ಕರ್ನಾಟಕ

karnataka

ವೀಕೆಂಡ್ ಕರ್ಫ್ಯೂ : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳು ಸಂಪೂರ್ಣ ಸ್ತಬ್ಧ

By

Published : Apr 24, 2021, 12:27 PM IST

Updated : Apr 24, 2021, 1:30 PM IST

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಿಸಿದ್ದು, ಇಂದಿನಿಂದ ಸೋಮವಾರ ಮುಂಜಾನೆಯವರೆಗೂ ನಗರ ಸೇರಿದಂತೆ ರಾಜ್ಯಾದ್ಯಂತ ಅಗತ್ಯ ಚಟುವಟಿಕೆಗಳು ಹೊರತು ಎಲ್ಲವೂ ಸ್ಥಗಿತಗೊಳ್ಳಲಿವೆ. ಇಂದು ಕರ್ಫ್ಯೂ ದಿನವಾದ್ದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ನಗರ, ಪಟ್ಟಣಗಳು ಸಂಪೂರ್ಣ ಸ್ತಬ್ಧವಾಗಿವೆ. ಪೊಲೀಸರು ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

Weekend Curfew across the Karnataka due to Covid
ರಾಜ್ಯಾದ್ಯಾಂತ ವೀಕೆಂಡ್ ಕರ್ಫ್ಯೂ

ಬೆಂಗಳೂರು : ವೀಕೆಂಡ್ ಕರ್ಫ್ಯೂ ಹಿನ್ನೆಲೆ ರಾಜ್ಯಾದ್ಯಂತ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಕೆಲವೆಡೆ ಅಗತ್ಯ ವಸ್ತು ಖರೀದಿಗೆ ಜನರು ಮುಗಿಬಿದ್ದಿದ್ದು, ಹೊರತುಪಡಿಸಿ ಬಹಿತೇಕ ಕಡೆ ಜನರು ರಸ್ತೆಗಿಳಿದಿಲ್ಲ.

ಧಾರವಾಡ : ವೀಕೆಂಡ್ ಕರ್ಫ್ಯೂಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್​ ಆಗಿವೆ. ವಾಹನಗಳ ಓಡಾಟ ಪ್ರಮಾಣವು ಸಹ ಎಂದಿನಂತಿಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಿ‌ ಜನರು ಮನೆಯತ್ತ ಮುಖ ಮಾಡಿದ್ದಾರೆ. ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ‌ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಮದುವೆ ಕಾರ್ಯಕ್ರಮಗಳಿಗೆ ನಿಗದಿತ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲು ಅವಕಾಶ ನೀಡಿದೆ.

ಹೊಸಪೇಟೆ : ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ನಗರದ ಎಪಿಎಂಸಿಯಲ್ಲಿ ಜನರು ತರಕಾರಿಗಾಗಿ ಮುಗಿಬಿದ್ದಿದ್ದರು. ಹಲವರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿಯಲ್ಲಿ‌ ನಿರತರಾಗಿದ್ದರು. ನೆಪ ಮಾತ್ರಕ್ಕೆ ಎಪಿಎಂಸಿ ಮುಖ್ಯ ದ್ವಾರಕ್ಕೆ ಬೀಗ ಜಡಿಯಲಾಗಿದ್ದು, ಇನ್ನೊಂದು ಬಾಗಿಲಿನ ಮೂಲಕ ವ್ಯಾಪಾರ ವಹಿವಾಟಿಗೆ ಅನಕೂಲ ಮಾಡಿಕೊಟ್ಟಿರುವುದು ಕಂಡು ಬಂತು.

ನಿಗಧಿತ ಅವಧಿಯಲ್ಲಿ ಹೊಸಪೇಟೆಯ ತರಕಾರಿ ಮಾರುಕಟ್ಟೆಯಲ್ಲಿ ಜನ ಜಂಗುಳಿ

ಬೀದರ್ : ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು, ಮಾರುಕಟ್ಟೆಗೂ ಕೂಡ ಜನ ಆಗಮಿಸಿಲ್ಲ. ಪ್ರಯಾಣಿಕರಿಲ್ಲದ ಕಾರಣ ಬಹುತೇಕ ಬಸ್​ಗಳು ರಸ್ತೆಗೆ ಇಳಿದಿಲ್ಲ. ಗಾಂಧಿ ಗಂಜ್ ತರಕಾರಿ ಮಾರುಕಟ್ಟೆ ಬೆಳಗ್ಗೆಯಿಂದಲೂ ಜನರಿಲ್ಲದೆ ಖಾಲಿ ಖಾಲಿಯಾಗಿತ್ತು. ಬೆಳಗ್ಗೆ 10 ಗಂಟೆವರೆಗೆ ಮಾರುಕಟ್ಟೆ ತೆರೆಯಲು ಅವಕಾಶ ನೀಡಲಾಗಿದ್ದರೂ, ಜನರು ಮಾತ್ರ ಖರೀದಿಗೆ ಬಂದಿಲ್ಲ.

