a Bangalore man say after recovered from  the Corona Infection? Video
ಕೊರೊನಾ ಸೋಂಕು ಗೆದ್ದು ಬಂದ ಬೆಂಗಳೂರಿನ ವ್ಯಕ್ತಿ ಹೇಳಿದ್ದೇನು..? ವಿಡಿಯೋ

ಬೆಂಗಳೂರು: ಕೊರೊನಾ ಬಗ್ಗೆ ಭೀತಿಗೊಂಡಿರುವವರಿಗೆ, ಕೊರೊನಾದಿಂದ ಗುಣಮುಖರಾದ ರೋಗಿಯೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂಡಿಯನ್ ಆರ್ಮಿಯಲ್ಲಿ ಟೆಕ್ನಿಷಿಯನ್ ಆಗಿರುವ ಆದಿತ್ಯ ಗಣೇಶಯ್ಯ ಎಂಬುವವರು ಕೊರೊನಾ ಗೆದ್ದು, ಇದೀಗ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕೊರೊನಾ ಸೋಂಕು ಗೆದ್ದು ಬಂದ ಬೆಂಗಳೂರಿನ ವ್ಯಕ್ತಿ ಹೇಳಿದ್ದೇನು..? ವಿಡಿಯೋ..

ಈ ಕುರಿತು ಮಾತನಾಡಿರುವ ಅವರು, ಪತ್ನಿ-ಮಗಳಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ ಉತ್ತಮ ರೀತಿಯ ಚಿಕಿತ್ಸೆ ದೊರೆತು ಗುಣಮುಖರಾಗಿದ್ದೇವೆ. ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್​​​​ ವಾರ್ಡ್​​ನಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಅಲ್ಲಿ ಎಲ್ಲ ಸೌಲಭ್ಯಗಳನ್ನೂ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮೊದಲು ಪತ್ನಿಗೆ ಜ್ವರ, ಕೆಮ್ಮು, ಮೈ-ಕೈ ನೋವಿತ್ತು. ನಂತರ ನಾನು ಕಚೇರಿಗೆ ರಜೆ ಹಾಕಿದ್ದೆ. ಒಂದು ದಿನದಲ್ಲಿ ನನಗೂ ಜ್ವರ ಬಂತು. 15ನೇ ತಾರೀಕಿನಂದು ಕೋರಮಂಗಲದ ಸರ್ಕಾರಿ ಫೀವರ್ ಕ್ಲಿನಿಕ್​​​​ನಲ್ಲಿ ಟೆಸ್ಟ್ ಮಾಡಿಸಿ, ಐಎಲ್​​​ಐ ರೋಗಲಕ್ಷಣ ಇರುವುದರಿಂದ ಔಷಧಿ ಪಡೆದು ಮನೆಗೆ ಬಂದೆವು. ಬಳಿಕ 17 ರಂದು ಮಗಳಿಗೂ ಜ್ವರ ಕಾಣಿಸಿಕೊಂಡಿತು.

18ರಂದು ಮನೆ ಬಳಿ ಆಶಾ ಕಾರ್ಯಕರ್ತೆಯರು ಬಂದು ಆಸ್ಪತ್ರೆಗೆ ದಾಖಲಿಸಲು ಹೇಳಿದರು. ಸಂಜೆ ವೇಳೆಗೆ ಆಂಬ್ಯುಲೆನ್ಸ್ ಬಂತು. ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಯ ಎರಡನೇ ಮಹಡಿಯ ವಾರ್ಡ್​ನಲ್ಲಿ ದಾಖಲಿಸಿದರು ಎಂದು ತಮ್ಮ ಅನುಭವ ಹಂಚಿಕೊಂಡರು.

ಆಸ್ಪತ್ರೆಯವರು ಎಲ್ಲ ಅಗತ್ಯ ವಸ್ತುಗಳನ್ನೂ ನೀಡಿದ್ದಾರೆ. ನಿತ್ಯ ಹಣ್ಣು, ರಾಗಿ, ರವೆ ಗಂಜಿ, 5 ತರಹದ ಮಾತ್ರೆಗಳನ್ನು ಕೊಡುತ್ತಿದ್ದರು. ಈಗ ವಾಪಸು ಬಂದು, 14 ದಿನದ ಹೋಂ ಕ್ವಾರಂಟೈನ್ ಕೂಡಾ ಮುಗಿದಿದೆ ಎಂದು ತಿಳಿಸಿದರು. ಒಟ್ಟಿನಲ್ಲಿ ಉಸಿರಾಟದ ಸಮಸ್ಯೆ ಬರುವವರೆಗೂ ಮನೆಯಲ್ಲಿ ಇರದೆ, ರೋಗಲಕ್ಷಣ ಬಂದ ಕೂಡಲೇ ಟೆಸ್ಟ್ ಮಾಡಿಸಿ ಚಿಕಿತ್ಸೆ ಪಡೆಯಿರಿ. ಅಕ್ಕಪಕ್ಕದ ಮನೆಯವರು ಏನೆಂದುಕೊಳ್ತಾರೋ ಎಂದು ತಲೆಕೆಡಿಸಿಕೊಳ್ಳಬೇಡಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ABOUT THE AUTHOR

...view details