ಕರ್ನಾಟಕ

karnataka

ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ವಿಶ್ವಾಸವಿದೆ: ಬಿ.ಎಸ್.ಯಡಿಯೂರಪ್ಪ

By

Published : Apr 10, 2023, 9:23 PM IST

Updated : Apr 10, 2023, 10:18 PM IST

ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಬೆಂಗಳೂರು : ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆ ಪಟ್ಟಿ ಬಿಡುಗಡೆ ಆಗಲಿದೆ. 200 ಅಭ್ಯರ್ಥಿಗಳ ಆಸುಪಾಸಿನಲ್ಲಿ ಪಟ್ಟಿ ಪ್ರಕಟಗೊಳ್ಳಲಿದ್ದು, ಯಾವುದೇ ಗೊಂದಲ ಇಲ್ಲ. ವಿಳಂಬಕ್ಕೆ ಬಂಡಾಯದ ಬಿಸಿ ಕಾರಣವೂ ಅಲ್ಲ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಇಂದು ನವದೆಹಲಿಯಿಂದ ವಾಪಸಾದ ನಂತರ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರ ಜೊತೆ ಸುದೀರ್ಘ ಚರ್ಚೆ ಆಗಿದೆ. ಸೀಟುಗಳ ಹಂಚಿಕೆ ಬಗ್ಗೆ ಅಂತಿಮವಾದ ಮಾತುಕತೆ ಆಗಿದೆ. 25-30 ಕ್ಷೇತ್ರ ಬಿಟ್ಟು ಎಲ್ಲಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲೇ ಹೆಸರು ಘೋಷಣೆ ಆಗಲಿದೆ ಎಂದರು.

ಕನಸು ಕಾಣುವವರಿಗೆ ಅವಕಾಶ ಇಲ್ಲ-ಬಿಎಸ್​ವೈ:ಅಭ್ಯರ್ಥಿಗಳ ಹೆಸರು ಕೇಳಿದರೆ ನೂರಕ್ಕೆ ಸರ್ಕಾರ ರಚನೆ ಮಾಡುತ್ತೇವೆ ಅನ್ನೋ ನಂಬಿಕೆ ಇದೆ. ಒಳ್ಳೆಯ ಆಯ್ಕೆ ಮಾಡಿದ್ದೇವೆ. ನಾವೇ ಸರ್ಕಾರ ರಚನೆ ಮಾಡುವ ವಿಶ್ವಾಸವಿದೆ. ನಾವು ಮುಖ್ಯಮಂತ್ರಿ, ನಾವು ಮಂತ್ರಿ ಅಂತ ಕನಸು ಕಾಣುವವರಿಗೆ ಅವಕಾಶ ಇಲ್ಲ ಎಂದು ಪ್ರತಿಪಕ್ಷಗಳಿಗೆ ಬಿಎಸ್​ವೈ ಟಾಂಗ್ ನೀಡಿದರು.

ಎಲ್ಲರ ಜೊತೆ ಚರ್ಚಿಸಿ ಪಟ್ಟಿ ಅಂತಿಮ: ಬಂಡಾಯದ ಬಿಸಿ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ತಡವಾಗುತ್ತಿದೆ ಎನ್ನುವ ಆರೋಪ ತಳ್ಳಿಹಾಕಿದ ಯಡಿಯೂರಪ್ಪ, ಬಂಡಾಯದ ಬಿಸಿ ಪ್ರಶ್ನೆಯೇ ಇಲ್ಲ. ಎರಡು ಮೂರು ದಿನಗಳಿಂದ ಎಲ್ಲರ ಜೊತೆ ಚರ್ಚೆ ಮಾಡಿಯೇ ಪಟ್ಟಿ ಅಂತಿಮ ಮಾಡುವ ಕೆಲಸ ಆಗಿದೆ. ಅತೃಪ್ತರಾದವರು ಇದ್ದರೆ ಕರೆದು ಸಮಾಧಾನ ಮಾಡುತ್ತೇವೆ. ನನ್ನ ಪ್ರಕಾರ ಯಾರೂ ಅತೃಪ್ತರಿಲ್ಲ. ಯಾರಾದರೂ ಒಂದಿಬ್ಬರು ಇದ್ದರೆ ಕರೆದು ಮಾತನಾಡಿ ಬೇರೆ ಅವಕಾಶ ನೀಡುತ್ತೇವೆ ಎಂದು ಹೇಳಿದರು.

70 ವರ್ಷ ಮೀರಿದವರಿಗೆ ಟಿಕೆಟ್ ಇಲ್ಲ ಅಂತಾ ಯಾವುದೇ ಚರ್ಚೆಗಳಾಗಿಲ್ಲ. ಅದು ಸುಳ್ಳು ಸುದ್ದಿ. ಬಿಜೆಪಿ ಅತೃಪ್ತರಿಗೆ ಜೆಡಿಎಸ್ ಗಾಳ ಹಾಕುತ್ತಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಾ, ಇದಕ್ಕೆ ನಾನು ಏನು ಉತ್ತರ ಕೊಡಲಿ ಎಂದು ಮರು ಪ್ರಶ್ನೆ ಹಾಕಿದರು.

ಇದನ್ನೂ ಓದಿ:ನಾಳೆ ಅಥವಾ ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಸಿಎಂ ಬೊಮ್ಮಾಯಿ

Last Updated : Apr 10, 2023, 10:18 PM IST

ABOUT THE AUTHOR

...view details