ಮುದ್ದೇಬಿಹಾಳ :ಮುದ್ದೇಬಿಹಾಳ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಜನ ಸಂಚಾರ ವಿರಳವಾಗಿತ್ತು. ಅಗತ್ಯ ಸೇವೆಗಳಾದ ಹಾಲು, ಔಷಧಿ, ಪತ್ರಿಕೆ, ತರಕಾರಿ ಮೊದಲಾದ ಸಾಮಗ್ರಿಗಳ ಖರೀದಿಗೆ ಜನ ಹೊರಗಡೆ ಬಂದಿದ್ದರು. ಕಿರಾಣಿ ಸೇರಿ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕೆಲವೆಡೆ ತೆರೆದಿದ್ದ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಸಿಪಿಐ ಆನಂದ ವಾಘಮೋಡೆ, ಪಿಎಸೈ ಎಂ.ಬಿ. ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಪಟ್ಟಣದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಜನ ಸಂಖ್ಯೆ ವಿರಳವಾಗಿತ್ತು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೂ ಜನರಿಲ್ಲದ ಕಾರಣ ಬಸ್​ಗಳು​ ರಸ್ತೆಗಿಳಿದಿಲ್ಲ.

ಕಾರವಾರ : ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕಾರವಾರದಲ್ಲಿ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗ್ಗಿಬಿದ್ದಿದ್ದರು. ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆಗಳಿಗೆ ಗ್ರಾಹಕರು ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು. ಅಗತ್ಯ ವಸ್ತುಗಳು ಹೊರತುಪಡಿಸಿ, ಬಟ್ಟೆ ಅಂಗಡಿ, ಹೋಟೆಲ್ ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.

ಕರ್ಫ್ಯೂ ಹಿನ್ನೆಲೆ ಮೌನವಾಗಿರುವ ಮಹಾನಗರಗಳು

ಮೈಸೂರು: ಕರ್ಫ್ಯೂ ಹಿನ್ನೆಲೆ ದೇವರಾಜ ಮಾರುಕಟ್ಟೆ ಸಮೀಪವಿರುವ ಮಟನ್ ಮಾರ್ಕೆಟ್​​ಗೆ ಮಾಂಸ ಪ್ರಿಯರು ಬರಲಿಲ್ಲ. ಅಲ್ಲದೆ, ನಗರ ಸಾರಿಗೆ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಾರದ ಹಿನ್ನೆಲೆ ಬಸ್​ ಸಂಚಾರವೂ ಬಂದ್​ ಆಗಿದೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಹಾಗೂ ಪ್ರಯಾಣಕ್ಕೆ ತೊಂದರೆಯಾಗದಿರಲೆಂದು ವಿನಾಯಿತಿ ನೀಡಲಾಗಿದೆ. ಆದರೂ ಕೊರೊನಾ ಆತಂಕದಿಂದ ಸಾರ್ವಜನಿಕರೇ ರಸ್ತೆಗಿಳಿಯುತ್ತಿಲ್ಲ.

ಹಾವೇರಿ : ಹಾವೇರಿಯಲ್ಲೂ ಕರ್ಫ್ಯೂ ಹಿನ್ನೆಲೆ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿನ ದಿನಸಿ ಅಂಗಡಿಗಳೂ ಸೇರಿ ಎಲ್ಲೆಡೆ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಅಗತ್ಯ ವಸ್ತುಗಳ ಖರೀದಿಗೂ ಜನರು ಹೆಚ್ಚಾಗಿ ಬಂದಿಲ್ಲ. ಬಸ್ ನಿಲ್ದಾಣವೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.

ಕೋಲಾರ: ಜಿಲ್ಲೆಯಲ್ಲಿ ಕರ್ಫ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯ ಒಳಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ವಿನಾಃಕಾರಣ ರಸ್ತೆಗಿಳಿಯುವ ಜನರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದು, ಬೆರಳೆಣಿಕೆಯಷ್ಟು ವಾಹನ ಸಂಚಾರ ಬಿಟ್ಟರೆ ಎಲ್ಲವೂ ಬಂದ್ ಆಗಿವೆ. ಏಷ್ಯಾದ ದೊಡ್ಡ ಟೊಮೆಟೊ ಮಾರುಕಟ್ಟೆಗೆ ಬೀಗ ಹಾಕಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಂದ್ ಹಿನ್ನೆಲೆ, ಕೋಲಾರದ ಎಪಿಎಂಸಿ ಮಾರುಕಟ್ಟೆಯ ಹೊರಗೆ ಟ್ರಕ್​ಗಳು ಸಾಲುಗಟ್ಟಿ ನಿಂತಿವೆ. ಎಪಿಎಂಸಿ ಮಾರುಕಟ್ಟೆ ಸಮಿತಿಯು ಎರಡು ದಿನಗಳ ಕಾಲ ರಜೆ ಘೋಷಿಸಿದೆ.

ರಾಯಚೂರು: ನಗರದಲ್ಲಿ ಅಗತ್ಯ ವಸ್ತುಗಳು ಖರೀದಿಸಲು ಜನ ಆಗಮಿಸುವುದು ಹೊರತುಪಡಿಸಿ, ಉಳಿದಂತೆ ಅನಾವಶ್ಯಕ ಓಡಾಟವಿಲ್ಲ. ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿಗಳನ್ನು ಬೆಳಗ್ಗೆ ತೆರೆಯಲಾಗಿತ್ತು. ಔಷಧಿ ಅಂಗಡಿಗಳು ಮಾತ್ರ ತೆರೆಯಲಾಗಿದೆ.

ಕೊಪ್ಪಳ : ವೀಕೆಂಡ್ ಕರ್ಫ್ಯೂ ಮೊದಲ ದಿನ ಕೊಪ್ಪಳ ಸ್ತಬ್ಧಗೊಂಡಿದೆ. ಬೆಳಗ್ಗೆ 10 ಗಂಟೆಗೂ ಮೊದಲು ಜನರು ಹಾಗೂ ವಾಹನಗಳ ಓಡಾಟ ಕೊಂಚ ಜಾಸ್ತಿ ಇತ್ತು. 10 ಗಂಟೆಯವರೆಗೆ ತರಕಾರಿ ಸೇರಿ ಅಗತ್ಯ ವಸ್ತುಗಳ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಲಾಗಿತ್ತು. ಬಳಿಕ ಮೆಡಿಕಲ್ ಸೇರಿದಂತೆ ಕೆಲ ಅತ್ಯವಶ್ಯಕ ಅಂಗಡಿಗಳನ್ನು ಹೊರತುಪಡಿಸಿ, ಉಳಿದೆಲ್ಲವನ್ನು ಬಂದ್ ಮಾಡಿಸಲಾಗಿದೆ. ಜನರ ಅನಗತ್ಯ ಓಡಾಟ ನಿಯಂತ್ರಿಸಲು ಮುಖ್ಯ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಕೆಲ ಸವಾರರು ಪೊಲೀಸರ ಜೊತೆಗೆ ವಾಗ್ದಾದಕ್ಕಿಳಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೊಳ್ಳೇಗಾಲ : ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಲಾಗಿದ್ದ ಸಮಯ ಮುಗಿಯುತ್ತಿದ್ದಂತೆ ರಸ್ತೆಗಳಿದ ಪೊಲೀಸರು ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಅನಾವಶ್ಯಕವಾಗಿ ಓಡಾಡುತ್ತಿದ್ದ ಜನರು ಪೊಲೀಸರ ಕಂಡು ತಮ್ಮ ತಮ್ಮ ಮನೆ ಸೇರಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. 10 ಗಂಟೆಯ ಬಳಿಕ ಕೊಳ್ಳೇಗಾಲ ಸಂಪೂರ್ಣ ಸ್ತಬ್ಧವಾಯಿತು.

ಕಲಬುರಗಿ : ವೀಕೆಂಡ್ ಕರ್ಪ್ಯೂ ಹಿನ್ನೆಲೆ ಬೆಳಗ್ಗೆ ಲಾಠಿ ಹಿಡಿದು ಫೀಲ್ಡಿಗಿಳಿದ ಪೋಲೀಸರು ಸಿಟಿ ರೌಂಡ್ ಹೊಡೆಯುತ್ತಿದ್ದರು. ಇಂದು ಮತ್ತೆ ನಾಳೆ ಸಂಪೂರ್ಣ ಕರ್ಪ್ಯೂ ಇರುವ ಕಾರಣ ಯಾರು ಕೂಡ ರಸ್ತೆ ಮೇಲೆ ಅನಾವಶ್ಯಕವಾಗಿ ತಿರುಗಾಡುದಂತೆ ಪೋಲಿಸರು ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಮೈಕ್ ಮೂಲಕ ಸೂಚನೆ ನೀಡಿದರು. ಮೆಡಿಕಲ್, ಆಸ್ಪತ್ರೆ ಸೇರಿ ತುರ್ತು ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಆದರೂ ಕೆಲವೆಡೆ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದ ದೃಶ್ಯಗಳು ಕಂಡು ಬಂದವು.

ಚಾಮರಾಜನಗರ : ಕರ್ಫ್ಯೂಗೆ ಗಡಿ ಜಿಲ್ಲೆಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿರಳ ಜನ ಸಂಚಾರದಿಂದ ಸಂಪೂರ್ಣ ಸ್ತಬ್ಧವಾಗಿದೆ. ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಬಿಟ್ಟು ಉಳಿದ ಎಲ್ಲಾ ವ್ಯಾಪಾರ ವಹಿವಾಟು ಬಂದ್​ ಆಗಿವೆ. ಸರಕು ಸಾಗಾಣೆ ವಾಹನ ಹಾಗೂ ಸಾರಿಗೆ ಸಂಸ್ಥೆ ವಾಹನ ಓಡಾಟ ಬಿಟ್ಟರೆ ಆಟೋಗಳು, ಇನ್ನಿತರೆ ವಾಹನಗಳು ರಸ್ತೆಗೆ ಇಳಿಯದಿದ್ದರಿಂದ ಮುಖ್ಯರಸ್ತೆಗಳು ಬಿಕೋ ಎನ್ನುತ್ತಿದ್ದವು. ಜನ ಸಂಚಾರ ತೀರಾ ವಿರಳವಾಗಿದ್ದರಿಂದ ಚಾಮರಾಜನಗರದಲ್ಲಿ ನಿಶ್ಯಬ್ಧ ವಾತವಾರಣ ನಿರ್ಮಾಣವಾಗಿತ್ತು.

ಮಂಡ್ಯ:ವಿಕೆಂಡ್ ಕರ್ಫ್ಯೂ ವೇಳೆ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಮಾಸ್ಕ್ ಧರಿಸದೆ ಡಬಲ್, ತ್ರಿಬಲ್ ರೈಡಿಂಗ್ ಮಾಡುತ್ತಿದ್ದವರ ಬೈಕ್ ಸೀಜ್ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ವಾಹನ ತಪಾಸಣೆ ಮಾಡಿ ದಂಡ ವಿಧಿಸಿ ವಾಪಸ್​​​ ಕಳಿಸಲಾಗುತ್ತಿದೆ.

ಪುತ್ತೂರು : ಪುತ್ತೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ 10 ಗಂಟೆವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಎಲ್ಲವೂ ಬಂದ್ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಬಸ್ ಸ್ಥಳೀಯ ಬಸ್​​​​​ ಸಂಚಾರ ಸ್ಥಗಿತಗೊಂಡಿದೆ. ಪುತ್ತೂರು ಮಾರ್ಗವಾಗಿ ದೂರ ಊರುಗಳಿಗೆ ಮಾತ್ರ ಬಸ್​ ತೆರಳಿದವು.

ಆನೇಕಲ್ : ಆನೇಕಲ್​ನಲ್ಲಿ ಕರ್ಫ್ಯೂ ಹಿನ್ನೆಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸರು ಪ್ರತಿ ವಾಹನವನ್ನು ತಪಾಸಣೆ ಮಾಡಿ ಬಿಡುತ್ತಿದ್ದು, ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವವರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಇದರಿಂದ ಆನೇಕಲ್ ಬಹುತೇಕ ಸ್ತಬ್ಧವಾಗಿದೆ.

ಸುಳ್ಯ, ಕಡಬ : ಸುಳ್ಯ ಹಾಗೂ ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ, ನೆಲ್ಯಾಡಿ, ಉಪ್ಪಿನಂಗಡಿಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬೆಳಗ್ಗೆ 10 ಗಂಟೆ ಬಳಿಕ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಸುಳ್ಯ ಕೇರಳ ಸಂಪರ್ಕಿಸುವ ಗಡಿ ತಪಾಸಣಾ ಕೇಂದ್ರ ಹಾಗೂ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಚೆಕ್ ಪೋಸ್ಟ್​ನಲ್ಲೂ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಿದ್ದಾರೆ.

Last Updated : Apr 24, 2021, 1:30 PM IST

ABOUT THE AUTHOR

...view details